ಸಿಂಗಾಪುರದಿಂದ 52 ಭಾರತೀಯರು ಗಡಿಪಾರು
ಸಿಂಗಾಪುರ, ಡಿ.17: ಸುಮಾರು 40 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಭೀಕರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗಾಪುರ ಸರ್ಕಾರ ಕಠಿಣ ಕ್ರಮ ಜರುಗಿಸಿದೆ. 52 ಮಂದಿ ಭಾರತೀಯರನ್ನು ಗಡಿಪಾರುಗೊಳಿಸಲು ಪರಿಶೀಲನೆ ನಡೆಸಿದ್ದು, ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನಿತರ ಸುಮಾರು 200 ಮಂದಿಗೆ ಎಚ್ಚರಿಕೆ ನೀಡಲಾಗಿದೆ.
ಡಿಸೆಂಬರ್ 8ರಂದು ಭಾರತೀಯ ಸಮುದಾಯವೇ ಪ್ರಮುಖವಾಗಿ ನೆಲೆಸಿರುವ 'ಲಿಟ್ಲ್ ಇಂಡಿಯಾ' ಪ್ರದೇಶದಲ್ಲಿ ಖಾಸಗಿ ಬಸ್ಸೊಂದು ಭಾರತೀಯನೋರ್ವನಿಗೆ ಢಿಕ್ಕಿ ಹೊಡೆದು ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯವು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಹಿಂಸಾಚಾರದ ವೇಳೆ ಹಲವರು ಗಾಯಗೊಂಡಿದ್ದು, ಅನೇಕ ವಾಹನಗಳು ಜಖಂಗೊಂಡಿದ್ದವು. ಗಾಯಗೊಂಡವರಲ್ಲಿ 10 ಜನ ಪೊಲೀಸ್ ಅಧಿಕಾರಿಗಳು ಮತ್ತು 4 ಜನರು ರಕ್ಷಣಾ ಸಿಬ್ಬಂದಿ ಇದ್ದರು. [ಲಿಟ್ಲ್ ಇಂಡಿಯಾದಲ್ಲಿ ಭುಗಿಲೆದ್ದ ಹಿಂಸಾಚಾರ]

ಸಿಂಗಾಪುರದಲ್ಲಿ 1969ರಲ್ಲಿ ಇಂಥದ್ದೇ ಭೀಕರ ಹಿಂಸಾಚಾರ ಘಟನೆ ಸಂಭವಿಸಿತ್ತು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 53 ಮಂದಿ(ಓರ್ವ ಬಾಂಗ್ಲಾ ಪ್ರಜೆಯನ್ನು ಹೊರತುಪಡಿಸಿ ಉಳಿದವರೆಲ್ಲರೂ ಭಾರತೀಯರು)ಯನ್ನು ಶೀಘ್ರದಲ್ಲೇ ಗಡಿಪಾರುಗೊಳಿಸಲಾಗುವುದು ಮತ್ತು ಅವರು ಮರಳಿ ಸಿಂಗಾಪುರಕ್ಕೆ ಬರುವುದರ ವಿರುದ್ಧ ನಿಷೇಧ ಹೇರಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. [ಕೆಂಪು ಚುಕ್ಕೆಯ ಮೇಲೊಂದು ಕಪ್ಪು ಚುಕ್ಕೆ]
ಏಳು ಮಂದಿಯನ್ನು ಆರೋಪಗಳಿಂದ ಮುಕ್ತಗೊಳಿಸಲಾಗಿದ್ದು, ಒಟ್ಟು 28 ಮಂದಿ ವಿದೇಶಿ ಕಾರ್ಮಿಕ ವಿರುದ್ಧ ಗಲಭೆ ದೋಷಾರೋಪ ಹೊರಿಸಲಾಗಿದೆ. ಇವರೆಲ್ಲರೂ ಭಾರತೀಯರಾಗಿದ್ದು, ಆರೋಪ ಸಾಬೀತಾದಲ್ಲಿ ಏಳು ವರ್ಷಗಳ ಜೈಲುವಾಸ ಹಾಗೂ ಛಡಿಯೇಟು ಶಿಕ್ಷೆ ಎದುರಿಸಲಿದ್ದಾರೆ.
ಪೊಲೀಸರು ಪ್ರಕರಣದ ತನಿಖೆಯನ್ನು ಕಳೆದ ಹತ್ತು ದಿನಗಳ ಅವಧಿಯಲ್ಲಿ ಬಹುತೇಕ ಪೂರ್ಣಗೊಳಿಸಿದ್ದು, ಹೆಚ್ಚಿನ ಬಂಧನ ನಡೆಯುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ ಎಂದು ವರದಿಗಳು ತಿಳಿಸಿವೆ. (ಪಿಟಿಐ)












Click it and Unblock the Notifications