ಇವರೇ ಮುಗ್ಧ ಮಕ್ಕಳನ್ನು ಹತ್ಯೆಗೈದ ರಕ್ಕಸರು!
ಪೇಶಾವರ, ಡಿ. 18 : ಪಾಕಿಸ್ತಾನದ ಪೇಶಾವರದಲ್ಲಿರುವ ಮಿಲಿಟರಿ ಶಾಲೆಯೊಳಗೆ ನುಗ್ಗಿ, ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ 130ಕ್ಕೂ ಹೆಚ್ಚು ಮಕ್ಕಳ ತಲೆಯೊಳಗೆ ಗುಂಡು ನುಗ್ಗಿಸಿದ ಉಗ್ರರ ಚಿತ್ರವನ್ನು ಪಾಕಿಸ್ತಾನದ ತಾಲಿಬಾನ್ ಡಿ.17ರಂದು ಬಿಡುಗಡೆ ಮಾಡಿದೆ.
ಇಡೀ ವಿಶ್ವವನ್ನು ದಂಗುಬಡಿಸಿರುವ ದಾಳಿಯಲ್ಲಿ 140ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಹತ್ಯೆಗೀಡಾಗಿದ್ದಾರೆ. ಮಂಗಳವಾರ ನಡೆಸಿರುವ ಈ ಭೀಕರ ಹತ್ಯಾಕಾಂಡವನ್ನು ಪಾಕಿಸ್ತಾನಿ ತಾಲಿಬಾನ್ ವಕ್ತಾರ ಮೊಹಮ್ಮದ್ ಖುರಾಸಾನಿ ಸಮರ್ಥಿಸಿಕೊಂಡಿದ್ದು, ಪಾಕಿಸ್ತಾನದ ಮಿಲಿಟರಿ ಹೋರಾಟಗಾರರ ಮಕ್ಕಳನ್ನು ಅನ್ಯಾಯವಾಗಿ ಹತ್ಯೆಗೈದಿದ್ದಕ್ಕೆ ಇದು ಪ್ರತೀಕಾರ ಎಂದು ಹೇಳಿದ್ದಾನೆ.
ತಾಲಿಬಾನ್ ನಡೆಸಿದ ಈ ಬರ್ಬರ ಕೃತ್ಯವನ್ನು ಅನೇಕರು ಬೆಂಬಲಿಸಿದ್ದಾರೆ ಕೂಡ. ಅವರಲ್ಲೊಬ್ಬರು ಹೇಳಿರುವ ಹೇಳಿಕೆ ಹೀಗಿದೆ ನೋಡಿ : "ಮಾನವ ಜೀವದ ಅಸ್ತಿತ್ವದ ಬಗ್ಗೆ ನಮಗೆ ನಂಬಿಕೆಯಿಲ್ಲ. ಸಾವು ಎಲ್ಲದರ ಕೊನೆಯೂ ಅಲ್ಲ. ಸಾವಿನಾಚೆಯ ಮತ್ತೊಂದು ಸುಂದರ ಲೋಕದಲ್ಲಿ ಮುಂದುವರಿಯುತ್ತದೆ. ಉರ್ದುವಿನಲ್ಲಿ 'ಇಂತಿಕಾಲ್' ಅಂದರೆ 'ವರ್ಗಾವಣೆ', ಕೊನೆಯಲ್ಲ!" [ಉಗ್ರರ ದಾಳಿಕೆ ನೂರಾರು ಮಕ್ಕಳು ಬಲಿ]
ಪಾಕಿಸ್ತಾನ ಕಂಡ ಅತ್ಯಂತ ಅಮಾನವೀಯ ಘಟನೆಯಿಂದ ಇಡೀ ಮಾನವಕುಲವೇ ಜರ್ಝರಿತವಾಗಿದೆ. ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಲಾಗಿದೆ, ಸಾವಿರಾರು ಮಕ್ಕಳು ಮೊಂಬತ್ತಿ ಅಂಟಿಸಿ, ಭಾವೋದ್ವೇಗ ತಡೆಯಲಾರದೆ ಮಿಡಿದ ಕಂಬನಿಯಲ್ಲೇ ಭಯೋತ್ಪಾದನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಉಗ್ರರ ಬೂಟುಗಾಲಲ್ಲಿ ತುಳಿದ ಬೆಂಗಳೂರು ವಿದ್ಯಾರ್ಥಿಗಳು]
ಹತ್ಯೆಗೀಡಾಗಿರುವ ಮಕ್ಕಳನ್ನು ಸಾಮೂಹಿಕವಾಗಿ ಪೇಶಾವರದಲ್ಲಿ ಹೂಳಲಾಗುತ್ತಿದ್ದು, ಮಕ್ಕಳನ್ನು ಕಳೆದುಕೊಂಡ ಪಾಲಕರ ಗೋಳು ಮುಗಿಲುಮುಟ್ಟಿದೆ. ಈ ನಡುವೆ, ಗಲ್ಲು ಶಿಕ್ಷೆಯ ಮೇಲೆ ಹೇರಿದ್ದ ನಿಷೇಧವನ್ನು ಪಾಕಿಸ್ತಾನ ಸರಕಾರ ಹಿಂತೆಗೆದುಕೊಂಡಿದ್ದು, ಬಲ್ಲ ಮೂಲಗಳ ಪ್ರಕಾರ ಬಂಧನದಲ್ಲಿರುವ ಶಂಕಿತ ಉಗ್ರರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಲಿದೆ.
ಭಾರತದಲ್ಲಿಯೂ ಕಟ್ಟೆಚ್ಚರ ವಹಿಸಲು ಇಡೀ ದೇಶದಲ್ಲಿರುವ ಎಲ್ಲ ಶಾಲೆಗಳಿಗೆ ಸೂಚಿಸಲಾಗಿದ್ದು, ಮಕ್ಕಳ ಭದ್ರತೆಗೆ ಹೆಚ್ಚಿನ ವ್ಯವಸ್ಥೆ ಮಾಡಲು ಕೇಂದ್ರ ಸೂಚಿಸಿದೆ. ಯಾವುದೇ ಸಂದರ್ಭದಲ್ಲಿ ಭಾರತದಲ್ಲಿಯೂ ಇಂಥದೇ ಬಗೆಯ ದಾಳಿ ನಡೆಯಬಹುದೆಂದು ಮುನ್ನೆಚ್ಚರಿಕೆಯಾಗಿ ಎಚ್ಚರದಿಂದಿರಲು ಸೂಚಿಸಲಾಗಿದೆ.