Pakistan Train Accident: ರೈಲು ಅಪಘಾತಕ್ಕೆ ಹಳಿ ಸಮಸ್ಯೆ ಕಾರಣ!
ಕರಾಚಿ: ಪಾಕಿಸ್ತಾನದ ಭೀಕರ ರೈಲು ಅಪಘಾತಕ್ಕೆ ಅಸಲಿ ಕಾರಣವು ಕೊನೆಗೂ ರಿವೀಲ್ ಆಗಿದೆ. 30ಕ್ಕೂ ಹೆಚ್ಚು ಜನರನ್ನು ಬಲಿಪಡೆದು, ಹತ್ತಿರ ಹತ್ತಿರ ನೂರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ರೈಲು ಅಪಘಾತಕ್ಕೆ ಕಾರಣ ಏನು? ಎಂಬ ಪ್ರಶ್ನೆ ಉತ್ತರ ಸಿಕ್ಕಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.
ಪಾಕಿಸ್ತಾನ ಎಂದರೆ ಅವ್ಯವಸ್ಥೆ ಆಗರ, ಅದರಲ್ಲೂ ಪಾಕಿಸ್ತಾನದ ಸಾರ್ವಜನಿಕರಿಗೆ ಅಲ್ಲಿನ ಸರ್ಕಾರ ಒದಗಿಸುವ ಸೇವೆ ಶೂನ್ಯ. ಹೀಗೆ ಭೀಕರ ರೈಲು ಅಪಘಾತದಲ್ಲೂ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದ್ದು, ಪರೋಕ್ಷವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಂದಹಾಗೆ 2 ದಿನಗಳ ಹಿಂದಷ್ಟೇ ಸಂಭವಿಸಿದ್ದ ಪಾಕ್ ರೈಲು ಅಪಘಾತಕ್ಕೆ, ಹಾನಿಯಾದ ಹಳಿಗಳು ಮತ್ತು ಫಿಶ್ಪ್ಲೇಟ್ ಅಂದರೆ ಹಳಿಯ ಸರಳುಗಳ ಜೋಡಣೆ ಫಲಕ ಕಳಚಿಕೊಂಡಿದ್ದೇ ಕಾರಣ ಎನ್ನಲಾಗಿದೆ. ಇದರ ಜೊತೆಗೆ ವಿಧ್ವಂಸಕ ಕೃತ್ಯದ ಹಿನ್ನೆಲೆಯಲ್ಲಿ ರೈಲು ಅಪಘಾತ ನಡೆದಿದೆ ಎಂಬ ಅನುಮಾನ ಕೂಡ ಇನ್ನೂ ದಟ್ಟವಾಗಿದೆ.

ರೈಲು ಅಪಘಾತ ಸಂಭವಿಸಿದ್ದು ಹೇಗೆ?
ಅಪಘಾತಕ್ಕೆ ತುತ್ತಾಗಿರುವ ರೈಲಿನಲ್ಲಿ ಸುಮಾರು ಒಂದು ಸಾವಿರ ಜನರು ಪ್ರಯಾಣಿಸುತ್ತಿದ್ದರು. ಹಲವು ಪ್ರಯಾಣಿಕರು ರೈಲು ಬೋಗಿಗಳಲ್ಲಿ ಸಿಲುಕಿರುವ ಸಾಧ್ಯತೆಯೂ ಇದ್ದು, ಅಪಘಾತದ ಬಗ್ಗೆ ತನಿಖೆ ನಡೆಸಲಾಗಿತ್ತು. ಕರಾಚಿಯಿಂದ 275 ಕಿಲೋ ಮೀಟರ್ ದೂರದಲ್ಲಿ ಈ ರೈಲು ಅಪಘಾತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಂಡ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ, ಆದರೆ ಗಾಯಗೊಂಡವರಲ್ಲಿ ಈಗ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಈ ನಡುವೆ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ.
ಅಪಘಾತಕ್ಕೆ ತಾಂತ್ರಿಕ ವಿಭಾಗ ಹೊಣೆ?
ತನಿಖೆ ಹೊಣೆಯನ್ನ 6 ಸದಸ್ಯರ ಪಾಕಿಸ್ತಾನ ರೈಲ್ವೆ ಅಧಿಕಾರಿಗಳ ತಂಡಕ್ಕೆ ವಹಿಸಲಾಗಿತ್ತು. ಈ ತಂಡ ಹೇಳಿಕೆ ನೀಡಿದ್ದು, ಅಪಘಾತವನ್ನು ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿದ್ದೇವೆ. ಹಳಿಗಳಲ್ಲಿನ ಹಾನಿ ಮತ್ತು ಫಿಶ್ಪ್ಲೇಟ್ ಕಳಚಿಕೊಂಡಿದ್ದೇ ದುರಂತಕ್ಕೆ ಕಾರಣವೆಂದು ಅಂತಿಮ ನಿರ್ಣಯಕ್ಕೆ ಬಂದಿದ್ದೇವೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿಭಾಗವನ್ನು ಈ ಅಪಘಾತಕ್ಕೆ ಹೊಣೆಯಾಗಿ ಮಾಡಲಾಗಿದೆ ಎನ್ನಲಾಗಿದೆ. ಈ ಮಧ್ಯೆ ಇದು ಉಗ್ರರ ಅಥವಾ ಯಾರದ್ದೋ ಕ್ರೂರ ಕೃತ್ಯ ಎಂಬ ಅನುಮಾನದಲ್ಲೂ ನೋಡಲಾಗುತ್ತಿದೆ. ಹೀಗಾಗಿ ತನಿಖೆಯನ್ನು ಪಾಕ್ ಸರ್ಕಾರ ಮುಂದುವರಿಸಲು ಸೂಚಿಸಿದೆ ಎನ್ನಲಾಗಿದೆ.

ಬಡವರ ಬಗ್ಗೆ ಕಾಳಜಿಯೇ ಇಲ್ವಾ?
ಪಾಕಿಸ್ತಾನದ ರೈಲ್ವೆ ಹಳಿಯಲ್ಲೇ ದೋಷ ಇರುವ ಬಗ್ಗೆ ಮೊದಲೇ ಆರೋಪ ಕೇಳಿಬಂದಿತ್ತು. ಹಳಿಗಳ ಸಮಸ್ಯೆ ಜೊತೆ ಪಾಕಿಸ್ತಾನದಲ್ಲಿ ರೈಲುಗಳ ಹಳೇ ಇಂಜಿನ್ ಮತ್ತು ಸಿಗ್ನಲ್ ಸಮಸ್ಯೆಗಳು ಕೂಡ ಅಪಘಾತಕ್ಕೆ ಕಾರಣವೆಂಬ ಆರೋಪ ಇದೆ. ಇಂತಹ ಆರೋಪಗಳು ಮೊದಲಿಂದಲೂ ಕೇಳಿಬರುತ್ತಿದ್ರು, ಅಲ್ಲಿನ ಆಳುವ ಜನರು ಅಂದರೆ ಪಾಕಿಸ್ತಾನ ರಾಜಕಾರಣಿಗಳಿಗೆ ಬಡವರ ಬಗ್ಗೆ ಅಥವಾ ತಮ್ಮ ಪ್ರಜೆಗಳ ಬಗ್ಗೆ ಕಾಳಜಿ ಇದ್ದಂತೆ ಕಾಣ್ತಿಲ್ಲ ಈ ಕಾರಣಕ್ಕೆ ಹೀಗಾಗಿದೆ ಅಂತಿದ್ದಾರೆ ಜನ. ಈಗಲಾದರೂ ಪಾಕ್ ಸರ್ಕಾರ ಹಾಗೂ ರೈಲ್ವೆ ಇಲಾಖೆ ಎಚ್ಚೆತ್ತುಕೊಳ್ಳುತ್ತಾ? ಎಂಬ ವಿಚಾರವನ್ನ ಕಾದು ನೋಡಬೇಕಿದೆ.
ಹೀಗೆ ಪಾಕಿಸ್ತಾನದ ರೈಲು ಅಪಘಾತದ ಸತ್ಯ ಹೊರಬಿದ್ದಿದೆ. ತನಿಖೆ ಈಗಿನ್ನೂ ಪ್ರಾಥಮಿಕ ಮಾಹಿತಿ ಮಾತ್ರ ನೀಡಿದ್ದು, ಇನ್ನೂ ಆಳವಾಗಿ ತನಿಖೆ ನಡೆಸಿದಾಗ ಬೇರೆ ಬೇರೆ ಎಡವಟ್ಟು ಬಯಲಾಗುವ ಸಾಧ್ಯತೆಯು ಇದೆ. ಆದರೆ ಇನ್ನೇನು ಪಾಕಿಸ್ಥಾನ ಸಂಸತ್ ಕೂಡ ವಿಸರ್ಜನೆ ಆಗಲಿದ್ದು, ಮುಂದೆ ಪರಿಸ್ಥಿತಿ ಹೇಗಿರಲಿದೆ? ಅನ್ನೋದೆ ಯಕ್ಷ ಪ್ರಶ್ನೆ. ಇದೀಗ ಈ ರೈಲು ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಜನರು ಮಾತ್ರ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಸಾಮಾನ್ಯರ ನೋವು ಅಲ್ಲಿನ ರಾಜಕಾರಣಿಗಳಿಗೆ ಈಗಲಾದರೂ ಅರ್ಥವಾಗುತ್ತಾ? ಗೊತ್ತಿಲ್ಲ.












Click it and Unblock the Notifications