ಭಾರತಕ್ಕೆ ಉಕ್ರೇನ್ ಸಚಿವೆ: ರಷ್ಯಾ-ಉಕ್ರೇನ್ ಯದ್ಧ ಸಂಧಾನ?
ನವದೆಹಲಿ: ಅತ್ತ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಧಗಧಗಿಸುತ್ತಿದ್ದರೆ, ಇತ್ತ ಉಕ್ರೇನ್ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ 4 ದಿನಗಳ ವಿಶೇಷ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಹಲವು ವಿಚಾರಗಳ ಚರ್ಚೆಗಾಗಿ ಎಮಿನಿ ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದು, ಯುದ್ಧ ಸಂಧಾನ ನಡೆಯುತ್ತಾ? ಎಂಬ ಕುತೂಹಲ ದುಪ್ಪಟ್ಟಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಈಗಾಗಲೇ ಬರೋಬ್ಬರಿ 1 ವರ್ಷ ಕಳೆದಿದೆ. ಕೆಲವೇ ವಾರದಲ್ಲಿ ಯುದ್ಧ ಮುಗಿಯಲಿದೆ ಎಂಬ ವಿಶ್ವಾಸದಲ್ಲಿದ್ದ ಜಗತ್ತಿಗೆ ಇದು ಬೇಸರ ತರಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಹೆಚ್ಚಾದಷ್ಟು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಯುದ್ಧಕ್ಕೆ ಅಂತ್ಯ ಹಾಡಲು ಭಾರತವೂ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಬಳಿ ಉಕ್ರೇನ್ ಮನವಿ ಮಾಡುತ್ತಿದೆ. ಇದೇ ಹೊತ್ತಲ್ಲಿ ಉಕ್ರೇನ್ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ ಭಾರತಕ್ಕೆ ಬಂದಿರುವುದು ಜಗತ್ತಿನ ಗಮನ ಸೆಳೆದಿದೆ.

ಸಂಧಾನ ನಡೆಸಲು ಭಾರತಕ್ಕೆ ಮನವಿ
ಈಗಾಗಲೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ರಷ್ಯಾ ಜೊತೆ ಮಾತನಾಡಿ ಯುದ್ಧ ಅಂತ್ಯಗೊಳಿಸಲು ಮನವಿ ಮಾಡಿದ್ದಾರೆ. ಹಾಗೇ ಯುರೋಪಿನ ಇತರ ರಾಷ್ಟ್ರಗಳಿಂದಲೂ ಈ ವಿಚಾರದಲ್ಲಿ ಭಾರತ ಮಧ್ಯಪ್ರವೇಶ ಮಾಡಬೇಕು ಎಂಬ ಬೇಡಿಕೆ ಇಟ್ಟಿವೆ. ಪರಿಸ್ಥಿತಿ ಹೀಗೆ ಜಟಿಲವಾಗಿರುವ ಸಂದರ್ಭದಲ್ಲಿ ಭಾರತ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ. ಏಕೆಂದರೆ ಒಂದು ಕಡೆ ರಷ್ಯಾ ಜೊತೆಗೆ ಅತ್ಮೀಯ ಸ್ನೇಹ ಬೆಳೆಸಿಕೊಂಡಿರುವ ಭಾರತ, ಈಗ ಉಕ್ರೇನ್ ಪರ ನಿಲ್ಲುವುದು ಕಷ್ಟದ ಸಂಗತಿ.
ಉಕ್ರೇನ್ನ ಸಚಿವರೊಬ್ಬರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷ. ಅದರಲ್ಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ನಂತರ ಇದೇ ಮೊದಲು ಪೂರ್ವ ಯುರೋಪ್ ರಾಷ್ಟ್ರದ ಪ್ರತಿನಿಧಿಯೊಬ್ಬರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಎಮಿನಿ ಝಪರೋವಾ ಮೊದಲಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ಅವರೊಂದಿಗೆ ಚರ್ಚೆ ನಡೆಸಲಿದ್ದು, ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್ ಭೇಟಿಗೆ ಪಿಎಂ ಮೋದಿಗೆ ಆಹ್ವಾನ?
ಮತ್ತೊಂದು ಕಡೆ ಭಾರತದ ಉಪ ಭದ್ರತಾ ಸಲಹೆಗಾರ ವಿಕ್ರಮ್ ಮಿಶ್ರಿ ಅವರನ್ನೂ ಎಮಿನಿ ಝಪರೋವಾ ಭೇಟಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಹಾಗೇ ಉಕ್ರೇನ್ಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಮಿನಿ ಆಹ್ವಾನ ನೀಡುವ ಸಾಧ್ಯತೆ ಇದೆ. ಹಾಗೇ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಭೇಟಿ ಮಾಡಿ ಎಮಿನಿ ಮಾತುಕತೆ ನಡೆಸಲಿದ್ದಾರೆ.
ರಷ್ಯಾ ಜೊತೆ ಭಾರತದ ಸಂಬಂಧ
ಇದಕ್ಕೆ ಹೇಳುವುದು ಜಾಗತಿಕವಾಗಿ ಯಾವುದೇ ರಾಷ್ಟ್ರದ ದ್ವೇಷ ಕಟ್ಟಿಕೊಳ್ಳದಿದ್ದರೆ, ಆರ್ಥಿಕ ಅಭಿವೃದ್ಧಿ ಸುಲಭ ಅಂತಾ. ಭಾರತದ ಜಾಣ ನಡೆ ಇಲ್ಲಿ ಮತ್ತೆ ಲಾಭ ತಂದುಕೊಟ್ಟಿದೆ. ಅತ್ತ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಜೊತೆ ಸಂಬಂಧವನ್ನು ವೃದ್ಧಿಸಿ, ಇತ್ತ ರಷ್ಯಾ ಜೊತೆಗಿನ ಸ್ನೇಹ ಕಾಪಾಡಿಕೊಂಡು ಭಾರತ ಆರ್ಥಿಕವಾಗಿ ಲಾಭ ಪಡೆದುಕೊಂಡಿದೆ. ಆದರೆ ಭಾರತದ ವಿಚಾರದಲ್ಲಿ ಉಕ್ರೇನ್ ಮಾತ್ರ ಇಷ್ಟು ಮುಕ್ತವಾಗಿ ನಡೆದುಕೊಳ್ಳುತ್ತಿಲ್ಲ. ಜಾಗತಿಕ ಮಟ್ಟದಲ್ಲೂ ಕಳೆದ ಒಂದು ವರ್ಷದಿಂದ ಭಾರತದ ವಿರುದ್ಧ ಪರೋಕ್ಷವಾಗಿ ಕೆಂಡ ಕಾರಿದೆ ಉಕ್ರೇನ್.

ಇದೆಲ್ಲವನ್ನೂ ಗಮನಿಸಿ ಹೇಳುವುದಾದರೆ ಉಕ್ರೇನ್ ಯಾವುದೋ ಬಲವಾದ ಉದ್ದೇಶ ಇಟ್ಟುಕೊಂಡೇ ಭಾರತದ ಜೊತೆ ಮಾತುಕತೆಗೆ ಬಂದಂತೆ ಕಾಣುತ್ತಿದೆ. ಆದರೆ ರಷ್ಯಾ ಜೊತೆ ತನ್ನ ಆತ್ಮೀಯತೆಯನ್ನು ಭಾರತ ಉಳಿಸಿಕೊಳ್ಳುವುದು ಪಕ್ಕಾ. ಇದರ ಜೊತೆಯಲ್ಲಿ ಉಕ್ರೇನ್ನೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಬಹುದು.












Click it and Unblock the Notifications