ಉಗ್ರರ ಹತ್ಯಾಕಾಂಡ ನಿಲ್ಲಿಸದಿದ್ದರೆ ಮತ್ತೆ ಪ್ರತೀಕಾರ!
ಇಸ್ಲಾಮಾಬಾದ್, ಡಿ. 20 : ತಾಲಿಬಾನ್ ಅಡಗುತಾಣಗಳ ಮೇಲೆ ಮುಗಿಬಿದ್ದಿರುವ ಪಾಕಿಸ್ತಾನದ ಸೇನೆ ಉಗ್ರರನ್ನು ಅಟ್ಟಾಡಿಸಿಕೊಂಡು ಕೊಲ್ಲುತ್ತಿದ್ದರೆ, ಸದ್ಯದಲ್ಲೇ ಪ್ರಧಾನಿ ನವಾಜ್ ಷರೀಫ್, ಸೇನಾಧಿಕಾರಿಗಳ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ತೆಹರಿಕ್-ಇ-ತಾಲಿಬಾನ್ ಪಾಕಿಸ್ತಾನ ಕಟ್ಟೆಚ್ಚರಿಕೆ ನೀಡಿದೆ.
ತೆಹರಿಕ್-ಇ-ತಾಲಿಬಾನ್ ಸಂಘಟನೆಯ ಕಮಾಂಡರ್ ಮೊಹಮ್ಮದ್ ಖರಾಸಾನಿ ಪಾಕಿಸ್ತಾನಿ ಅಧಿಕಾರಿಗಳಿಗೆ ಶುಕ್ರವಾರ ಸಂಜೆ ಬರೆದಿದ್ದಾನೆಂದು ಹೇಳಲಾಗಿರುವ ಪತ್ರದಲ್ಲಿ, ತಾಲಿಬಾನ್ ಮೇಲೆ ಮಾಡುತ್ತಿರುವ ದಾಳಿಗೆ ಸದ್ಯದಲ್ಲಿಯೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ, ಮತ್ತಷ್ಟು ರಕ್ತ ಹರಿಸುವುದಾಗಿ ಬೆದರಿಕೆ ಒಡ್ಡಲಾಗಿದೆ. [ಉಗ್ರ ಮೌಲಾನಾ ಫಜ್ಲುಲ್ಲಾ ಹತ್ಯೆ]
ಡಿಸೆಂಬರ್ 16ರಂದು ತಾಲಿಬಾನಿ ಉಗ್ರರು ಸೇನಾ ಶಾಲೆಯ ಮೇಲೆ ದಾಳಿ ಮಾಡಿ, 140ಕ್ಕೂ ಹೆಚ್ಚು ಅಮಾಯಕ ಮಕ್ಕಳನ್ನು ಮತ್ತು ಶಿಕ್ಷಕರನ್ನು ಮನಬಂದಂತೆ ಗುಂಡಿಟ್ಟು ಹತ್ಯೆಗೈದಿದ್ದರು. ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳಲು ಭಾರತ ಸೇರಿದಂತೆ ವಿಶ್ವದಾದ್ಯಂತ ಒತ್ತಡ ಬಂದ ಹಿನ್ನೆಲೆಯಲ್ಲಿ ಪಾಕ್ ಸೇನೆ ಉಗ್ರರ ಮೇಲೆ ಮುಗಿಬಿದ್ದಿದೆ.
ಗಲ್ಲಿಗೇರಿಸುವುದನ್ನು ನಿಷೇಧಿಸಿದ್ದ ಪಾಕಿಸ್ತಾನ ಸರಕಾರ ಅದನ್ನೀಗ ಹಿಂತೆಗೆದುಕೊಂಡಿದ್ದು, ಶುಕ್ರವಾರ ಇಬ್ಬರು ಉಗ್ರರನ್ನು ಗಲ್ಲಿಗೇರಿಸಿದೆ. ಇದನ್ನು ನಿಲ್ಲಿಸಲಿದ್ದರೆ ಇನ್ನಷ್ಟು ಕುಟುಂಬಗಳಲ್ಲಿ ಸ್ಮಶಾನಸದೃಶ ವಾತಾರವಣವನ್ನು ಸೃಷ್ಟಿಸುತ್ತೇವೆ, ಎಂದು ತಾಲಿಬಾನಿಗಳು ಗುಡುಗಿದ್ದಾರೆ. [ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆಂದ ಉಗ್ರನಿಗೆ ಜಾಮೀನು]
ಅಫಘಾನಿಸ್ತಾನದ ಗಡಿಗೆ ಅಂಟಿಕೊಂಡಿರುವ ಪಾಕಿಸ್ತಾನದ ಪ್ರದೇಶದಲ್ಲಿ ಅಡಗಿಕೊಂಡಿದ್ದ ತಾಲಿಬಾನ್ ಉಗ್ರರನ್ನು ಪಾಕಿಸ್ತಾನ ಬೆನ್ನತ್ತಿ ಕೊಲ್ಲುತ್ತಿದ್ದು, ಇಲ್ಲಿಯವರೆಗೆ 119 ಭಯೋತ್ಪಾದಕನ್ನು ಹತ್ಯೆಗೈದಿದೆ.