Peshawar Blast : ಪೇಶಾವರ ಮಸೀದಿ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 83ಕ್ಕೆ ಏರಿಕೆ!
ಒಂದೆಡೆ ಆರ್ಥಿಕ ಬಿಕ್ಕಟ್ಟು ತಾಂಡವ ಆಡುತ್ತಿದ್ದರೆ ಮತ್ತೊಂದೆಡೆ ಪೇಶಾವರ ಮಸೀದಿ ಸ್ಫೋಟ ಪ್ರಕರಣ ಪಾಕಿಸ್ತಾನದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಸೋಮವಾರ ನಡೆದ ಆತ್ಮಾಹುತಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿದೆ.
ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪೇಶಾವರ ಮಸೀದಿ ಸ್ಫೋಟ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ. ಕಳೆದ ದಿನ ನಡೆದ ಆತ್ಮಾಹುತಿ ದಾಳಿಯಿಂದ ಮೃತರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು ಮೃತರಲ್ಲಿ 27 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆಂದು ತಿಳಿದು ಬಂದಿದೆ. ಜೊತೆಗೆ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ 57 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ (ಜನವರಿ 30) ಸುಮಾರು 400 ಆರಾಧಕರು ಹಾಜರಿದ್ದ ಪೇಶಾವರದ ಮಸೀದಿಯೊಳಗೆ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ದೇಶದ ಆರ್ಥಿಕತೆ ಸುಧಾರಣೆಗೆ ಅನ್ಲಾಕ್ ಫಂಡಿಂಗ್ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಇಸ್ಲಾಮಾಬಾದ್ಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮಿಷನ್ ನಡೆಯುವ ಒಂದು ದಿನ ಮೊದಲು ಸ್ಫೋಟ ವರದಿಯಾಗಿದೆ. ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈ ಸ್ಪೋಟ ಭಯವನ್ನು ಹುಟ್ಟುಹಾಕಿದೆ.
ಏನಾಯಿತು ಎಂಬುದು ಇಲ್ಲಿದೆ
ಸೋಮವಾರ ಮಧ್ಯಾಹ್ನ 1.40 ರ ಸುಮಾರಿಗೆ ಪಾಕಿಸ್ತಾನದ ಪೇಶಾವರದ ಅತ್ಯಂತ ಭದ್ರವಾದ ಭದ್ರತಾ ಆವರಣದಲ್ಲಿರುವ ಕಿಕ್ಕಿರಿದ ಮಸೀದಿಯೊಳಗೆ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡನು. ದಾಳಿಕೋರನು ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ಕಚೇರಿಗಳನ್ನು ಹೊಂದಿರುವ "ಕೆಂಪು ವಲಯ" ಕಾಂಪೌಂಡ್ಗೆ ಪ್ರವೇಶಿಸಲು ಭದ್ರತಾ ಪಡೆಗಳು ನಿರ್ವಹಿಸುತ್ತಿದ್ದ ಹಲವಾರು ಬ್ಯಾರಿಕೇಡ್ಗಳ ಮೂಲಕ ಹಾದುಹೋದಂತೆ ಕಂಡುಬಂದಿದೆ.
ಪ್ರಾರ್ಥನೆ ವೇಳೆ ಆತ್ಮಾಹುತಿ ದಾಳಿ
ಆತ್ಮಾಹುತಿ ಬಾಂಬರ್ ದಾಳಿಯ ಬಳಿಕ ಸಾವಿನ ಸಂಖ್ಯೆ 17 ಆಗಿತ್ತು. ಸ್ಪೋಟದ ತೀವ್ರತೆಗೆ ಸ್ಥಳದಲ್ಲೇ 17 ಜನ ಸಾವನ್ನಪ್ಪಿದ್ದಾರೆ. ಜೊತೆಗೆ ಗಂಭೀರ ಗಾಯಗಳಾಗಿದ್ದ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗಂಭೀರವಾಗಿ ಗಾಯಗೊಂಡ 66 ಜನ ಆಸ್ಪತ್ರೆಯಲ್ಲಿ ಹಾಗೂ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇನ್ನೂ ಹಲವಾರು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಬಳಿಕ ಪೊಲೀಸರು ಮತ್ತು ರಕ್ಷಕರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಹರಸಾಹಸ ಪಡುತ್ತಿರುವಾಗ ವಿಡಿಯೊಗಳು ಹಾಗೂ ಜನ ಅಸ್ತವ್ಯಸ್ತವಾಗಿರುವ ದೃಶ್ಯಗಳು ವೈರಲ್ ಆಗಿವೆ.
ಅವಶೇಷಗಳಲ್ಲಿ ಸಿಕ್ಕಿಬಿದ್ದ ಜನ
ಸ್ಫೋಟ ಅದೆಷ್ಟು ತೀವ್ರವಾಗಿತ್ತು ಎಂದರೆ ಸ್ಪೋಟದ ತೀವ್ರತೆಗೆ ಮಸೀದಿಯ ಮೇಲಿನ ಮಹಡಿ ಉರುಳಿದೆ. ಇದರಿಂದ ಹತ್ತಾರು ಆರಾಧಕರು ಅವಶೇಷಗಳಲ್ಲಿ ಸಿಲುಕಿಕೊಂಡರು. ರಕ್ಷಕರು ಕುಸಿದು ಬಿದ್ದ ಮೇಲ್ಛಾವಣಿಯಿಂದ ಕೆಳಗಿಳಿಯಲು ಮತ್ತು ಅವಶೇಷಗಳಲ್ಲಿ ಸಿಕ್ಕಿಬಿದ್ದ ಬಲಿಪಶುಗಳನ್ನು ಹೊರತೆಗೆಯಲು ಹೆಣಗಾಡಿದ್ದಾರೆ.
ದಾಳಿಯನ್ನು ಖಂಡಿಸಿದ ಪ್ರಧಾನಿ ಶೆಹಬಾಜ್
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದು ಕರೆಯಲ್ಪಡುವ ಸ್ಥಳೀಯ ತಾಲಿಬಾನ್, ಸುನ್ನಿ ಮತ್ತು ಪಂಥೀಯ ಉಗ್ರಗಾಮಿ ಗುಂಪುಗಳ ಛತ್ರಿ ಗುಂಪು ಸ್ಪೋಟದ ಜವಾಬ್ದಾರಿಯನ್ನು ನಿರಾಕರಿಸಿದೆ. ಈ ದಾಳಿಗೂ ತೆಹ್ರೀಕ್-ಎ-ತಾಲಿಬಾನ್ಗೂ ಯಾವುದೇ ಸಂಬಂಧವಿಲ್ಲ ಎಂದು ಟಿಟಿಪಿ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.
ದಾಳಿಯನ್ನು ಖಂಡಿಸಿದ ಪ್ರಧಾನಿ ಶೆಹಬಾಜ್ ಷರೀಫ್, ಈ ಮಾನವ ದುರಂತವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಪಾಕಿಸ್ತಾನದ ಮೇಲಿನ ದಾಳಿಗೆ ಸಮಯನಾಗಿದೆ. ಭಯೋತ್ಪಾದನೆ ನಮ್ಮ ರಾಷ್ಟ್ರೀಯ ಭದ್ರತೆಯ ಪ್ರಮುಖ ಸವಾಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ.