ಸರ್ಜಿಕಲ್ ದಾಳಿ ಆತ್ಮರಕ್ಷಣೆಗಾಗಿ ಮಾಡಿದ್ದು: ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿಕೆ
ವಿಶ್ವಸಂಸ್ಥೆ, ಫೆಬ್ರವರಿ 25: ಗಡಿ ಭಾಗದಲ್ಲಿ ಭಯೋತ್ಪಾದಕರು ನೆಲೆಯೂರಲು ಪಾಕಿಸ್ತಾನವು ನೆರವು ನೀಡುತ್ತಿದ್ದು, ಗಡಿಯಾಚೆಗಿನ ತನ್ನ ದಾಳಿಗಳು ಆತ್ಮರಕ್ಷಣೆಯ ಕ್ರಮವಷ್ಟೇ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿದೆ.
ಮೆಕ್ಸಿಕೋ ಆಯೋಜಿಸಿದ್ದ 'ವಿಶ್ವಸಂಸ್ಥೆ ರಚನೆಯ ಸಮಗ್ರ ಭದ್ರತಾ ವ್ಯವಸ್ಥೆಯನ್ನು ಎತ್ತಿಹಿಡಿಯುವುದು: ಅಂತಾರಾಷ್ಟ್ರೀಯ ಕಾನೂನಿನ ಬಳಕೆ, ವಿದೇಶಗಳಲ್ಲಿನ ಹಸ್ತಕ್ಷೇಪ ಮತ್ತು ಕಾನೂನಾತ್ಮಕ ಆತ್ಮ ರಕ್ಷಣೆ' ಕುರಿತಾದ ಅರ್ರಿಯಾ ಫಾರ್ಮುಲಾ ಸಭೆಯಲ್ಲಿ ಭಾರತ ಈ ಹೇಳಿಕೆ ನೀಡಿದೆ.
'ಮೂರನೇ ದೇಶದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಅನ್ಯಶಕ್ತಿಗಳಿಂದ ದೊಡ್ಡ ಪ್ರಮಾಣದಲ್ಲಿ ಸಶಸ್ತ್ರ ದಾಳಿ ನಡೆದ ಸಂದರ್ಭದಲ್ಲಿ ಪೂರ್ವಭಾವಿ ದಾಳಿಗಳನ್ನು ನಡೆಸುವುದು ಇನ್ನೊಂದು ದೇಶಕ್ಕೆ ಅನಿವಾರ್ಯವಾಗುತ್ತದೆ' ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ಪ್ರತಿನಿಧಿ ನಾಗರಾಜ್ ನಾಯ್ಡು ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆಯೇ ಹೇಳಿದರು.

'ಕೆಲವು ದೇಶಗಳು ಅಂತಾರಾಷ್ಟ್ರೀಯ ನಿಗಾವಣೆಗಳಿಂದ ತಪ್ಪಿಸಿಕೊಳ್ಳಲು ಭಯೋತ್ಪಾದನಾ ಗುಂಪುಗಳಂತಹ ಅನ್ಯ ಶಕ್ತಿಗಳಿಗೆ ಬೆಂಬಲ ನೀಡುವ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿವೆ. ಅಂತಹ ಭಯೋತ್ಪಾದನಾ ಗುಂಪುಗಳಿಗೆ ತರಬೇತಿ ನೀಡುವುದು, ಹಣಕಾಸಿನ ಸವಲತ್ತು ಒದಗಿಸುವುದು, ಬೇಹುಗಾರಿಕೆ, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ನೇಮಕಾತಿ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ಅನೇಕ ಸಹಾಯಗಳನ್ನು ನೀಡುತ್ತವೆ' ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications