ರಣಹೇಡಿ ಉಗ್ರದಾಳಿ: ಭಾರತದ ಬೆಂಬಲಕ್ಕೆ ನಿಂತ ವಿಶ್ವ
Recommended Video

ವಾಷಿಂಗ್ಟನ್, ಫೆಬ್ರವರಿ 15: ರಣಹೇಡಿ ಉಗ್ರರು ಸಿಆರ್ ಪಿಎಫ್ ಯೋಧರಿದ್ದ ಬಸ್ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಇಡೀ ವಿಶ್ವವೂ ಭಾರತದ ಬೆಂಬಲಕ್ಕೆ ನಿಂತಿದೆ.
ಅಮೆರಿಕ, ಬಾಂಗ್ಲಾದೇಶ, ಅಫಘಾನಿಸ್ತಾನ, ರಷ್ಯಾ, ಫ್ರಾನ್ಸ್, ಮಾಲ್ಡೀವ್ಸ್, ಥೈಲ್ಯಾಂಡ್, ಶ್ರೀಲಂಕಾ, ಇಸ್ರೇಲ್ ದೇಶಗಳು ಈ ಘಟನೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದು, ಭಯೋತ್ಪಾದನೆಯ ದಮನ ಈ ಹೊತ್ತಿನ ಅಗತ್ಯ ಎಂದಿವೆ.
ಗುರುವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅವಂತಿಪೊರ ಎಂಬಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾದರು.
ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಪಾಕಿಸ್ತಾನ ಹೇಳಿದ್ದರೂ, ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಪಾಕಿಸ್ತಾನ ಮೂಲದ್ದೇ ಆಗಿರುವುದರಿಂದ ಪಾಕಿಸ್ತಾನದ ಪಾತ್ರವನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ.

ಅಮೆರಿಕ
ಈ ಘಟನೆಯನ್ನು ಬಲವಾಗಿ ಖಂಡಿಸಿರುವ ಅಮೆರಿಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಎಲ್ಲಾ ಶಕ್ತಿಗಳನ್ನು ದಮನ ಮಾಡಲು ಎಲ್ಲ ದೇಶಗಳೂ ಬೆಂಬಲ ನೀಡಬೇಕು ಎಂದು ಅಮೆರಿಕ ಕರೆ ನೀಡಿದೆ. "ಅಮೆರಿಕ ಈ ದಾಳಿಯನ್ನು ಖಂಡಿಸುತ್ತದೆ. ಈ ಕೃತ್ಯದ ಹೊಣೆಯನ್ನು ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಜೈಷ್ ಇ ಮೊಹಮ್ಮದ್ ವಹಿಸಿಕೊಂಡಿದೆ. ಭಯೋತ್ಪಾದಕರಿಗೆ ನೆಲೆ ನೀಡುವ ಶಕ್ತಿಗಳನ್ನು ದಮನ ಮಾಡಲು ಎಲ್ಲ ದೇಶಗಳೂ ಒಂದಾಗಬೇಕಿದೆ. ಅದಕ್ಕಾಗಿ ವಿಶ್ವಸಂಸ್ಥೆಯ ಮೂಲಕ ಮುಂದಾಗಬೇಕಿದೆ" ಎಂದು ಅದು ಹೇಳಿದೆ. ಜೊತೆಗೆ ತಾನು ಭಾರತದೊಂದಿಗಿದ್ದೇನೆ ಎಂಬ ಸಂದೇಶ ನೀಡಿದೆ.

ಬಾಂಗ್ಲಾದೇಶ
"ಈ ಸಂಕಷ್ಟದ ಸಮಯದಲ್ಲಿ ನಾವು ಭಾರತದ ಜನತೆ ಮತ್ತು ಸರ್ಕಾರದೊಂದಿಗಿದ್ದೇವೆ. ಹುತಾತ್ಮ ಯೋಧರಿಗೆ ಮತ್ತು ಅವರ ಕುಟುಂಬಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ಬಾಂಗ್ಲಾದೇಶವನ್ನು ಭಯೋತ್ಪಾದನೆಯ ಕುರಿತು ಶೂನ್ಯ ಸಂವೇದನೆ ಹೊಂದಿದೆ ಎಂದು ಈ ಮೂಲಕ ತಿಳಿಸುತ್ತೇವೆ. ಭಯೋತ್ಪಾದನೆಯ ಹುಟ್ಟಡಗಿಸಲು ನಾವು ಭಾರತ ಮತ್ತು ವಿಶ್ವದೊಂದಿಗಿದ್ದೇವೆ" ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಅಫಘಾನಿಸ್ತಾನ
"ಕಳೆದ 18 ವರ್ಷಗಳಿಂದಲೂ ಭಯೋತ್ಪಾದನೆಯ ದಮನಕ್ಕೆ ನಾವು ಭಾರತದೊಂದಿಗಿದ್ದೇವೆ. ಈಗಲೂ ಅದೇ ಸಹಕಾರವನ್ನು ಮುಂದುವರಿಸುತ್ತೇವೆ. ಈ ಹೀನಾತಿಹೀನ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ದುಃಖದಲ್ಲಿ ನಾವು ಭಾರತದೊಂದಿಗಿದ್ದೇವೆ" ಎಂದು ಅಫಘಾನಿಸ್ತಾನದ ಆಂತರಿಕ ಸಚಿವಾಲಯದ ಸಾದಿಖ್ ಸಿದ್ದಿಖಿ ಹೇಳಿದ್ದಾರೆ.

ರಷ್ಯಾ
"ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹೀನಾತಿಹೀನ ಘಟನೆಗೆ ನನ್ನ ಸಂತಾಪಗಳು. ಈ ಬರ್ಬರ ಕೃತ್ಯವನ್ನು ನಾವು ವಿರೋಧಿಸುತ್ತೇವೆ. ಈ ಕೃತ್ಯ ಎಸಗಿದವರು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರಿಗೆ ಶಿಕ್ಷೆಯಾಗಬೇಕು. ಭಾರತಕ್ಕೆ ಭಯೋತ್ಪಾದನೆಯ ದಮನಕ್ಕೆ ಅಗತ್ಯವಿರುವ ಯಾವುದೇ ರೀತಿಯ ಸಹಕಾರವನ್ನು ನೀಡುವುದಕ್ಕೂ ರಷ್ಯಾ ಸಿದ್ಧವಿದೆ"ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಫ್ರಾನ್ಸ್
"ಈ ಘಟನೆಯನ್ನು ಫ್ರಾನ್ಸ್ ಖಂಡಿಸುತ್ತದೆ. ಹುತಾತ್ಮ ಯೋಧರ ಕುಟುಂಬಕ್ಕೆ ನಮ್ಮ ಸಂತಾಪಗಳು. ಈ ಹೀನಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಶಿಕ್ಷಿಸಬೇಕು. ರಷ್ಯಾ ಇಂಥ ಸಂಕಷ್ಟದಲ್ಲಿ ಹಿಂದೆಯೂ ಭಾರತದ ಪರ ನಿಂತಿತ್ತು, ಮುಂದೆಯೂ ನಿಲ್ಲುತ್ತದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ಫ್ರಾನ್ಸ್ ಭಾರತದೊಂದಿಗಿದೆ" ಎಂದು ಭಾರತಕ್ಕೆ ಫ್ರಾನ್ಸ್ ರಾಯಭಾರಿಯಾಗಿರುವ ಅಲೆಕ್ಸಾಂಡರ್ ಜಿಗ್ಲೆರ್ ಹೇಳಿದ್ದಾರೆ.

ಮಾಲ್ಡೀವ್ಸ್
"ನಲವತ್ತಕ್ಕೂ ಹೆಚ್ಚು ಯೋಧರ ಸಾವಿಗೆ ಕಾರಣವಾದ ಈ ದಾಳಿಯನ್ನು ನಾವು ವಿರೋಧಿಸುತ್ತೇವೆ. ಸಂತ್ರಸ್ತರಿಗೆ ನಮ್ಮ ಸಂತಾಪಗಳು. ಭಯೋತ್ಪಾದನೆಯ ದಮನಕ್ಕೆ ಭಾರತದೊಂದಿಗೆ ಮಾಲ್ಡೀವ್ಸ್ ಸಹ ನಿಲ್ಲಲಿದೆ" ಎಂದು ಮಾಲ್ಡೀವಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಹೇಳಿದ್ದಾರೆ.

ಥೈಲೆಂಡ್
"ಈ ದುರ್ಘಟನೆಯನ್ನು ಥೈಲೆಂಡ್ ಕಟು ಶಬ್ದಗಳಿಂದ ಖಂಡಿಸುತ್ತದೆ ಸಂತ್ರಸ್ತರ ಕುಟುಂಬಕ್ಕೆ ನಮ್ಮ ಪ್ರೀತಿ ಮತ್ತು ಸಂತಾಪಗಳಿರಲಿ. ಈ ಘಟನೆ ಹಿಂಸೆ ಮತ್ತು ಹೇಡಿತನದ ಸಂಕೇತ. ನಾವು ಭಾರತದೊಂದಿಗಿದ್ದೇವೆ" ಎಂದು ಭಾರತಕ್ಕೆ ಥೈಲೆಂಡ್ ರಾಯಭಾರಿಯಾಗಿರುವ ಸ್ಯಾಮ್ ಚುಟಿಂಟೊರ್ನ್ ಗೊಂಗ್ಸಾಕ್ಡಿ ಹೇಳಿದ್ದಾರೆ.

ಶ್ರೀಲಂಕಾ
"ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ಸಂತಾಪಗಳು, ಗಾಯಗೊಂಡವರು ಬೇಗನೇ ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ. ಈ ಸಂಕಷ್ಟದ ಸಮಯದಲ್ಲಿನಾವು ಭಾರತದ ನೆರವಿಗೆ ಸಿದ್ಧರಿದ್ದೇವೆ" ಎಂದು ಶ್ರೀಲಂಕಾದ ವಿದೇಶಾಂಗ ಸಚಿವಾಲಯ ಸಂದೇಶ ಕಲಿಸಿದೆ.

ಇಸ್ರೇಲ್
"ಭಾರತೀಯ ಜನತೆ ಮತ್ತು ಸರ್ಕಾರದೊಂದಿಗೆ ನಾವಿದ್ದೇವೆ. ಯಾವುದೇ ಸಹಕಾರಕ್ಕೆ ನಾವು ಸಿದ್ಧ. ಈ ದುರಂತಕ್ಕೆ ನಮ್ಮ ಸಂತಾಪಗಳು. ಭಾರತದ ಯಾವುದೇ ಸಂಕಷ್ಟದ ಸಮಯದಲ್ಲಿ ನಾವು ಬೆಂಬಲವಾಗುತ್ತೇವೆ ಎಂಬುದನ್ನು ಮರೆಯಬೇಡಿ" ಎಂದು ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಹೇಳಿದ್ದಾರೆ.












Click it and Unblock the Notifications