ರಾಹುಲ್ ಗಾಂಧಿ ಮಾತಿನ ಚಾತುರ್ಯ, ಮೊನಚು ವ್ಯಂಗ್ಯ!
ಬರ್ಕಲಿ, ಸೆಪ್ಟೆಂಬರ್ 12 : ಮಾತುಗಾರಿಕೆಯಲ್ಲಿ ಚತುರರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು, ಅಮೆರಿಕಾದ ಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿರುವ ಭಾಷಣದಲ್ಲಿ ಕೆಲವೊಂದು ಸಂಗತಿಗಳು ತಮಾಷೆಯಿಂದ ಕೂಡಿದ್ದರೂ, ಕೇಳುಗರನ್ನು ಚಿಂತನೆಗೆ ಹಚ್ಚಿವೆ.
ಮಾಡರೇಟರ್ ಮುಖಾಂತರ ಅವರಿಗೆ ಕೇಳಲಾಗುತ್ತಿದ್ದ ಪ್ರಶ್ನೆಗೆ ಅವರು ಅತ್ಯಂತ ಸರಾಗವಾಗಿ ಮತ್ತು ಅತ್ಯಂತ ಚಾತುರ್ಯತೆಯಿಂದ ಉತ್ತರಗಳನ್ನು ನೀಡಿದ್ದಾರೆ. ಬಿಜೆಪಿ ಸ್ಥಾಪಿಸಿರುವ ಸೋಷಿಯಲ್ ಮೀಡಿಯಾ ತಂಡ ಹೇಗೆ ತಮ್ಮ ಹಿಂದೆ ಬಿದ್ದಿದೆ ಎಂಬುದರಿಂದ ಹಿಡಿದುಕೊಂಡು ವಂಶಪಾರಂಪರ್ಯವಾಗಿ ಮುಂದುವರಿಯುತ್ತಿರುವ ಕುಟುಂಬ ರಾಜಕಾರಣದ ಬಗ್ಗೆ ಅವರು ಅತ್ಯಂತ ರೋಚಕವಾಗಿ ಉತ್ತರ ನೀಡಿದ್ದಾರೆ.
ನರೇಂದ್ರ ಮೋದಿಯವರು ಮಾತುಗಾರಿಕೆಯಲ್ಲಿ ಅತ್ಯಂತ ನಿಪುಣರು ಅವರನ್ನು ಹೊಗಳುತ್ತಲೇ ವ್ಯಂಗ್ಯದ ಚಾಟಿ ಬೀಸಿದ್ದಾರೆ. ಮೋದಿಯವರು ಅತ್ಯುತ್ತಮ ವಾಗ್ಮಿಯಾಗಿದ್ದಾರೆ ಎಂದು ಹೇಳುತ್ತಲೇ, ಅವರು ತಮ್ಮ ಬಿಜೆಪಿಯ ನಾಯಕರೊಂದಿಗೇ ಸರಿಯಾಗಿ ಮಾತನಾಡುವುದಿಲ್ಲ ಎಂದು ಕುಟುಕಿದ್ದಾರೆ.
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಪೂರ್ವಭಾವಿಯಾಗಿ ಜ್ಞಾನಾರ್ಜನೆ, ಚಿಂತನೆ, ವಿದೇಶದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಹನ ನಡೆಸುವ ಉದ್ದೇಶದಿಂದ ಅಮೆರಿಕ ಮತ್ತಿತರ ದೇಶ ಸುತ್ತಲಿರುವ ರಾಹುಲ್ ಗಾಂಧಿಯವರು ಸದ್ಯಕ್ಕೆ ಬರ್ಕಲಿಯಲ್ಲಿದ್ದಾರೆ. ಅವರ ಕೆಲವೊಂದು ಮಾತುಗಳು ಹೇಗಿವೆ ಮುಂದೆ ಓದಿರಿ.

ಬಿಜೆಪಿಯಲ್ಲಿ ಒಂದು ಅತ್ಯದ್ಭುತ ಮಷೀನ್ ಇದೆ
"ಬಿಜೆಪಿಯಲ್ಲಿ ಮಷೀನ್ ಇದೆ. ಅತ್ಯದ್ಭುತ ಯಂತ್ರವದು. ಸಾವಿರ ಜನರು ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತುಕೊಂಡು ನನ್ನ ಬಗ್ಗೆ ಇಲ್ಲಸಲ್ಲದ ಸಂಗತಿಗಳನ್ನು ಹಬ್ಬಿಸುತ್ತಿರುತ್ತಾರೆ, ಆರೋಪ ಮಾಡುತ್ತಿರುತ್ತಾರೆ. ಇಡೀ ಕಾರ್ಯನಿರ್ವಹಣೆಯನ್ನು ಈ ದೇಶವನ್ನಾಳುತ್ತಿರುವ ಜಂಟಲ್ಮ್ಯಾನ್ ಮಾಡುತ್ತಿದ್ದಾರೆ."

ಒಗ್ಗದ ರಾಜಕಾರಣಿ, ನಾನೊಬ್ಬ ಶತಮೂರ್ಖ
ಆ ಬಿಜೆಪಿ ಮಷೀನ್ ಮಾಡುವ ಕೆಲಸವಿಷ್ಟೇ. ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದು. 'ನಾನೊಬ್ಬ ರಾಜಕೀಯಕ್ಕೆ ಒಗ್ಗದ ರಾಜಕಾರಣಿ', 'ನಾನೊಬ್ಬ ಶತಮೂರ್ಖ' ಎಂಬಿತ್ಯಾದಿಯಾಗಿ ಆ ಸಾವಿರ ಕಂಪ್ಯೂಟರ್ ತಜ್ಞರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ.

ಇಡೀ ದೇಶದಲ್ಲೇ ಕುಟುಂಬ ರಾಜಕಾರಣವಿದೆ
ಕುಟುಂಬ ಪಾರಂಪರ್ಯವಾಗಿ ನಡೆಸುತ್ತಿರುವ ರಾಜಕಾರಣದ ಬಗ್ಗೆ ಕೇಳಿದಾಗ, ದಯವಿಟ್ಟು ಕೇವಲ ನನ್ನ ಹಿಂದೆ ಮಾತ್ರ ಬೀಳಬೇಡಿ, ಇಡೀ ದೇಶ ಮಾಡುತ್ತಿರುವುದೂ ಅದನ್ನೇ. ಅಖಿಲೇಶ್ ಯಾದವ್, ಸ್ಟಾಲಿನ್, ಪ್ರೇಮ್ ಕುಮಾರ್ ಧುಮಾಲ್ ಇವರೆಲ್ಲ ಕುಟುಂಬ ರಾಜಕಾರಣ ಮಾಡುತ್ತಿರುವವರೇ. ಅಷ್ಟೇ ಏಕೆ, ಅಭಿಷೇಕ್ ಬಚ್ಚನ್, ಅಂಬಾನಿ ಇವರು ಕೂಡ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಜಾಣ್ಮೆಯಿಂದ ಉತ್ತರಿಸಿದರು.

ಕಾಂಗ್ರೆಸ್ ಅಧ್ಯಕ್ಷನಾಗಲು ನಾನು ಸನ್ನದ್ಧ
ಸದ್ಯಕ್ಕೆ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಅವರು ಅಧ್ಯಕ್ಷರಾಗುವುದು ಎಂದು ಎಂಬ ಪ್ರಶ್ನೆ ತೂರಿಬಂದಾಗ, ನಾನು ಆ ಜವಾಬ್ದಾರಿ ಹೊರಲು ಸಂಪೂರ್ಣ ಸಿದ್ಧನಾಗಿದ್ದೇನೆ. ಆದರೆ, ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ನಿರ್ಧರಿಸಲಿದ್ದಾರೆ, ಮುಂದೆ ನಡೆಯುವ ಚುನಾವಣೆಯಲ್ಲಿ ಇದು ನಿರ್ಧಾರವಾಗಲಿದೆ ಎಂದು ತಾವು ಸನ್ನದ್ಧ ಎಂದು ತಿಳಿಸಿದರು.

ಮೋದಿ ಅತ್ಯದ್ಭುತ ಸಂವಹನಕಾರ
ನರೇಂದ್ರ ಮೋದಿಯವರಿಗೆ ಕೆಲ ನೈಪುಣ್ಯತೆಗಳಿವೆ. ಅವರು ಅತ್ಯದ್ಭುತ ಸಂವಹನಕಾರ, ನನಗಿಂತ ಸಾಕಷ್ಟು ಉತ್ತಮ ವಾಗ್ಮಿ. ಅವರಿಗೆ ಜನಸ್ತೋಮ ಸೇರಿದಾಗ 3-4 ವಿವಿಧ ಗುಂಪುಗಳಿಗೆ ಏನು ಸಂದೇಶ ಕೊಡಬೇಕೆಂದು ಅತ್ಯಂತ ಚೆನ್ನಾಗಿ ಗೊತ್ತು. ಅವರ ಸಂದೇಶ ರವಾನಿಸುವ ನೈಪುಣ್ಯತೆ ಅತ್ಯಂತ ಪ್ರಭಾವಶಾಲಿಯಾಗಿದೆ ಮತ್ತು ನಿಖರವಾಗಿದೆ ಎಂಬ ಅವರ ಮಾತಲ್ಲಿ ಮೊನಚಾದ ವ್ಯಂಗ್ಯವಿತ್ತು.

ತಮ್ಮ ನಾಯಕರೊಡನೆ ಮೋದಿ ಮಾತಾಡಲ್ಲ
ಆದರೆ, ನರೇಂದ್ರ ಮೋದಿ ಅವರಿಗೆ ತಾವು ಜೊತೆಯಾಗಿ ಕೆಲಸ ಮಾಡುತ್ತಿರುವವರೊಂದಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ. ಅವರ ಪಕ್ಷದ ಸಂಸದರೇ ಈ ಸಂಗತಿಯನ್ನು ನನ್ನ ಮುಂದೆ ಹೇಳಿದ್ದಾರೆ ಎಂದು ನರೇಂದ್ರ ಮೋದಿ ವಿರುದ್ಧ ಮಾತಿನ ಚಾಟಿ ಬೀಸಿದ ರಾಹುಲ್ ಗಾಂಧಿ ಕೇಳುಗರನ್ನೇ ತಬ್ಬಿಬ್ಬು ಮಾಡಿದರು.












Click it and Unblock the Notifications