ಭಯೋತ್ಪಾದಕರಾಗಲು ನಿರುದ್ಯೋಗ ಕಾರಣ ಎನ್ನುತ್ತಾರೆ, ಹಾಗಾದರೆ ಇದೇನಿದು?
ಕೊಲಂಬೋ, ಏಪ್ರಿಲ್ 24: ಶ್ರೀಲಂಕಾದಲ್ಲಿ ನಡೆದ ಭಯಾನಕ ಭಯೋತ್ಪಾದನಾ ದಾಳಿ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ಒಂಬತ್ತು ಮಂದಿ ಆತ್ಮಾಹುತಿ ಬಾಂಬರ್ಗಳು ಒಂದೇ ದಿನ ಈ ಯೋಜಿತ ದಾಳಿ ನಡೆಸಿ ಮುನ್ನೂರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣರಾಗಿದ್ದಾರೆ. ಇವರಲ್ಲಿ ಒಬ್ಬಳು ಮಹಿಳೆಯೂ ಇದ್ದಾಳೆ. ಒಂಬತ್ತರಲ್ಲಿ ಎಂಟು ಮಂದಿಯ ಗುರುತು ಸಿಕ್ಕಿದೆ.
ಬಡತನ ಮತ್ತು ನಿರುದ್ಯೋಗ ಯುವಕರು ಭಯೋತ್ಪಾದನೆಯತ್ತ ಮುಖ ಮಾಡಲು ಕಾರಣ ಎನ್ನುವುದು ಅನೇಕರ ವಾದ. ಸೈನ್ಯಕ್ಕೆ ಸೇರುವ ಯುವಜನರ ಕುರಿತೂ ಅನೇಕರು ಇದೇ ರೀತಿಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಆದರೆ, ಜಗತ್ತಿಗೆ ಅತ್ಯಂತ ಮಾರಕವಾದ ಭಯೋತ್ಪಾದನೆಯತ್ತ ಆಕರ್ಷಿತರಾಗಲು ನಿಜಕ್ಕೂ ಬಡತನ ಅಥವಾ ನಿರುದ್ಯೋಗ ಕಾರಣವೇ?
ಇದು ಸತ್ಯವಲ್ಲ ಎನ್ನುವುದಕ್ಕೆ ಶ್ರೀಲಂಕಾದಲ್ಲಿ ನಡೆದ ದಾಳಿಯ ಉದಾಹರಣೆಯೇ ನಮ್ಮ ಮುಂದಿದೆ. ಹೆಚ್ಚು ಓದಿದವರೇ ಮತ್ತು ಹಣವಂತರೇ ಈ ಕೃತ್ಯ ಎಸಗಲು ಮುಂದೆ ಬರುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಹಣದ ಆಸೆಯಿಂದ ತಮ್ಮನ್ನು ಕೊಂದುಕೊಳ್ಳುವ ಜತೆಗೆ ನೂರಾರು ಜನರನ್ನು ಸಾಯಿಸಲು ಸಿದ್ಧರಿರುವ ಯುವಕರ ದೊಡ್ಡ ದಂಡೇ ಉಗ್ರವಾದದತ್ತ ಆಕರ್ಷಿತವಾಗುತ್ತಿದೆ. ಇದಕ್ಕಾಗಿ ಅವಿದ್ಯಾವಂತರು ಮಾತ್ರವಲ್ಲದೆ, ವಿದ್ಯಾವಂತ ಮತ್ತು ಬುದ್ಧಿವಂತ ಯುವಕರನ್ನೂ ಬ್ರೈನ್ವಾಷ್ ಮಾಡುವ ಜಾಲ ಬೆಳೆದಿದೆ ಎನ್ನಲಾಗಿದೆ.
ಉಗ್ರರ ಶಿಬಿರಗಳಲ್ಲಿ ಧರ್ಮದ ಹೆಸರಿನಲ್ಲಿ ಹೇಯ ಕೃತ್ಯ ಎಸಗಲು ಪ್ರಚೋದನೆ ನೀಡಲಾಗುತ್ತಿದೆ ಎನ್ನುವುದು ರಹಸ್ಯವೇನಲ್ಲ. ಆದರೆ, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ, ವಿದೇಶಗಳಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮುಂತಾದ ಅತ್ಯುನ್ನತ ಪದವಿಗಳನ್ನು ಓದಿದ ಶ್ರೀಮಂತ ಮನೆತನದ ಯುವಕರು ಈ ರೀತಿಯ ಚಟುವಟಿಕೆಗಳಿಗೆ ಬಲಿಯಾಗುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ.

ಲಕ್ಷಾಧೀಶನ ಮಕ್ಕಳು
ಈ ದಾಳಿಯಲ್ಲಿ ಆತ್ಮಾಹುತಿ ದಾಳಿಕೋರರಾಗಿದ್ದ ಇಮ್ಸಾತ್ ಅಹ್ಮದ್ ಇಬ್ರಾಹಿಂ (33) ಮತ್ತು ಇಲ್ಹಾಮ್ ಅಹ್ಮದ್ ಇಬ್ರಾಹಿಂ (31) ಇಬ್ಬರ ಹಿನ್ನೆಲೆ ಗೊತ್ತೇ? ಇವರಿಬ್ಬರೂ ಶ್ರೀಲಂಕಾದ ಲಕ್ಷಾಧೀಶ ಉದ್ಯಮಿ ಮೊಹಮ್ಮದ್ ಯೂಸುಫ್ ಇಬ್ರಾಹಿಂ ಅವರ ಮಕ್ಕಳು.
ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ತಾನೇ ಹೊಣೆಗಾರ ಎಂದು ಘೋಷಿಸಿಕೊಂಡ ಬೆನ್ನಲ್ಲೇ, ಆತ್ಮಾಹುತಿ ಬಾಂಬರ್ಗಳು ಶ್ರೀಲಂಕಾದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರು ಎಂಬುದು ಇನ್ನಷ್ಟು ಆಘಾತ ಮೂಡಿಸಿದೆ.

ಜಾಲದ ಸುಳಿವಿಗೆ ಹುಡುಕಾಟ
ದಾಳಿಯ ಬಳಿಕ ಇಬ್ರಾಹಿಂ ಕುಟುಂಬವನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಯೂಸುಫ್ ಇಬ್ರಾಹಿಂನ ಮನೆಯನ್ನು ಶೋಧಿಸುವ ಸಂದರ್ಭದಲ್ಲಿ ಸ್ಫೋಟಗಳು ಸಿಡಿದು ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಬ್ರಾಹಿಂನ ಕಿರಿಯ ದೇಶಭ್ರಷ್ಟ ಮಗನ ತರಬೇತಿ ಶಿಬಿರಗಳು ಮತ್ತು ಜಿಹಾದಿ ಜಾಲದ ಬಗ್ಗೆ ಮಹತ್ವದ ಸುಳಿವು ಸಿಗಬಹುದು ಎಂದು ಪೊಲೀಸರು ನಿರೀಕ್ಷೆಯಲ್ಲಿದ್ದಾರೆ.

ಮಧ್ಯಮ -ಮೇಲ್ಮಧ್ಯಮ ವರ್ಗದವರು
'ಈ ಆತ್ಮಾಹುತಿ ಬಾಮಬ್ ದಾಳಿಕೋರರ ಗುಂಪು ಸುಶಿಕ್ಷಿತರು ಮತ್ತು ಮಧ್ಯಮ-ಮೇಲ್ಮಧ್ಯಮ ವರ್ಗದಿಂದ ಬಂದವರು. ಅವರು ಆರ್ಥಿಕವಾಗಿ ಸಾಕಷ್ಟು ಸ್ವತಂತ್ರರಾಗಿದ್ದರು. ಅವರ ಕುಟುಂಬಗಳು ಸಹ ಆರ್ಥಿಕವಾಗಿ ಸದೃಢವಾಗಿವೆ. ಈ ಸಂಗತಿಯೇ ನಮ್ಮಲ್ಲಿ ಹೆಚ್ಚು ಆತಂಕ ಮೂಡಿಸಿದೆ' ಎಂದು ಶ್ರೀಲಂಕಾ ರಕ್ಷಣಾ ಸಚಿವ ರಾವಣ್ ವಿಜೆವರ್ದನೆ ಹೇಳಿದ್ದಾರೆ.

ಬ್ರಿಟನ್, ಆಸ್ಟ್ರೇಲಿಯಾದಲ್ಲಿ ಓದಿದವ
ಒಬ್ಬ ಆತ್ಮಾಹುತಿ ದಾಳಿಕೋರ ಯುಕೆಯಲ್ಲಿ ಓದಿದ್ದ. ಆತ ಸ್ನಾತಕೋತ್ತರ ಪದವಿ ಮುಗಿಸಿದ್ದು ಆಸ್ಟ್ರೇಲಿಯಾದಲ್ಲಿ. ಆತ ವಿದೇಶದಲ್ಲಿದ್ದಾಗ ಉಗ್ರವಾದದ ಕಡೆಗೆ ಆಕರ್ಷಿತನಾದನೇ ಅಥವಾ ಶ್ರೀಲಂಕಾಕ್ಕೆ ಮರಳಿದ ಬಳಿಕವೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ದಾಳಿಕೋರರಲ್ಲಿ ಕೆಲವರು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಅನೇಕರು ಬೇರೆ ಬೇರೆ ದೇಶಗಳಲ್ಲಿ ಓದಿ ಬಂದವರಾಗಿದ್ದಾರೆ.












Click it and Unblock the Notifications