ಟರ್ಕಿಯಲ್ಲಿ ರಷ್ಯಾ-ಉಕ್ರೇನ್ ಮುಖಾಮುಖಿ; ಶಾಂತಿ ಮಾತುಕತೆ
ಮಾಸ್ಕೋ, ಮಾರ್ಚ್ 29; ರಷ್ಯಾ ಮತ್ತು ಉಕ್ರೇನ್ ನಡುವಿನ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಮಂಗಳವಾರ ನಡೆಯಲಿರುವ ಮಾತುಕತೆಯಲ್ಲಿ ಕದನ ವಿರಾಮ ಘೋಷಣೆ ಮಾಡಲು ಉಕ್ರೇನ್ ಒತ್ತಾಯಿಸಲಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆ ಮಂಗಳವಾರ ಟರ್ಕಿಯಲ್ಲಿ ಆರಂಭವಾಗಬಹುದು ಎಂದು ರಷ್ಯಾ ಹೇಳಿದೆ. ಉಭಯ ದೇಶಗಳ ಸಂಧಾನಕಾರರು ಸೋಮವಾರ ಟರ್ಕಿಗೆ ಆಗಮಿಸಿದ್ದಾರೆ. ಮಂಗಳವಾರ ನಡೆಯಬಹುದಾದ ಸಭೆ ಜಗತ್ತಿನಲ್ಲಿಯೇ ಕುತೂಹಲಕ್ಕೆ ಕಾರಣವಾಗಿದೆ.
ಕ್ರೆಮ್ಲಿನ್ನ ವಕ್ತಾರ ಡಿಮಿಟ್ರಿ ಪೆಸ್ಕೂವ್ ಈ ಕುರಿತು ಮಾತನಾಡಿದ್ದು, "ಮಾತುಕತೆ ನೆಯುತ್ತಿರುವ ಬಗ್ಗೆಯಾಗಲಿ, ಇದರ ಪ್ರಗತಿ ಬಗ್ಗೆಯಾಗಲಿ ನಾನು ಚರ್ಚೆ ನಡೆಸುವುದಿಲ್ಲ. ಉಭಯ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗುವುದೇ ಮಹತ್ವದ್ದು" ಎಂದು ಹೇಳಿದ್ದಾರೆ.

"ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮುಖಾಮುಖಿಯಾಗಿ ಮಾತುಕತೆ ನಡೆಸುವ ಯಾವುದೇ ಸಾಧ್ಯತೆ ಇಲ್ಲ. ಅಂತಹ ಚಿಂತನೆ ಸಹ ನಮ್ಮಲ್ಲಿ ಇಲ್ಲ" ಎಂದು ಡಿಮಿಟ್ರಿ ಪೆಸ್ಕೂವ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೋವ್ ಮಾತನಾಡಿ, "ಇಂತಹ ಸನ್ನಿವೇಶದಲ್ಲಿ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರು ಮುಖಾಮುಖಿ ಮಾತುಕತೆ ನಡೆಸುವುದು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಪ್ರತಿನಿಧಿಗಳ ಶಾಂತಿ ಮಾತುಕತೆಯಲ್ಲಿ ಏನಾದರೂ ಪ್ರಗತಿ ಕಂಡುಬಂದರೆ ಉಭಯ ನಾಯಕರು ಭೇಟಿಯಾಗಬಹುದು" ಎಂದರು.
ಒಂದು ವೇಳೆ ಮಂಗಳವಾರ ಟರ್ಕಿಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳ ನಡುವೆ ಮಾತುಕತೆ ಆರಂಭವಾದರೆ ರಷ್ಯಾ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ಮೊದಲು ಬೇಡಿಕೆ ಇಡಲಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿ, "ರಷ್ಯಾ ಅಧ್ಯಕ್ಷರ ಜೊತೆಗಿನ ನೇರ ಮುಖಾಮುಖಿ ಭೇಟಿ ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು. ನಾವು ರಷ್ಯಾ ಜೊತೆ ಒಪ್ಪಂದವೊದಕ್ಕೆ ಬರಬೇಕಿದೆ. ಅದಕ್ಕಾಗಿ ಅಧ್ಯಕ್ಷರನ್ನು ನೇರವಾಗಿ ಭೇಟಿಯಾಗಬೇಕು" ಎಂದು ಸೋಮವಾರ ಹೇಳಿದ್ದರು.
ಎರಡು ದೇಶಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ಧವಾದಾಗ, "ಉಕ್ರೇನ್ ತನ್ನ ತಟಸ್ಥ ನಿಲುವನ್ನು ಘೋಷಣೆ ಮಾಡಲು ಮತ್ತು ಶಾಂತಿ ಪಾಲಿಸಲು ರಷ್ಯಾಗೆ ಖಾತರಿ ನೀಡಲು ಸಿದ್ಧವಾಗಿದೆ" ಎಂದು ಉಕ್ರೇನ್ ಅಧ್ಯಕ್ಷರು ಹೇಳಿದ್ದರು.
ನ್ಯಾಟೋ ಒಕ್ಕೂಟದಿಂದ ಉಕ್ರೇನ್ ಅಂತರ ಕಾಯ್ದುಕೊಳ್ಳಬೇಕು ಎಂಬುದು ರಷ್ಯಾದ ಪ್ರಮುಖ ಬೇಡಿಕೆಯಾಗಿದೆ. ನ್ಯಾಟೋ ಮತ್ತು ಇತರ ಮಿಲಿಟರಿ ಒಕ್ಕೂಟದಿಂದ ಹೊರಗುಳಿಯುವ ಕುರಿತು ನಾವು ದೇಶದ ಜನರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ ಎಂದು ಉಕ್ರೇನ್ ಹೇಳಿದೆ.
33 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ರಷ್ಯಾ ದಾಳಿ ಆರಂಭವಾದ ಬಳಿಕ ಉಕ್ರೇನ್ನಿಂದ ಸುಮಾರು 40 ಲಕ್ಷ ಮಂದಿ ಇತರ ದೇಶಗಳಿಗೆ ವಲಸೆ ಹೋಗಿದ್ದಾರೆ.
ರಷ್ಯಾ ದಾಳಿ ಆರಂಭವಾದ ಬಳಿಕ ಇದುವರೆಗೂ ಉಕ್ರೇನ್ನ ಮರಿಯಪೋಲ್ನಲ್ಲಿ 5 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ.
ಮರಿಯಪೋಲ್ನಲ್ಲಿ 1 ಲಕ್ಷಕ್ಕೂ ಅಧಿಕ ಜನರು ಇದ್ದು, ಅವರು ರಷ್ಯಾ ಸೇನೆಯಿಂದ ಸುತ್ತುವರಿಲ್ಪಟ್ಟಿದ್ದಾರೆ. ಆಹಾರ ಮತ್ತು ಔಷಧಿಗಳಿಗಾಗಿ ಕಾದು ಕುಳಿತಿದ್ದಾರೆ. ರಷ್ಯಾದ ದಾಳಿಯಿಂದಾಗಿ ಇದುವರೆಗೂ ಉಕ್ರೇನ್ಗೆ 43 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ.
ಉಕ್ರೇನ್ ಹಣಕಾಸು ಸಚಿವೆ ಯೂಲಿಯಾ ಸಿವಿರಿಡೆಂಕೊ ಸೋಮವಾರ ಮಾತನಾಡಿ, "ರಷ್ಯಾ ದಾಳಿಯಿಂದಾಗಿ ಮೂಲ ಸೌಕರ್ಯ ಕ್ಷೇತ್ರಕ್ಕೆ ಅಪಾರ ಹಾನಿಯಾಗಿದೆ. 8 ಸಾವಿರ ಕಿ. ಮೀ. ಉದ್ದದ ರಸ್ತೆಗೆ ಹಾನಿಯಾಗಿದೆ" ಎಂದು ಹೇಳಿದ್ದಾರೆ.
ರಷ್ಯಾ ಮೇಲಿನ ನಿರ್ಬಂಧಗಳು ಮುಂದುವರೆದಿದ್ದು ಶ್ರೀಲಂಕಾ ರಷ್ಯಾಗೆ ವಿಮಾನ ಸೇವೆ ಸ್ಥಗಿತಗೊಳಿಸಿದೆ. ಶ್ರೀಲಂಕಾದಿಂದ ಮಾಸ್ಕೋಗೆ ಹಾರಾಟ ನಡೆಸುವ ಎಲ್ಲಾ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ.












Click it and Unblock the Notifications