Breaking; ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ
ಕೊಲಂಬೋ, ಜುಲೈ 18; ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟ ಬಳಿಕ ಜನರು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ ಭಾನುವಾರ 100ನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಜನರ ಆಕ್ರೋಶಕ್ಕೆ ಮಣಿದು ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಆದರೆ ಜನರ ಮುಂದಿನ ಗುರಿ ರಾನಿಲ್ ವಿಕ್ರಮಸಿಂಘೆ ಅವರಾಗಿದ್ದಾರೆ. ದೇಶದ ಅಧ್ಯಕ್ಷೀಯ ವ್ಯವಸ್ಥೆ ರದ್ದುಪಡಿಸುವುದು ಸೇರಿದಂತೆ ದೇಶದ ಆಡಳಿತ ಸಂಪೂರ್ಣ ಬದಲಾಗುವ ತನಕ ಪ್ರತಿಭಟನೆ ಮುಂದುವರೆಸಲು ಜನರು ತೀರ್ಮಾನಿಸಿದ್ದಾರೆ.
ಸರ್ಕಾರದ ಬಗ್ಗೆ ನಮಗೆ ಭೀತಿಯಲ್ಲಿ ಅಧ್ಯಕ್ಷೀಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ. ಅದನ್ನು ನಾವು ಬದಲಾವಣೆ ಮಾಡಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ ಎಂದು ಜನರು ಹೇಳಿದ್ದಾರೆ.
Acting Sri Lankan President Ranil Wickremesinghe declares a State Of Emergency in the country. pic.twitter.com/ycDwJupUa3
— ANI (@ANI) July 18, 2022
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಏಪ್ರಿಲ್ 9ರಂದು ಜನರು ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಮುಂತಾದವುಗಳ ವಿರುದ್ಧ ಜನರು ಸಿಡಿದೆದ್ದರು.
ಕಳೆದ ವಾರ ಜನರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿತ್ತು. ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ನಿವಾಸಕ್ಕೆ ಜನರು ಮುತ್ತಿಗೆ ಹಾಕಿದ್ದರು. ಅಧ್ಯಕ್ಷರು ಶ್ರೀಲಂಕಾದಿಂದ ಸಿಂಗಾಪುರಕ್ಕೆ ಪರಾರಿಯಾಗಿದ್ದರು.
ಮುಂದಿನ ಅಧ್ಯಕ್ಷರ ಆಯ್ಕೆ; ಜುಲೈ 20ರಂದು ಶ್ರೀಲಂಕಾದ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. 225 ಸಂಸದರು ರಹಸ್ಯ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಈ ಬಾರಿ ಜನಾದೇಶದ ಮೂಲಕ ಪ್ರಧಾನಿಯನ್ನು ಆಯ್ಕೆ ಮಾಡಲಾಗುವುದಿಲ್ಲ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿದ್ದಾರೆ.












Click it and Unblock the Notifications