ಪಾಕ್ ಮೂಲಕ ಅಫ್ಘಾನ್ಗೆ ಗೋಧಿ ಸಾಗಿಸಲು ಭಾರತಕ್ಕೆ ಇಮ್ರಾನ್ ಒಪ್ಪಿಗೆ
ಇಸ್ಲಾಮಾಬಾದ್, ನವೆಂಬರ್ 23: ಪಾಕಿಸ್ತಾನ ಮೂಲಕ ಅಫ್ಘಾನಿಸ್ತಾನಕ್ಕೆ ಗೋಧಿ ಸಾಗಿಸಲು ಇಮ್ರಾನ್ ಖಾನ್ ಸರ್ಕಾರ ಭಾರತಕ್ಕೆ ಒಪ್ಪಿಗೆ ನೀಡಿದೆ.
ಮಾನವೀಯ ನೆರವಿನ ಆಧಾರದಲ್ಲಿ ಭಾರತ ಅಫ್ಘಾನಿಸ್ತಾನಕ್ಕೆ ನೀಡಲಿರುವ ಗೋದಿಯನ್ನು ಸಾಗಿಸಲು ತನ್ನ ದೇಶದ ಮಾರ್ಗವನ್ನು ಉಪಯೋಗಿಸಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅನುಮತಿ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಭಾರತದಿಂದ- ಅಫ್ಘಾನಿಸ್ತಾನಕ್ಕೆ ತಲುಪಬೇಕಿರುವ ಗೋದಿಯನ್ನು ತನ್ನ ದೇಶದ ಮೂಲಕವಾಗಿ ಸಾಗಣೆಗೆ ಅನುಮತಿ ನೀಡಿದೆ. 50,000 ಮೆಟ್ರಿಕ್ ಟನ್ ಪ್ರಮಾಣದ ಗೋದಿಯನ್ನು ಭಾರತ ಮಾನವೀಯ ನೆರವಾಗಿ ಅಫ್ಘಾನಿಸ್ತಾನಕ್ಕೆ ನೀಡುತ್ತಿದೆ.

ಇದುವರೆಗೂ ಪಾಕ್ ಮೂಲಕ ಯಾವುದೇ ವಸ್ತುವನ್ನು ಸಾಗಿಸಲು ಅಫ್ಘಾನಿಸ್ತಾನಕ್ಕೆ ಮಾತ್ರವೇ ಪಾಕ್ ಅನುಮತಿ ನೀಡಿತ್ತು. ಹೀಗಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಎಲ್ಲಾ ವಸ್ತುಗಳು ಪಾಕ್ ದೇಶದೊಳಗಿನ ಮಾರ್ಗದಿಂದಲೇ ಸಾಗಣೆಯಾಗುತ್ತಿದ್ದವು. ಆದರೆ ಭಾರತದಿಂದ ಅಫ್ಘಾನಿಸ್ತಾನಕ್ಕೆ ಯಾವುದೇ ವಸ್ತುಗಳ ಸರಬರಾಜಿಗೆ ಪಾಕ್ ಅನುಮತಿ ನಿರಾಕರಿಸಿತ್ತು.
ಶೀಘ್ರವೇ ಭಾರತದಿಂದ ಸಕ್ಕರೆ, ಗೋಧಿ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ ಇದೀಗ ಇದ್ದಕ್ಕಿದ್ದಂತೆ ಯು ಟರ್ನ್ ಹೊಡೆದಿತ್ತು. ಭಾರತದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪಾಕ್ ಸರ್ಕಾರದ ನಡೆಗೆ ವಿರೋಧ ಕೇಳಿಬಂದ ಹಿನ್ನೆಲೆಯಲ್ಲೇ ಈ ನಿರ್ಧಾರ ಪ್ರಕಟಿಸಿತ್ತು.
ಕಳೆದ ಎರಡು ವರ್ಷಗಳಿಂದ ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದಿಗೆ ನಿಷೇಧ ಹೇರಿದ್ದ ಪಾಕಿಸ್ತಾನ, ಶೀಘ್ರದಲ್ಲೇ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳಲಿದೆ ಎಂದು ಪಾಕಿಸ್ತಾನದ ನೂತನ ಹಣಕಾಸು ಸಚಿವ ಹಮ್ಮದ್ ಅಜರ್ ಹೇಳಿದ್ದರು. ಭಾರತದಿಂದ ಸಕ್ಕರೆ ಮತ್ತು ಹತ್ತಿ ವ್ಯಾಪಾರವನ್ನು ಮತ್ತೆ ಆರಂಭಿಸಲು ನಿರ್ಧರಿಸಿದ್ದೇವೆ.
ಜೂನ್ ನಿಂದ ಆಮದು ಮಾಡಿಕೊಳ್ಳುತ್ತೇವೆ ಎಂದು ಹಮ್ಮದ್ ಅಜರ್ ತಿಳಿಸಿದ್ದರು. ಆದರೆ ಈ ನಡೆಗೆ ಟೀಕೆ ವ್ಯಕ್ತವಾಗಿತ್ತು. ಕಾಶ್ಮೀರ ಸಮಸ್ಯೆ ಇನ್ನೂ ಇತ್ಯರ್ಥಗೊಳ್ಳದ ಕಾರಣ ಭಾರತದೊಂದಿಗೆ ವ್ಯಾಪಾರ ವಹಿವಾಟು ಆರಂಭಿಸುವ ಕುರಿತು ವಿರೋಧ ಕೇಳಿಬಂದಿತ್ತು. ಈ ಕಾರಣದಿಂದಾಗಿ ನಿರ್ಧಾರ ಬದಲಿಸಿರುವುದಾಗಿ ತಿಳಿದುಬಂದಿದೆ.
ಸಚಿವ ಶೇಖ್ ರಶೀದ್ ಅಹ್ಮದ್, ಭಾರತ-ಪಾಕ್ ನಡುವೆ ಕಾಶ್ಮೀರ ವಿಷಯದಲ್ಲಿ ಪರಿಹಾರ ಕಂಡುಕೊಳ್ಳುವವರೆಗೂ ಈ ನಿರ್ಧಾರವನ್ನು ಮುಂದೂಡಲಾಗುವುದು ಎಂದು ತಿಳಿಸಿದ್ದಾರೆ. 2019ರಲ್ಲಿ ಪಾಕಿಸ್ತಾನ ಭಾರತದೊಂದಿಗಿನ ವ್ಯಾಪಾರ ವ್ಯವಹಾರವನ್ನು ನಿಲ್ಲಿಸಿತ್ತು.












Click it and Unblock the Notifications