ಫೆ. 19ಕ್ಕೆ ಅಂತಾರಾಷ್ಟ್ರೀಯ ಕೋರ್ಟ್ ಮುಂದೆ ಜಾಧವ್ ವಿರುದ್ಧ ಪಾಕ್ ಸಾಕ್ಷ್ಯ
ಇಸ್ಲಾಮಾಬಾದ್, ಫೆಬ್ರವರಿ 8: ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ "ವಿಧ್ವಂಸಕ ಚಟುವಟಿಕೆ" ನಡೆಸಿರುವುದಕ್ಕೆ ಪಾಕಿಸ್ತಾನದ ಬಳಿ ಇರುವ ಎಲ್ಲ ಸಾಕ್ಷ್ಯಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಫೆಬ್ರವರಿ ಹತ್ತೊಂಬತ್ತರಂದು ಸಲ್ಲಿಸಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಶುಕ್ರವಾರ ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಏಪ್ರಿಲ್ ನಲ್ಲಿ ಪಾಕಿಸ್ತಾನದ ಸೇನಾ ಕೋರ್ಟ್ ಜಾಧವ್ ಗೆ ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆ ವಿಧಿಸಿತ್ತು. ಆ ತೀರ್ಪಿನ ವಿರುದ್ಧ ಅದೇ ವರ್ಷದ ಮೇ ತಿಂಗಳಲ್ಲಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಪಾಕ್ ಸೇನಾ ಕೋರ್ಟ್ ತೀರ್ಪಿಗೆ ತಡೆಯೊಡ್ಡಿದ ಅಂತರರಾಷ್ಟ್ರೀಯ ನ್ಯಾಯಾಲಯ, ಅಂತಿಮ ತೀರ್ಪು ಕಾಯ್ದಿರಿಸಿತು.
ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳು ಈಗಾಗಲೇ ವಿಸ್ತೃತವಾದ ಅರ್ಜಿ ಹಾಗೂ ಪ್ರತಿಕ್ರಿಯೆಗಳನ್ನು ಅಂತರರಾಷ್ಟ್ರೀಯ ಕೋರ್ಟ್ ನಲ್ಲಿ ದಾಖಲಿಸಿವೆ. ಇದೇ ತಿಂಗಳ ಹದಿನೆಂಟನೇ ತಾರೀಕಿನಿಂದ ಇಪ್ಪತ್ತೊಂದನೇ ತಾರೀಕಿನ ತನಕ ಕೋರ್ಟ್ ನಲ್ಲಿ ಜಾಧವ್ ಪ್ರಕರಣದ ವಿಚಾರಣೆ ನಡೆಯಲಿದೆ.

ಪಾಕಿಸ್ತಾನದ ಎಲ್ಲ ಆರೋಪಗಳನ್ನು ಭಾರತ ನಿರಾಕರಿಸಿದೆ. ವ್ಯಾಪಾರದ ಸಲುವಾಗಿ ಇರಾನ್ ಗೆ ತೆರಳಿದ್ದ ಮಾಜಿ ನೌಕಾಧಿಕಾರಿಯನ್ನು ಅಪಹರಿಸಲಾಗಿದೆ. ಸರಕಾರಕ್ಕೂ ಕುಲಭೂಷಣ್ ಜಾಧವ್ ಗೂ ಯಾವುದೇ ನಂಟಿಲ್ಲ ಎಂದು ಭಾರತ ಸರಕಾರ ತಿಳಿಸಿದೆ.
ಪಾಕ್ ಸಚಿವ ಯುನೈಟೆಡ್ ಕಿಂಗ್ ಡಮ್ ಗೆ ಭೇಟಿ ನೀಡಿದ್ದ ವೇಳೆ ಮಾತನಾಡಿ, ಕುಲಭೂಷಣ್ ಜಾಧವ್ ವಿರುದ್ಧ ವಿಧ್ವಂಸಕ ಚಟುವಟಿಕೆ ಮಾಡಿದ್ದಕ್ಕೆ ಸಾಕ್ಷ್ಯಗಳಿವೆ ಎಂದಿದ್ದರು. ಪಾಕಿಸ್ತಾನದ ಕಾನೂನು ತಂಡವು ಫೆಬ್ರವರಿ ಹತ್ತೊಂಬತ್ತರಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಸಾಕ್ಷ್ಯ ಮಂಡಿಸಲಿದೆ ಎಂದಿದ್ದಾರೆ.
ಮೂರು ವರ್ಷದ ಹಿಂದೆ ಇರಾನ್ ನಿಂದ ಪಾಕ್ ಪ್ರವೇಶಿಸಿದ್ದ ಜಾಧವ್ ನನ್ನು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಭದ್ರತಾ ಪಡೆ ಬಂಧಿಸಿತು. ಬೇಹುಗಾರಿಕೆ ಕಾರಣಕ್ಕೆ ಆತ ದೇಶ ಪ್ರವೇಶಿದ್ದ ಎಂದು ಪಾಕಿಸ್ತಾನ ಹೇಳಿತ್ತು.












Click it and Unblock the Notifications