ಈ ಸೈನಿಕರ ಕೆಲಸವೇ ಅತ್ಯಾಚಾರ ಎಸಗುವುದು!
ಲಂಡನ್, ಜೂ. 9 : "ಹೋಗಿ, ಮಹಿಳೆಯರನ್ನು ರೇಪ್ ಮಾಡಿ ಬನ್ನಿ...." ಹೀಗೆಂದು ಕಮಾಂಡರ್ ನಿಂದ ಆದೇಶ ಬಂದಾಕ್ಷಣ, ಯುದ್ಧಕ್ಕೆ ಸನ್ನದ್ಧರಾದ ಸೈನಿಕರ ಕಣ್ಣುಗಳು ಕಡುಗತ್ತಲೆಯಲ್ಲಿ ಹೊಂಚು ಹಾಕಲು ಶುರುಮಾಡುತ್ತವೆ. ಗಿಡಗಂಟಿಗಳ ಹಿಂದೆ ಬಚ್ಚಿಟ್ಟುಕೊಂಡ ಮಹಿಳೆ ಸಿಕ್ಕತಕ್ಷಣ, ಹುಲ್ಲೆಯ ಮೇಲೆ ಹುಲಿ ಎರಗಿದಂತೆ ಎರಗುತ್ತಾರೆ, ಅತ್ಯಾಚಾರ ಎಸಗುತ್ತಾರೆ... ನಿರಾಳರಾಗುತ್ತಾರೆ.
ಇಂಥ ಹೀನಾಯ, ಅಮಾನುಷ ಕೃತ್ಯಗಳು ನಡೆಯುತ್ತಿರುವುದು ಆಫ್ರಿಕಾ ಖಂಡದಲ್ಲಿರುವ ಕಾಂಗೋ ರಾಷ್ಟ್ರದಲ್ಲಿ. "ಹೌದು ಮಹಿಳೆಯರು ಕಂಡಾಕ್ಷಣ ನಾವು ಅತ್ಯಾಚಾರ ಎಸಗುತ್ತೇವೆ. ನಂತರ ಮಹಿಳೆಯನ್ನು ಮತ್ತು ಆಕೆಯ ಮಕ್ಕಳನ್ನು ಕೂಡ ಕೊಂದು ಬಿಸಾಕುತ್ತೇವೆ. ಇಂಥ ಕೃತ್ಯ ನಮಗೆ ನಿರಾಳ ಭಾವನೆ ಮೂಡಿಸುತ್ತದೆ" ಎಂದು ಸೈನಿಕರೇ ಒಪ್ಪಿಕೊಂಡಿದ್ದಾರೆ.
ಎರಡು ಸಾವಿರಕ್ಕೂ ಹೆಚ್ಚಿರುವ ಹದಿಹರೆಯದ ಸೈನಿಕರಿಗೆ ಸೈನ್ಯದ ಕಮಾಂಡರ್ನೇ ಅತ್ಯಾಚಾರ ಮಾಡಿಬನ್ನಿ ಎಂದು ಹುರಿದುಂಬಿಸಿ ಕಳಿಸುವುದು ಬಹುಶಃ ಜಗತ್ತಿನ ಯಾವ ದೇಶದಲ್ಲಿಯೂ ನಡೆಯಲಿಕ್ಕಿಲ್ಲ. ಆದರೆ, ಕಾಂಗೋದಲ್ಲಿ ಯುದ್ಧವಿಲ್ಲದೆ ಬರಗೆಟ್ಟು ಹೋಗಿರುವ ಸೈನಿಕರನ್ನು ಹುರುದುಂಬಿಸಲು, ಅವರು ಚಟುವಟಿಕೆಯಿಂದಿರಲು ಇಂಥ ಹೀನಕೃತ್ಯಕ್ಕೆ ಉತ್ತೇಜನ ನೀಡಲಾಗುತ್ತದಂತೆ.
ಸೈನಿಕರ ವೀರಾವೇಶದ ಕಥೆಗಳನ್ನೇ ಹೇಳುವ ನಮ್ಮ ಭಾರತದಂಥ ದೇಶದಲ್ಲಿ ಇಂಥ ಕಥೆಗಳು ಅಸತ್ಯವೆನಿಸಬಹುದು. ಆದರೆ, ಆಫ್ರಿಕಾದ ರಾಷ್ಟ್ರಗಳಲ್ಲಿ ಇಂಥ 'ರಾತ್ರಿ ಕಾರ್ಯಾಚರಣೆಗಳು' ಇನ್ನೂ ಚಾಲ್ತಿಯಲ್ಲಿವೆ. ದುಷ್ಟ ಸೈನಿಕರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರು ಕೂಡ ಭಯಾನಕ ಕಥೆಗಳನ್ನು ಹೊರಹಾಕಿದ್ದಾರೆ. [ಮಹಿಳೆಯರ ಅತ್ಯಾಚಾರಕ್ಕೆ ಕಾರಣ ಯಾರು?]
2012ರ ನವೆಂಬರ್ ನಲ್ಲಿ ಮಹಿಳೆಯೋರ್ವಳ ಮೇಲೆ ಮೂವರು ಸೈನಿಕರು ಮುಗಿಬಿದ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಮಹಿಳೆಯ ಕಣ್ಣುಗಳಿಗೆ ಗುದ್ದಿ ಕಾಣದಂತೆ ಮಾಡಿ ನಂತರ ಉಮೇಶ್ ರೆಡ್ಡಿಗಿಂತಲೂ ಭೀಕರವಾಗಿ ಅತ್ಯಾಚಾರವೆಸಗಿದ್ದರು. ಈ ವಿಕೃತ ಕಾಮಿಗಳು ಆ ಮಹಿಳೆಯ ಬಾಯಲ್ಲಿ ಬಂದೂಕು ಹಿಡಿದು ತಮ್ಮ ಕೆಲಸ ಮುಗಿಸಿದ್ದರು.
ಮಸಿಕಾ ಎಂಬ ಮಹಿಳೆಯ ಹೀನಾಯ ಕಥೆ ಇನ್ನೂ ಹೃದಯವಿದ್ರಾವಕವಾಗಿದೆ. ಶಾಲಾ ಮಾಸ್ತರ್ ಮೊದಲು ಆಕೆಯನ್ನು ಸಂಭೋಗಿಸಿದ್ದ. ನಂತರ ಸೈನಿಕರು ಆಕೆಯನ್ನು ಆಕೆಯ ಮಕ್ಕಳ ಮೇಲೆ ಸಾಮೂಹಿಕವಾಗಿ ಮುಗಿಬಿದ್ದು ಬಲಾತ್ಕಾರ ಮಾಡಿ ಆಕೆಯ ಗಂಡನನ್ನು ನಿರ್ದಯವಾಗಿ ಕೊಂದುಹಾಕಿದ್ದರು. ಇದೇ ತರಹ ಆಕೆಯ ಮೇಲೆ ಮೂರು ಬಾರಿ ದೌರ್ಜನ್ಯ ನಡೆದಿದೆ.
ಈ ಘಟನೆಗಳು ನಡೆದ ನಂತರ ಎದೆಗುಂದದ ಮಸಿಕಾ, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗಾಗಿಯೇ ಆಶ್ರಯತಾಣವನ್ನು ಆರಂಭಿಸಿದ್ದಾಳೆ. ಹದಿರಹೆಯದ ಮಹಿಳೆಯರಿರಲಿ ಮೂರು ವರ್ಷದ ಹಸುಳೆಯನ್ನೂ ಸೈನಿಕರು ಬಿಟ್ಟಿಲ್ಲ. ಏಕೆ ಹೀಗೆ ಮಾಡುತ್ತಾರೆ ಎಂದು ಆಕೆ ಅಲವತ್ತುಕೊಳ್ಳುತ್ತಾಳೆ. ಈ ಕಾರಣದಿಂದಾಗಿಯೇ ಆಫ್ರಿಕಾದ ಕೇಂದ್ರ ಭಾಗದಲ್ಲಿರುವ ಕಾಂಗೋ, ಮಹಿಳೆಯರ ಪಾಲಿಗೆ ವಿಶ್ವದಲ್ಲಿಯೇ ಅತ್ಯಂತ ಡೇಂಜರಸ್ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಭಾರತದ ಉತ್ತರಪ್ರದೇಶದಲ್ಲಿಯೂ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರಗಳು ಜರುಗುತ್ತಿವೆ. ಕೆಲ ಪ್ರಕರಣಗಳನ್ನು ಪೊಲೀಸರೇ ಮುಚ್ಚಿಹಾಕುತ್ತಿದ್ದಾರೆ. ನಮ್ಮ ರಾಜಕಾರಣಿಗಳು ಈ ಕೃತ್ಯಗಳ ಕುರಿತು ಎಡಬಿಡಂಗಿ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಾಚಾರಗಳಿಗೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತಿದೆ. ಇಂಥ ದೌರ್ಜನ್ಯಗಳನ್ನು ಮೆಟ್ಟಿನಿಲ್ಲಬೇಕಾದರೆ ಕಾನೂನು ಇನ್ನಷ್ಟು ಗಟ್ಟಿಯಾಗಬೇಕಾಗಿದೆ. ನಿರ್ದಾಕ್ಷಿಣ್ಯವಾಗಿ ಅತ್ಯಾಚಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ.