ಭಾರತದೊಂದಿಗೆ ಶಾಂತಿ ಮಾತುಕತೆಗೆ ಮುಂದಾದ ಪಾಕ್ ಸೇನೆ
ಇಸ್ಲಾಮಾಬಾದ್, ಸೆಪ್ಟೆಂಬರ್ 5: ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುವ ಭೀತಿಗೆ ಒಳಗಾಗಿರುವ ಪಾಕಿಸ್ತಾನದ ಸೇನೆ ತನ್ನ ವೈರಿ ದೇಶ ಭಾರತದೊಂದಿಗೆ ಶಾಂತಿ ಮಾತುಕತೆಗೆ ಮರುಜೀವ ನೀಡಲು ಮುಂದಾಗಿದೆ.
ಆದರೆ, ಭಾರತದ ಕಡೆಯಿಂದ ನಿರುತ್ಸಾಹದ ಪ್ರತಿಕ್ರಿಯೆ ಬಂದಿರುವುದಾಗಿ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದ ಅಧಿಕಾರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಬಲಿಷ್ಠ ಸೇನೆಯು ಭಾರತದೊಂದಿಗಿನ ಮಾತುಕತೆಗೆ ಮುಂದಾಗಿದೆ.
ಸೇನೆಯ ಹಿರಿಯ ಕಮಾಂಡರ್ ಜನರಲ್ ಖಮರ್ ಜಾವೆದ್ ಬಾಜ್ವಾ ಅವರ ನೇತೃತ್ವದಲ್ಲಿ ಪಾಕಿಸ್ತಾನದ ಚುನಾವಣೆಗೂ ಕೆಲವು ತಿಂಗಳು ಮುನ್ನವೇ ಈ ಮಾತುಕತೆ ಪ್ರಯತ್ನ ಆರಂಭವಾಗಿತ್ತು. 2015ರಲ್ಲಿ ಕಾಶ್ಮೀರ ಪ್ರದೇಶದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಮಾತುಕತೆ ಪ್ರಯತ್ನ ಮುರಿದ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ಮಾತುಕತೆಗೆ ಮರುಜೀವ ನೀಡಲು ಮುಂದಾಗಿತ್ತು.

ಎರಡು ದೇಶಗಳ ನಡುವಣ ವ್ಯಾಪಾರ ವಹಿವಾಟಿಗೆ ಇರುವ ಬೇಲಿಯನ್ನು ತೆಗೆದುಹಾಕುವ ಮೂಲಕ ಪಾಕಿಸ್ತಾನಕ್ಕೆ ಪ್ರಾದೇಶಿಕ ಮಾರುಕಟ್ಟೆಗೆ ಪ್ರವೇಶ ದೊರಕುವಂತೆ ಮಾಡುವುದು ಅದರ ಮೂಲ ಉದ್ದೇಶವಾಗಿದೆ.
ಪಾಕಿಸ್ತಾನದಲ್ಲಿ ಕುಸಿಯುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಮಾತುಕತೆ ಅನಿವಾರ್ಯವಾಗಿದೆ.
ಭಾರತ ಸೇರಿದಂತೆ ಎಲ್ಲ ನೆರೆಯ ದೇಶಗಳ ನಡುವೆಯೂ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸುತ್ತಿರುವುದಾಗಿ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.












Click it and Unblock the Notifications