ಭೀಕರ ಬಿಸಿಗಾಳಿ, ಬೆಂಕಿಯ ಬಲೆಗೆ ಸಿಲುಕಿದ ಯುರೋಪ್ ರಾಷ್ಟ್ರಗಳು!
ಯುರೋಪ್ ರಾಷ್ಟ್ರಗಳಿಗೆ 2020ರ ನಂತರ ನೆಮ್ಮದಿಯೇ ಇಲ್ಲ. ಒಂದು ಕಡೆ ಕೊರೊನಾ ಸೋಂಕು ವಕ್ಕರಿಸಿ ಇಡೀ ಯುರೋಪ್ನ ಆರ್ಥಿಕವಾಗಿ ದಿವಾಳಿ ಮಾಡಿದೆ. ಮತ್ತೊಂದು ಕಡೆ ವಾತಾವರಣ ಬದಲಾವಣೆ ಕೂಡ ಇಂತಹದ್ದೇ ಪರಿಸ್ಥಿತಿ ನಿರ್ಮಾಣ ಮಾಡಿದೆ. ಅದರಲ್ಲೂ ಈ ಬಾರಿಯ ಬೇಸಿಗೆ ಯುರೋಪ್ನ ಜನರ ಪಾಲಿಗೆ ಅಕ್ಷರಶಃ ನರಕ ತೋರಿಸುತ್ತಿದೆ.
ದಕ್ಷಿಣ ಯುರೋಪ್ನಲ್ಲಿ ತೀವ್ರಗೊಂಡಿರುವ ಬಿಸಿಗಾಳಿ ಮತ್ತು ಕಾಡ್ಗಿಚ್ಚು ಲಕ್ಷ ಲಕ್ಷ ಹೆಕ್ಟೇರ್ ಕಾಡನ್ನು ಸುಟ್ಟು ಹಾಕಿದೆ. ಈಗಾಗಲೇ ಸುಮಾರು 1 ಲಕ್ಷ 36 ಸಾವಿರ ಹೆಕ್ಟೇರ್ ಕಾಡು ಸುಟ್ಟು ಹೋಗಿದೆ ಎನ್ನಲಾಗಿದೆ. ಮತ್ತೊಂದ್ಕಡೆ ಟರ್ಕಿಗೂ ಕಾಡ್ಗಿಚ್ಚು ಈ ಹಬ್ಬಿ ಬಿಟ್ಟಿದೆ. 30 ಪ್ರಾಂತ್ಯಗಳ ಪೈಕಿ 130ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಾಡ್ಗಿಚ್ಚು ಆವರಿಸಿದೆ.
ಒಂದ್ಕಡೆ ಬಿಸಿಗಾಳಿ, ಮತ್ತೊಂದ್ಕಡೆ ಕಾಡ್ಗಿಚ್ಚು ಟರ್ಕಿಯಲ್ಲಿ ಆತಂಕ ಸೃಷ್ಟಿಸಿದೆ. ಅದೆಷ್ಟು ಕಂಟ್ರೋಲ್ ಮಾಡಿದ್ರೂ ಬೆಂಕಿ ಹಿಡಿತಕ್ಕೆ ಸಿಗುತ್ತಿಲ್ಲ. ಕೆಲವು ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕಿಟಕಿ, ಬಾಗಿಲು ಭದ್ರ ಮಾಡಿ..!
ದಕ್ಷಿಣ ಯುರೋಪ್ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಕಾಲ ಯಾವುದೇ ಕಾರಣಕ್ಕೂ ಮನೆಯ ಕಿಟಕಿ ಹಾಗೂ ಬಾಗಿಲು ತೆರೆಯದಂತೆ ಎಚ್ಚರಿಕೆ ನೀಡಲಾಗಿದೆ. ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವ ಬಿಸಿ ಗಾಳಿ ಹಾಗೂ ಎಲ್ಲೆಡೆ ಆವರಿಸುತ್ತಿರುವ ಕಾಡ್ಗಿಚ್ಚು ಬಲಿಪಡೆಯಲು ಕಾದು ಕೂತಿದೆ. ಹೀಗಾಗಿ ಪ್ರವಾಸಿಗರನ್ನೂ ಹೊರ ಹೋಗುವಂತೆ ಸೂಚಿಸಲಾಗಿದ್ದು, ಸ್ಥಳೀಯರು ಮನೆ ಬಿಟ್ಟು ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಕಿಟಕಿ ಹಾಗೂ ಬಾಗಿಲು ಬಂದ್ ಮಾಡಿ ಬಿಸಿಗಾಳಿ ಒಳಗೆ ಬಾರದಂತೆ ತಡೆಯಿರಿ ಎಂದು ಮುನ್ನೆಚ್ಚರಿಕೆ ನೀಡಿದೆ ಸ್ಥಳೀಯ ಆಡಳಿತ.
ಟರ್ಕಿ ಪರಿಸ್ಥಿತಿಯೇ ಭಯಾನಕ..!
ಟರ್ಕಿಯಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಭೀಕರವಾಗುತ್ತಿದೆ. ಟರ್ಕಿ ತನ್ನ ದೇಶದ ಶೇಕಡಾ 50ರಷ್ಟು ಅರಣ್ಯವನ್ನೆಲ್ಲಾ ಗಣಿಗಾರಿಕೆ ನಡೆಸಲು ಬಾಡಿಗೆ ನೀಡಿದೆ. ಹೀಗಾಗಿ ಕಾಡ್ಗಿಚ್ಚು ನಿಯಂತ್ರಣ ಮಾಡುವುದು ಮತ್ತಷ್ಟು ಕಷ್ಟವಾಗಿದೆ. ಉತ್ತರ ಭಾಗದಿಂದ ಬೀಸುತ್ತಿರುವ ಬಿಸಿಗಾಳಿ ಮತ್ತಷ್ಟು ಪ್ರದೇಶಗಳಿಗೆ ಬೆಂಕಿ ಹಬ್ಬುವಂತೆ ಮಾಡಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಜೀವದ ಹಂಗುಬಿಟ್ಟು ಕಾಡ್ಗಿಚ್ಚನ್ನು ಹಿಡಿತಕ್ಕೆ ತರಲು ಪರದಾಡುತ್ತಿದ್ದಾರೆ. ಆದರೆ ಅಲ್ಲಿನ ಸರ್ಕಾರಕ್ಕೆ ಮಾತ್ರ ತನ್ನ ತಪ್ಪಿನ ಅರಿವು ಇನ್ನೂ ಆಗಿಲ್ಲ.
ಕರಗಿ ನೀರಾಗುತ್ತಿದೆ ಹಿಮ
ಎಷ್ಟೇ ಹೇಳಿದರೂ, ಎಷ್ಟೇ ಬೇಡಿದರೂ ಮಾನವ ಪ್ರಕೃತಿ ಮೇಲೆ ತೋರುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ. ಇದರ ಎಫೆಕ್ಟ್ ಭೂಮಿ ಮೇಲಾಗುತ್ತಿದೆ. ಇದು ಮಾನವನಿಗೇ 'ತಿರುಗಬಾಣ'ವಾಗುತ್ತಿದ್ದು, ಪ್ರಕೃತಿ ಮೇಲಿನ ದೌರ್ಜನ್ಯ ರಿಸಲ್ಟ್ ಕೊಡುತ್ತಿದೆ. ಗ್ರೀನ್ ಲ್ಯಾಂಡ್ನಲ್ಲಿರುವ ಹಿಮಪದರ ಸುಮಾರು 17 ಲಕ್ಷ ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿದ್ದು, ಇದು ಮುಂದಿನ 900 ವರ್ಷದಲ್ಲಿ ಕರಗಿ ನೀರಾಗಿ ಸಮುದ್ರ ಸೇರಲಿದೆ. ಅಲ್ಲಿಗೆ ಮಾನವನ ಭವಿಷ್ಯ ನಾಶವಾಗಿ ಹೋಗಲಿದೆ ಎಂದು ಕೋಪನ್ ಹೇಗನ್ ವಿವಿ, ನಾರ್ವೆಯ ಆರ್ಕ್ಟಿಕ್ ವಿವಿ ಅಧ್ಯಯನ ತಿಳಿಸಿದೆ.
ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ..!
ಭೂಮಿ ಮೇಲೆ ತಾಪಮಾನ ಏರಿಕೆ ಹಾಗೂ ವಾತಾವರಣ ಬದಲಾವಣೆ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದೆ. ವಿಜ್ಞಾನಿಗಳು ಅದೆಷ್ಟು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾಯಕನ ಸ್ಥಾನದಲ್ಲಿ ನಿಂತು, ಈ ಸಮಸ್ಯೆ ಬಗೆಹರಿಸಲು ಬಲಾಢ್ಯ ರಾಷ್ಟ್ರಗಳು ಮುಂದಾಗಬೇಕಿದೆ. ಅದರಲ್ಲೂ ಜಾಗತಿಕ ಶಕ್ತಿಗಳು ಎಂದೇ ಗುರುತಿಸಿಕೊಂಡಿರುವ ಅಮೆರಿಕ-ಚೀನಾ ಭೂಮಿ ತಾಪಮಾನ ನಿಯಂತ್ರಣಕ್ಕೆ ತರುವ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕಿದೆ. ಆದರೆ ಇಷ್ಟು ದಿನ ಅದು ಸಾಧ್ಯವಾಗಿರಲಿಲ್ಲ. ಈಗ ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ.
ಚೀನಾ ಸಾಧನೆ ಜಗತ್ತಿಗೆ ಮಾದರಿ
10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.
ಕ್ಲೈಮೆಟ್ ಚೇಂಜ್ ಎಫೆಕ್ಟ್
ಮಳೆಗಾಲದಲ್ಲಿ ವಿಪರೀತ ಬಿಸಿಲು, ಚಳಿಗಾಲದಲ್ಲಿ ಮಳೆ, ಇನ್ನು ಬೇಸಿಗೆಯಲ್ಲೂ ವರುಣನ ಅಬ್ಬರ. ಹೀಗೆ ಭೂ ವಾತಾವರಣ ವಿಪರೀತ ಬದಲಾಗುತ್ತಿದೆ. ಮಾನವನ ದುರಾಸೆಯಿಂದಾಗಿ ಮಾಲಿನ್ಯ ಸೃಷ್ಟಿಯಾಗಿದೆ. ಮಾಲಿನ್ಯದ ಪರಿಣಾಮ ಭೂಮಿ ಮೇಲಿನ ವಾತಾವರಣ ನಾಶವಾಗುತ್ತಿದೆ. ಯಾವ ಸಮಯದಲ್ಲಿ ಏನಾಗಬೇಕೋ ಅದೆಲ್ಲಾ ಉಲ್ಟಾ ಆಗುತ್ತಿದೆ. ಇದು ಪರಿಸ್ಥಿತಿಯನ್ನ ಮತ್ತಷ್ಟು ಕಠಿಣಗೊಳಿಸಿದೆ. ರೈತರ ಬೆಳೆ ನಾಶವಾಗುವ ಜೊತೆಗೆ ಇದು ಆಹಾರ ಭದ್ರತೆಗೂ ಕಂಟಕ ಎದುರಾಗುವಂತೆ ಮಾಡಿದೆ. ಅಕಾಲಿಕ ಮಳೆ ನೂರಾರು ಅವಾಂತರ ಸೃಷ್ಟಿಸುತ್ತಿದೆ.