ಹಿಂದೂ ಬಾಲಕಿಯರ ಅಪಹರಣ, ಮತಾಂತರ, ಬಲವಂತದ ಮದುವೆ: ಆಕ್ರೋಶ
ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 24: ಭಾರತ ಹಾಗೂ ಪಾಕಿಸ್ತಾನದ ಹಿರಿಯ ಸಚಿವರ ಮಧ್ಯೆ ಭಾನುವಾರ ವಾಗ್ವಾದ ನಡೆದಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಹಾಗೂ ಮದುವೆಯನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದಲ್ಲಿ ಇಬ್ಬರು ಹಿಂದೂ ಬಾಲಕಿಯರ ಅಪಹರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ವಿದೇಶಾಂಗ ಸಚಿವರಿಂದ ಮಾಹಿತಿ ಕೇಳುವುದರೊಂದಿಗೆ ಇದೆಲ್ಲ ಆರಂಭವಾಗಿತ್ತು. ಈ ವಿಚಾರದ ಬಗ್ಗೆ ವರದಿ ಕಳುಹಿಸುವಂತೆ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಬಳಿ ಕೇಳಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಸುಷ್ಮಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ, ಇದು ದೇಶದ 'ಆಂತರಿಕ ವಿಷಯ' ಎಂದಿದ್ದಾರೆ. ಆ ಟ್ವೀಟ್ ಗೆ ಮರು ಉತ್ತರ ನೀಡಿದ ಸುಷ್ಮಾ, ಸಚಿವರೇ ಬಾಲಕಿಯರ ಅಪಹರಣ ಮತ್ತು ಬಲವಂತದ ಮತಾಂತರ ಬಗ್ಗೆ ನಾನು ವರದಿ ಕೇಳಿದ್ದು ಇಸ್ಲಾಮಾಬಾದ್ ನಲ್ಲಿರುವ ಭಾರತ ಹೈ ಕಮಿಷನರ್ ಬಳಿ. ನೀವು ಭಯ ಪಡಲು ಇಷ್ಟು ಸಾಕು. ಇದು ನಿಮ್ಮ ತಪ್ಪಿತಸ್ಥ ಮನೋಭಾವ ತೋರುತ್ತದೆ ಎಂದಿದ್ದಾರೆ.

ಈ ಟ್ವೀಟ್ ಗೆ ಚೌಧರಿ ಮಾರುತ್ತರ ನೀಡಿದ್ದು, ಭಾರತದ ಆಡಳಿತದಲ್ಲಿ ಬೇರೆ ದೇಶದ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವವರು ಇರುವುದು ನನಗೆ ಸಂತೋಷವಾಗಿದೆ. ನಿಮ್ಮ ಇದೇ ಮನಸ್ಥಿತಿ ತವರಲ್ಲಿರುವ ಅಲ್ಪಸಂಖ್ಯಾತರ ಬಗ್ಗೆಯೂ ಇರುತ್ತದೆ ಅಂದುಕೊಳ್ಳುತ್ತೇನೆ. ಗುಜರಾತ್ ಮತ್ತು ಜಮ್ಮು ಬಗ್ಗೆ ನಿಮ್ಮ ಆತ್ಮದಲ್ಲಿ ಸ್ಥಾನ ಸಿಗಲಿ ಎಂದಿದ್ದಾರೆ.
ಹದಿಮೂರು ವರ್ಷದ ರವೀನಾ, ಹದಿನೈದು ವರ್ಷದ ರೀನಾ ಎಂಬಿಬ್ಬರನ್ನು ಹೋಳಿ ಹಬ್ಬಕ್ಕೆ ಮುನ್ನ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಪ್ರಭಾವಿಗಳ ಗುಂಪು ಅಪಹರಿಸಿತ್ತು. ಆ ನಂತರ ಈ ಬಾಲಕಿಯರ ವಿವಾಹದ ವಿಡಿಯೋ ಪಾಕಿಸ್ತಾನದಾದ್ಯಂತ ವೈರಲ್ ಆಗಿತ್ತು. ಇನ್ನೊಂದು ವಿಡಿಯೋದಲ್ಲಿ, ನಾವು ಇಸ್ಲಾಂ ಧರ್ಮವನ್ನು ಮನಸಾರೆ ಒಪ್ಪಿಕೊಂಡಿದ್ದೇವೆ ಎಂದು ಕೂಡ ಹೇಳಿದ್ದಾರೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರದಂದು ಈ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಹಿಂದೂಗಳು ಪಾಕಿಸ್ತಾನದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಇಮ್ರಾನ್ ಖಾನ್ ನೀಡಿದ್ದ ಭರವಸೆ ಬಗ್ಗೆ ನೆನಪು ಮಾಡಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications