ಪಿಒಕೆ ಭಾರತದಲ್ಲಿರುವ ನಕ್ಷೆ: ಪಾಕ್ ವಿರುದ್ಧ ಚೀನಾ ಸಿಟ್ಟು ತೋರಿಸಿದ್ದು ಹೀಗೆ
ಬೀಜಿಂಗ್ (ಚೀನಾ), ನವೆಂಬರ್ 30 : ಚೀನಾದ ಅಧಿಕೃತ ಸುದ್ದಿ ವಾಹಿನಿ ಸಿಜಿಟಿಎನ್ ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗ ಎಂಬ ನಕ್ಷೆಯನ್ನು ಪ್ರಸಾರ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಡಿಸೆಂಬರ್ ಹತ್ತನೇ ತಾರೀಕು ಭಾರತ-ಚೀನಾ ಸೇನಾ ಸಮರಾಭ್ಯಾಸ ಇದೆ ಹಾಗೂ ಕರ್ತರ್ ಪುರ್ ಕಾರಿಡಾರ್ ಬಗ್ಗೆ ಚರ್ಚೆ ನಡೆಯುತ್ತಿರುವ ವೇಳೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.
ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಈಚೆಗೆ ನಡೆದ ದಾಳಿ ಸುದ್ದಿಯನ್ನು ಸಿಜಿಟಿಎಸ್ ವರದಿ ಮಾಡಿತ್ತು. ಆ ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗ ಎಂದು ನಕ್ಷೆಯಲ್ಲಿ ತೋರಿಸಿತ್ತು. ತನ್ನ ದೇಶದ ನಾಗರಿಕರನ್ನು ಕಾಪಾಡುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂಬ ಬಗ್ಗೆ ಚೀನಾಗೆ ವಿಪರೀತ ಅಸಮಾಧಾನ ಇದೆ. ಆದ್ದರಿಂದ ಈ ರೀತಿ ಸಂಕೇತ ರವಾನಿಸುತ್ತಿದೆ ಎಂಬ ಚರ್ಚೆ ಜಾರಿಯಲ್ಲಿದೆ.
ಸಿಜಿಟಿಎನ್ ನಲ್ಲಿ ಅದಾಗಲೇ ಸಿದ್ಧ ಮಾದರಿಯ ನಕ್ಷೆಗಳು ಇರುತ್ತವೆ ಹಾಗೂ ಅವುಗಳನ್ನು ಬದಲಾವಣೆ ಮಾಡುವುದಕ್ಕೆ ಸಿಬ್ಬಂದಿಗೆ ಅವಕಾಶ ಇರುವುದಿಲ್ಲ. ಮೇಲ್ ಸ್ತರದ ಅಧಿಕಾರಿಗಳ ಸೂಚನೆ ಇಲ್ಲದೆ ಪ್ರೊಡಕ್ಷನ್ ಸಿಬ್ಬಂದಿ ಇಂಥ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳಲ್ಲೇ ಮೊದಲು ಪ್ರಾಯೋಗಿಕವಾಗಿ ಬಳಕೆ
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನೀತಿ ಬದಲಾವಣೆ ಮಾಡುವ ಮುನ್ನ ಚೀನಾದ ಅಧಿಕಾರಿಗಳು ದೇಶದ ಅಧಿಕೃತ ಮಾಧ್ಯಮದಲ್ಲೇ ಪ್ರಯೋಗಾರ್ಥವಾಗಿ ಬಳಸುತ್ತಾರೆ. ಆದರೆ ಈಗಿನ ಬದಲಾವಣೆಯನ್ನೇ ಅಧಿಕೃತ ನಿಲವು ಅಂತಲೂ ಭಾವಿಸಬೇಕಿಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ನಕ್ಷೆಗೆ ಸಂಬಂಧಿಸಿದ ವಿಚಾರದಲ್ಲಿ ಚೀನಾದ ಮುದ್ರಣ ಮಾಧ್ಯಮಗಳು ಸ್ಪಷ್ಟವಾಗಿವೆ.

ಈ ವರೆಗೆ ಅಂಥ ನಕ್ಷೆಯನ್ನು ಚೀನಾ ತೋರಿಸಿಲ್ಲ
ಚೀನಾ ಅಧಿಕೃತವಾಗಿ ಬಿಡುಗಡೆ ಮಾಡಿದ ಯಾವ ನಕ್ಷೆಯಲ್ಲೂ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಿಲ್ಲ. ಅಧಿಕೃತ ಮಾಧ್ಯಮಗಳು ಉನ್ನತ ಅಧಿಕಾರಿಗಳ ಸೂಚನೆ ಇಲ್ಲದೆ ಬೇರೆ ರೀತಿಯ ನಕ್ಷೆಗಳನ್ನು ತೋರಿಸಲು ಸಾಧ್ಯವಿಲ್ಲ ಎಂದು ಕಮ್ಯುನಿಸ್ಟ್ ಪಕ್ಷದ ಮೂಲಗಳು ತಿಳಿಸಿವೆ.

ಅಧಿಕೃತವಲ್ಲ ನಕ್ಷೆಗೆ ಮುಲಾಜಿಲ್ಲದೆ ನಿಷೇಧ
ನಕ್ಷೆಗಳು ಚೀನಾದಲ್ಲಿ ತುಂಬಾ ಸೂಕ್ಷ್ಮವಾದ ವಿಷಯ. ಅಧಿಕಾರಿಗಳು ಸೂಚಿಸಿರುವ ರೀತಿಯಲ್ಲೇ ಆಯಾ ದೇಶಗಳ ನಕ್ಷೆಗಳನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಅಲ್ಲಿನ ಸರಕಾರಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುತ್ತಾರೆ. ಆಗಾಗ ಪುಸ್ತಕ ಮಳಿಗೆ ಮತ್ತಿತರ ಕಡೆ ಭೇಟಿ ನೀಡಿ ಖಾತ್ರಿ ಪಡಿಸಿಕೊಳ್ಳುತ್ತಾರೆ. ಸರಕಾರದ ಮಾನ್ಯತೆ ಇರುವ ನಕ್ಷೆಗಿಂತ ಭಿನ್ನವಾದದ್ದನ್ನು ಬಳಸಿದರೆ ಅದಕ್ಕೆ ನಿಷೇಧಿಸಲಾಗುತ್ತದೆ.

ಕರಾಚಿಯಲ್ಲಿ ರಾಯಭಾರ ಕಚೇರಿ ಮೇಲಿನ ದಾಳಿ
ಪಾಕಿಸ್ತಾನ ಕರಾಚಿಯ ಕ್ಲಿಫ್ಟನ್ ಪ್ರದೇಶದ ರಾಯಭಾರ ಕಚೇರಿ ಬಳಿ ವಾರದ ಹಿಂದೆ ಉಗ್ರಗಾಮಿಗಳ ದಾಳಿ ನಡೆದಿತ್ತು. ಬಲೂಚಿಸ್ತಾನ ಲಿಬರೇಷನ್ ಆರ್ಮಿ ಈ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ಪಾಕಿಸ್ತಾನ ಹಾಗೂ ಚೀನಾದ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸುವ ಸಲುವಾಗಿ ಈ ದಾಳಿ ನಡೆಸಿದ್ದಾಗಿ ಆ ಸಂಘಟನೆಯ ನಾಯಕ ಹೇಳಿಕೊಂಡಿದ್ದ. ಈ ಘಟನೆಯಲ್ಲಿ ಪೊಲೀಸರು ಹಾಗೂ ಉಗ್ರಗಾಮಿಗಳು ಮೃತಪಟ್ಟಿದ್ದರು.












Click it and Unblock the Notifications