ರಾಷ್ಟ್ರಪತಿ ರಾಮನಾಥ ಕೋವಿಂದ್ಗೆ ಜಮೈಕಾದಲ್ಲಿ ಭವ್ಯ ಸ್ವಾಗತ
ಕಿಂಗ್ಸ್ಟನ್, ಮೇ 16: ಜಮೈಕಾಗೆ ನಾಲ್ಕು ದಿನದ ಭೇಟಿ ನಡೆಸಿರುವ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಿಂಗ್ಸ್ಟನ್ನಲ್ಲಿ ಭವ್ಯ ಸ್ವಾಗತ ಸಿಕ್ಕಿತು. ಇಲ್ಲಿಯ ನಾರ್ಮನ್ ಮ್ಯಾನ್ಲೀ ಇಂಟರ್ನ್ಯಾಷನಲ್ ಏರ್ಪೊರ್ಟ್ನಲ್ಲಿ ಕೋವಿಡ್ ಸ್ವಾಗತಕ್ಕೆ ಭಾರತೀಯ ಮೂಲದ ಸಮುದಾಯದವರು ಮತ್ತು ಜಮೈಕಾದ ಸ್ಥಳೀಯರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
ಕೋವಿಂದ್ ಅವರಿಗೆ ಗೌರವ ರಕ್ಷೆ (ಗಾರ್ಡ್ ಆಫ್ ಆನರ್) ಹಾಗೂ 21 ಗನ್ ಸಲ್ಯೂಟ್ ವಂದನೆ ನೀಡಲಾಯಿತು. ಜಮೈಕಾದ ರಕ್ಷಣಾ ಪಡೆಗಳ ಮುಖ್ಯಸ್ಥರು (ಸಿಡಿಎಸ್) ರಾಷ್ಟ್ರಪತಿಗಳನ್ನು ಬರಮಾಡಿಕೊಂಡು ಕರೆದೊಯ್ದರು. ಈ ಸಂದರ್ಭದಲ್ಲಿ ಜಮೈಕಾಗೆ ಭಾರತೀಯ ರಾಯಭಾರಿಯಾಗಿರುವ ಮಸಕುಯ್ ರುಂಗ್ಸುಂಗ್ ಮತ್ತವರ ಪತ್ನಿ ಕೂಡ ಅಲ್ಲಿಗೆ ಬಂದು ಕೋವಿಂದ್ರನ್ನು ಭೇಟಿ ಮಾಡಿದರು.
ಇಬ್ಬರು ಸಿಖ್ಖರನ್ನು ಗುಂಡಿಕ್ಕಿ ಕೊಂದ ಐಎಸ್ಕೆಪಿ ಭಯೋತ್ಪಾದಕರು
ಜಮೈಕಾಗೆ ಭಾರತದ ರಾಷ್ಟ್ರಪತಿಯೊಬ್ಬರು ಭೇಟಿ ನೀಡಿರುವುದು ಇದೇ ಮೊದಲು. ರಾಮನಾಥ್ ಕೋವಿಂದ್ ನಾಲ್ಕು ದಿನಗಳ ಕಾಲ ಜಮೈಕಾದಲ್ಲಿ ಇರಲಿದ್ದಾರೆ. ಅವರ ಜೊತೆ ಪತ್ನಿ ಸವಿತಾ ಕೋವಿಂದ್, ಮಗಳು ಸ್ವಾತಿ ಕೋವಿಂದ್, ಕೇಂದ್ರ ಸಚಿವ ಪಂಕಪ್ ಚೌಧರಿ, ಸಂಸದೆ ರಮಾದೇವಿ, ಸತೀಶ್ ಕುಮರ್ ಗೌತಮ್ ಹಾಗೂ ಕಾರ್ಯದರ್ಶಿಮಟ್ಟದ ಅಧಿಕಾರಿಗಳು ರಾಷ್ಟ್ರಪತಿಗಳ ಜೊತೆ ಇದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ನಾಲ್ಕು ದಿನಗಳ ಜಮೈಕಾ ಭೇಟಿ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕೆಲ ಒಪ್ಪಂದಗಳಿಗೆ ಸಹಿ ಕೂಡ ಹಾಕಲಿದ್ದಾರೆ.
ಜಮೈಕಾದ ಗವರ್ನರ್ ಜನರಲ್ ಸರ್ ಪ್ಯಾಟ್ರಿಕ್ ಅಲನೆ ಹಾಗೂ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಗೃಹಕಚೇರಿಯಲ್ಲಿ ಎಂಒಯು ಒಪ್ಪಂದಕ್ಕೆ ಸಹಿಹಾಕಲಿದ್ದಾರೆ.
ನಾಳೆ, ಮಂಗಳವಾರ ಜಮೈಕಾದಲ್ಲಿ 'ಅಂಬೇಡ್ಕರ್ ಅವೆನ್ಯೂ' ರಸ್ತೆ ಉದ್ಘಾಟಿಸಲಿದ್ಧಾರೆ. ಹಾಗೆಯೇ, ಜಮೈಕಾ-ಭಾರತ ಸ್ನೇಹ ಉದ್ಯಾನವೂ ಈ ಸಂದರ್ಭದಲ್ಲಿ ಅನಾವರಣಗೊಳ್ಳಲಿದೆ. ಸಂಜೆ ಅವರು ಜಮೈಕಾದ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳಿಗೆ ಕಿಟ್ಗಳ ಉಡುಗೊರೆ ನೀಡಲಿದ್ದಾರೆ.
ಭಾರತ ತಂಡ ವೆಸ್ಟ್ ಇಂಡೀಸ್ಗೆ ಕ್ರಿಕೆಟ್ ಪ್ರವಾಸ ಮಾಡಿದಾಗೆಲ್ಲಾ ಜಮೈಕಾದ ಕಿಂಗ್ಸ್ಟನ್ನಲ್ಲಿ ಒಂದಾದರೂ ಪಂದ್ಯ ಇರುತ್ತದೆ. ಇದು ಜಮೈಕಾ ಮತ್ತು ಭಾರತದ ಮಧ್ಯೆ ಸಹಜ ಸ್ನೇಹ ಇದೆ. ಈ ಎರಡು ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದು ಆಗುತ್ತಿದ್ದು, ಇದು ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿದೆ.
(ಒನ್ಇಂಡಿಯಾ ಸುದ್ದಿ)