ಜನರಿಗೆ ನರಕಯಾತನೆ: ಪ್ರತಿ 30 ನಿಮಿಷಕ್ಕೊಮ್ಮೆ ರಷ್ಯಾದ ದಾಳಿ!
ಕೀವ್, ಮಾರ್ಚ್ 11: ಉಕ್ರೇನ್ನ ಮರಿಯುಪೋಲ್ನಲ್ಲಿ ಸಿಕ್ಕಿಬಿದ್ದಿರುವ ನಾಗರಿಕರು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಪ್ರತಿ 30 ನಿಮಿಷಗಳಿಗೊಮ್ಮೆ ರಷ್ಯಾವು ಇಲ್ಲಿ ದಾಳಿಯನ್ನು ನಡೆಸುತ್ತಿದೆ. ಇಲ್ಲಿಂದ ಜನರನ್ನು ಸ್ಥಳಾಂತರ ಮಾಡಲು ಸಾಧ್ಯವಾಗದಂತಹ ಸ್ಥಿತಿಯನ್ನು ರಷ್ಯಾ ನಿರ್ಮಾಣ ಮಾಡಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾರಿಯುಪೋಲ್ನಲ್ಲಿ ಸುಮಾರು 400,000 ಜನರು ಉಳಿದುಕೊಂಡಿದ್ದಾರೆ. ಅಲ್ಲಿನ ಮೇಯರ್ ವಾಡಿಮ್ ಬಾಯ್ಚೆಂಕೊ ರಷ್ಯಾದ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, "ನಿರ್ದಯವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಪಾರ್ಟ್ಮೆಂಟ್ ಕಟ್ಟಡಗಳ ಮೇಲೆ ದಾಳಿ ಮಾಡುವುದನ್ನು ರಷ್ಯಾವು ಮುಂದುವರೆಸಿದೆ," ಎಂದು ಹೇಳಿದ್ದಾರೆ.
"ಪ್ರತಿ 30 ನಿಮಿಷಗಳಿಗೊಮ್ಮೆ, ವಿಮಾನಗಳು ಮಾರಿಯುಪೋಲ್ ನಗರದ ಮೇಲೆ ಬಂದು ವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿದೆ, ನಾಗರಿಕರನ್ನು ಕೊಲ್ಲುತ್ತಿದೆ. ವೃದ್ಧರು, ಮಹಿಳೆಯರು, ಮಕ್ಕಳು ಎಲ್ಲರನ್ನೂ ಕೊಲ್ಲುತ್ತಿದೆ," ಎಂದು ಮಾರಿಯುಪೋಲ್ನ ಮೇಯರ್ ವಾಡಿಮ್ ಬಾಯ್ಚೆಂಕೊ ಆನ್ಲೈನ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಹಾಗೆಯೇ "ಇದು ಇಂದು ರಷ್ಯಾದ ಸೈನ್ಯದ ಶ್ರೇಷ್ಠತೆಯೇ?," ಎಂದು ಪ್ರಶ್ನೆ ಮಾಡಿದ್ದಾರೆ.

ಜನರನ್ನು ನಾಶ ಮಾಡುವ ಉದ್ಧೇಶ
ಶೆಲ್ ದಾಳಿಯ ನಡುವೆ, ಗುರುವಾರ ಒಬ್ಬ ನಾಗರಿಕನೂ ಮರಿಯುಪೋಲ್ನಿಂದ ಹೊರಬರಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಯರ್ಗೆ ಸಲಹೆಗಾರರಾದ ಪೆಟ್ರೋ ಆಂಡ್ರುಶೆಂಕೊ ಈ ಬಗ್ಗೆ ಮಾಹಿತಿ ನೀಡಿದ್ದು, "ರಷ್ಯನ್ನರು ನಮ್ಮ ಜನರನ್ನು ಸಂಪೂರ್ಣವಾಗಿ ನಾಶ ಮಾಡಲು ಬಯಸಿದ್ದಾರೆ. ಯಾವುದೇ ಸ್ಥಳಾಂತರ ಪ್ರಕ್ರಿಯೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ," ಎಂದು ತಿಳಿಸಿದರು.

ಮಾರಿಯುಪೋಲ್ ಪ್ರಾಮುಖ್ಯತೆ ಏನು?
ಉಕ್ರೇನ್ನಲ್ಲಿ ಮಾರಿಯುಪೋಲ್ ಪ್ರಮುಖವಾದ ಪ್ರದೇಶವಾಗಿದೆ. ಇದನ್ನು ವಶಕ್ಕೆ ಪಡೆದರೆ ರಷ್ಯಾಕ್ಕೆ ಪೂರ್ವದಲ್ಲಿ ಮಾಸ್ಕೋ ಪರವಾದ ಎನ್ಕ್ಲೇವ್ಗಳನ್ನು ಮತ್ತು ದಕ್ಷಿಣಕ್ಕೆ ರಷ್ಯಾಕ್ಕೆ ಸೇರಿಸಿದ ಕ್ರೆಮಿಯಾವನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಉಕ್ರೇನ್ ಅಧಿಕಾರಿ ಪ್ರಕಾರ ರಷ್ಯಾದ 10 ದಿನಗಳ ಮುತ್ತಿಗೆ ಕನಿಷ್ಠ 1,300 ಸಾವುಗಳಿಗೆ ಕಾರಣವಾಗಿದೆ. ವಿಶ್ವಸಂಸ್ಥೆಯು ಗುರುವಾರ ಉಕ್ರೇನ್ನಾದ್ಯಂತ 41 ಮಕ್ಕಳು ಸೇರಿದಂತೆ 549 ನಾಗರಿಕರ ಸಾವುಗಳನ್ನು ದಾಖಲು ಮಾಡಿದೆ ಎಂದು ಹೇಳಿದೆ. ನಿಜವಾದ ಸಂಖ್ಯೆಯು ಇದಕ್ಕೂ ಅಧಿಕವಾಗಿದೆ ಎಂದು ನಂಬಲಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ ಹೇಳುವುದು ಏನು?
ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಪ್ರಕಾರ, ರಷ್ಯಾದ ದಾಳಿಗಳು ನಗರಕ್ಕೆ ಆಹಾರ, ನೀರು ಮತ್ತು ಔಷಧವನ್ನು ಕಳುಹಿಸುವ ಹೊಸ ಪ್ರಯತ್ನಗಳನ್ನು ಕೂಡಾ ವಿಫಲಗೊಳಿಸಿವೆ. ಅವರು ಗುರುವಾರ ನಗರಕ್ಕೆ ಜನರಿಗೆ ಬೇಕಾದ ಸಹಾಯವನ್ನು ಮಾಡುವ ಸಂದರ್ಭದಲ್ಲಿ ರಷ್ಯಾದ ಪಡೆಗಳು ಟ್ಯಾಂಕ್ ದಾಳಿಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದರು."ಈ ಮಾನವೀಯ ಕಾರಿಡಾರ್ ನಡೆಯಬೇಕಾದ ಸ್ಥಳದಲ್ಲಿ ಆಕ್ರಮಿಸಿಕೊಂಡ ರಷ್ಯಾ ಪಡೆಯು ಟ್ಯಾಂಕ್ ದಾಳಿಯನ್ನು ಪ್ರಾರಂಭಿಸಿದೆ," ಎಂದು ಝೆಲೆನ್ಸ್ಕಿ ದೂರದರ್ಶನದ ಭಾಷಣದಲ್ಲಿ ಹೇಳಿದರು. "ಮಾರಿಯುಪೋಲ್ ಅನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ನಿರಂತರವಾಗಿ ಬಾಂಬ್ ಮತ್ತು ಶೆಲ್ ಮಾಡಲು ರಷ್ಯಾ ಸರ್ಕಾರ ರಷ್ಯಾ ಸೇನಾಪಡೆಗೆ ಸ್ಪಷ್ಟ ಆದೇಶ ನೀಡಿದೆ," ಎಂದು ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. "ಇದು ಸಂಪೂರ್ಣವಾಗಿ ಭಯೋತ್ಪಾದಕ ಕೃತ್ಯವಾಗಿದೆ. ಅನುಭವಿ ಭಯೋತ್ಪಾದಕರಿಂದ ಕೃತ್ಯವನ್ನು ಮಾಡಿಸಲಾಗುತ್ತಿದೆ," ಎಂದು ಕೂಡಾ ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಆದರೆ ಮಾಸ್ಕೋ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.

ಜನರ ಸಾಮೂಹಿಕ ಸಮಾದಿ
ಇನ್ನು ರಷ್ಯಾ ದಾಳಿಯು ಮಾರಿಯುಪೋಲ್ನಲ್ಲಿ ನಾಗರಿಕರ ಬಲಿಗೆ ಸಾಕ್ಷಿಯಾಗಿದೆ. ಜನರು ಆಹಾರ ಮತ್ತು ಇಂಧನಕ್ಕಾಗಿ ಪರದಾಡುತ್ತಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಉಲ್ಲೇಖ ಮಾಡಿದೆ. ಅನೇಕ ಪ್ರದೇಶಗಳಲ್ಲಿ ಫೋನ್ ಸೇವೆ ಮತ್ತು ವಿದ್ಯುತ್ ಅನ್ನು ಕಡಿತಗೊಳಿಸಿದೆ. ದೇಹಗಳನ್ನು ಸಾಮೂಹಿಕ ಸಮಾಧಿಗಳಲ್ಲಿ ಹೂಳಲಾಗುತ್ತಿದೆ. ಬೀದಿಗಳು ಸುಟ್ಟುಹೋದ ಕಾರುಗಳು, ಒಡೆದ ಗಾಜು ಮತ್ತು ಒಡೆದ ಮರಗಳಿಂದ ತುಂಬಿವೆ. ರೆಡ್ಕ್ರಾಸ್ನ ಸ್ಥಳೀಯ ಅಧಿಕಾರಿ, ಸಚಾ ವೋಲ್ಕೊವ್ನ ಪ್ರಕಾರ, "ದಿನಸಿ ಅಂಗಡಿಗಳು ಮತ್ತು ಔಷಧಾಲಯಗಳಲ್ಲಿ ಜನರಿಗೆ ನೀಡಲು ಬೇಕಾದ ಸಾಮಾಗ್ರಿಗಳೇ ಇಲ್ಲ. ತರಕಾರಿಗಳಿಗೆ ಕಪ್ಪು ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಆದರೆ ಮಾಂಸ ಲಭ್ಯವಿಲ್ಲ. ಜನರು ಕಾರುಗಳಿಂದ ಗ್ಯಾಸೋಲಿನ್ ಅನ್ನು ಕದಿಯುತ್ತಿದ್ದಾರೆ." ಬಾಂಬ್ ಸ್ಫೋಟಗಳಿಂದ ರಕ್ಷಿಸಲ್ಪಟ್ಟ ಸ್ಥಳಗಳನ್ನು ಕಂಡುಹಿಡಿಯುವುದು ಕಷ್ಟ, ನೆಲಮಾಳಿಗೆಯನ್ನು ಮಹಿಳೆಯರು ಮತ್ತು ಮಕ್ಕಳಿಗೆ ಕಾಯ್ದಿರಿಸಲಾಗಿದೆ ಎಂದು ಕೂಡಾ ಹೇಳಿದ್ದಾರೆ. "ಜನರು ಆಹಾರಕ್ಕಾಗಿ ಪರಸ್ಪರ ಆಕ್ರಮಣ ಮಾಡಲು ಪ್ರಾರಂಭಿಸಿದರು," ಎಂದು ಕೂಡಾ ತಿಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications