ಭೀಕರ ಬರಗಾಲ.. ಹನಿ ಹನಿ ನೀರಿಗೂ ಎದುರಾಯ್ತು ತಾತ್ವರ! ಸಂಕಷ್ಟದ ಸುಳಿಯಲ್ಲಿ ಕೋಟ್ಯಂತರ ಜನ?
ಕೀವ್: 3 ವಾರದ ಹಿಂದಿನ ಮಾತಿದು, ಅಲ್ಲಿನ ಜನಕ್ಕೆ ಎಷ್ಟು ಬೇಕೋ ಅಷ್ಟು ನೀರಿತ್ತು. ಜನ ಕೂಡ ಆರಾಮವಾಗಿ ಜೀವನ ನಡೆಸುತ್ತಿದ್ದರು. ಆದರೆ ಜೂನ್ 6ರ ಮಧ್ಯರಾತ್ರಿ ನಡೆಯಬಾರದ ಘಟನೆ ಒಂದು ನಡೆದೇ ಹೋಗಿತ್ತು. ಅಲ್ಲಿಂದ ಇಲ್ಲಿಯ ತನಕ ಹನಿ ಹನಿ ನೀರಿಗೂ ಪ್ರಜೆಗಳು ಪರದಾಡುತ್ತಿದ್ದಾರೆ. ದಿಢೀರ್ ಎದುರಾದ ಬರ ಕೋಟ್ಯಂತರ ಜನರ ಜೀವಕ್ಕೆ ಕುತ್ತು ತಂದಿದೆ.
ಕೋಳಿ ಜಗಳದಂತೆ ಶುರುವಾಗಿದ್ದ ರಷ್ಯಾ, ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಅದರಲ್ಲೂ ಕಳೆದ ಕೆಲ ತಿಂಗಳಿಂದ ರಷ್ಯಾ ಮತ್ತು ಉಕ್ರೇನ್ ವಿನಾಶಕಾರಿ ಅಸ್ತ್ರಗಳನ್ನ ಬಳಸಿ ಒಬ್ಬರ ಮೇಲೆ ಒಬ್ಬರು ದಾಳಿ ಮಾಡುತ್ತಿದ್ದಾರೆ. ಈ ಹೊತ್ತಲ್ಲಿ ಜೂನ್ 6ರ ಮಧ್ಯ ರಾತ್ರಿ ವೇಳೆ ಭೀಕರ ಬಾಂಬ್ & ಸ್ಫೋಟಕ ಬಳಸಿ ಖೆರ್ಸನ್ ಪ್ರಾಂತ್ಯದ ಕಖೌಕಾ ಡ್ಯಾಂ ಬ್ಲಾಸ್ಟ್ ಮಾಡಿದ್ದರು. ಸ್ಫೋಟದ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವೆ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದ್ಕಡೆ ನೀರು ತುಂಬಿ ನಳನಳಿಸುತ್ತಿದ್ದ ಜಾಗದಲ್ಲಿ ಭೀಕರ ಬರ ಎದುರಾಗಿದೆ. ಜನ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ (Russia Ukraine War).

ಕುಡಿಯಲು ನೀರಿಲ್ಲ, ಮನೆಗಳು ಉಳಿದಿಲ್ಲ!
ಕಖೌಕಾ ಡ್ಯಾಂ ನಿರ್ಮಿಸಿದ್ದು 1956ರಲ್ಲಿ, ಹೀಗೆ ಅತ್ಯಂತ ಹಳೇ ಜಲಾಶಯಕ್ಕೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲಾಗಿತ್ತು. ನೂರಾರು ಟಿಎಂಸಿ ನೀರನ್ನು ಈ ಜಲಾಶಯ ತನ್ನಲ್ಲಿ ಹಿಡಿದು ಇಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಉಕ್ರೇನ್ನ ಲಕ್ಷಾಂತರ ಎಕರೆ ಜಾಗಕ್ಕೆ ಡ್ಯಾಂನ ನೀರೇ ಆಸರೆಯಾಗಿತ್ತು. ಅಲ್ಲದೆ ಕೋಟ್ಯಂತರ ಜನರಿಗೆ ಕುಡಿಯುವ ನೀರು ಕೂಡ ಇಲ್ಲಿಂದ ಸಪ್ಲೈ ಆಗುತ್ತಿತ್ತು. ಆದರೆ ದಿಢೀರ್ ಡ್ಯಾಂ ಹೊಡೆದು ಹೋಗಿದೆ. ಹೀಗಾಗಿ ಜನರಿಗೆ ಏನು ಮಾಡುವುದು ತೋಚುತ್ತಿಲ್ಲ. ಬರದಿಂದ ಕುಡಿಯುವ ನೀರಿಗೂ ಜನ ಅಲೆದಾಡುತ್ತಿದ್ದಾರೆ. ಹಾಗೇ ಡ್ಯಾಂ ಬ್ಲಾಸ್ಟ್ ಆದ ಬಳಿಕ ನೀರು ಎಲ್ಲೆಲ್ಲೂ ನಿಂತುಬಿಟ್ಟಿದೆ, ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ.
🥫Food
— United Nations (@UN) June 22, 2023
🧼Hygiene kits
💧Drinking water
💊Medical supplies
In Ukraine, the UN and humanitarian partners are working tirelessly to deliver aid to people impacted by the Kakhovka Dam. https://t.co/sh6H31Lgqm pic.twitter.com/5wfrslQDrc
ಉಕ್ರೇನ್ ಸಮುದ್ರಕ್ಕೂ ಎದುರಾಯ್ತು ಕಂಟಕ
ಡ್ಯಾಂ ಬ್ಲಾಸ್ಟ್ ಆಗಿರುವ ನದಿ ತುಂಬಾ ಉದ್ದ ಹರಿಯುತ್ತದೆ. ಈ ಕಾರಣಕ್ಕೆ ಡ್ಯಾಂನಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಏಕಾಏಕಿ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ, ನದಿಯ ಸುತ್ತಮುತ್ತ ಕೈಗಾರಿಕೆಗಳು ಇಟ್ಟಿದ್ದ ಸುಮಾರು 150 ಟನ್ಗೂ ಹೆಚ್ಚು ಇಂಜಿನ್ ಆಯಿಲ್ ನದಿ ಪಾಲಾಗಿತ್ತು. ಡ್ನಿಪ್ರೋ ನದಿ ನೀರು ನೇರ ಸಮುದ್ರಕ್ಕೆ ಸೇರಿದ್ದ ಹಿನ್ನೆಲೆ ಜಲಚರಗಳ ಸ್ಥಿತಿ ಕೂಡ ಕಂಟಕಕ್ಕೆ ಸಿಲುಕಿದೆ. ಉಕ್ರೇನ್ನ ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದ ಸಾಕಷ್ಟು ವೃದ್ಧರು ಈ ಘಟನೆಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಅತ್ತ ಗಡಿ ಭಾಗದಲ್ಲಿ ಯುದ್ಧ ತೀವ್ರಗೊಳ್ಳುತ್ತಿದೆ, ಇತ್ತ ನೀರು ಸಿಗದೆ ಜನರು ಪರದಾಡುತ್ತಿದ್ದಾರೆ.
ಯಾರದ್ದೋ ತಪ್ಪು.. ಇನ್ಯಾರಿಗೋ ಶಿಕ್ಷೆ..!
ಎರಡೂ ರಾಷ್ಟ್ರಗಳ ನಡುವೆ ಹಿಂಸಾಚಾರ ನಡೆಯುತ್ತಿದ್ದು, ಸಾಮಾನ್ಯರ ಜೀವವು ಅಪಾಯಕ್ಕೆ ಸಿಲುಕಿದೆ. ಇಷ್ಟಾದರೂ ಜಗತ್ತು ಬುದ್ಧಿ ಕಲಿಯುತ್ತಿಲ್ಲ, ಪಾಶ್ಚಿಮಾತ್ಯ ರಾಷ್ಟ್ರಗಳು ಅತ್ತ ದಾಳ ಉರುಳಿಸಲು ಯುದ್ಧದಲ್ಲಿ ಉಕ್ರೇನ್ ಪರ ನಿಂತಿದ್ದಾರೆ ಎಂಬ ಆರೋಪವಿದೆ. ಇತ್ತ ಸಂಧಾನ ನಡೆಯುತ್ತಿಲ್ಲ, ಈ ಕಾರಣಗಳಿಂದ ರಷ್ಯಾ & ಉಕ್ರೇನ್ ಯುದ್ಧ ಇನ್ನಷ್ಟು ಭೀಕರ ಸ್ವರೂಪ ಪಡೆಯುವುದು ಗ್ಯಾರಂಟಿ. ಹಾಗೇ ಜನ ಯಾರದ್ದೋ ತಪ್ಪಿಗೆ ಭೀಕರ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ವಿಶ್ವಸಂಸ್ಥೆ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದಿದೆ.

ಹೀಗೆ ಯುರೋಪ್ ರಾಷ್ಟ್ರಗಳ ಮಧ್ಯೆ ಭೀಕರ ಯುದ್ಧವೊಂದು ವಿನಾಶ ಸೃಷ್ಟಿಮಾಡುತ್ತಿದೆ. 2 ಮಹಾಯುದ್ಧ ನೋಡಿರುವ ಜಗತ್ತಿಗೆ ಮತ್ತೊಂದು ಮಹಾಯುದ್ಧ ಆಘಾತ ನೀಡುತ್ತಿದೆ. ಆದ್ರೆ ಉಕ್ರೇನ್ ಜಲಾಶಯ ಸ್ಫೋಟ ಮಾಡಿದ್ದು ಯಾರು? ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಏಕೆಂದರೆ ರಷ್ಯಾ ಕೂಡ ಈ ಆರೋಪವನ್ನು ಒಪ್ಪಿಕೊಂಡಿಲ್ಲ, ಉಕ್ರೇನ್ ಕೂಡ ಆರೋಪ ಒಪ್ಪಿಕೊಂಡಿಲ್ಲ. ಆದರೆ ಸಂಕಷ್ಟಕ್ಕೆ ಸಿಲುಕಿದ ಜನರು ಮಾತ್ರ ಹಿಡಿಶಾಪ ಹಾಕುತ್ತಿರುವುದು ಪಕ್ಕಾ.












Click it and Unblock the Notifications