ಉಗ್ರರಿಗೆ ವಿಐಪಿ ಭದ್ರತೆ, ಪಾಕಿಸ್ತಾನದಿಂದ ಸ್ಫೋಟಕ ಮಾಹಿತಿ
'ಹುಟ್ಟು ಗುಣ ಸುಟ್ಟರೂ ಹೋಗಲ್ಲ' ಎಂಬ ಗಾದೆ ಮಾತಿನಂತೆ ಪಾಕಿಸ್ತಾನ ಉಗ್ರರಿಂದ ಎಷ್ಟೇ ನೋವು ಕಂಡರೂ ಬುದ್ಧಿ ಕಲಿಯುವ ಲಕ್ಷಣ ಕಾಣ್ತಿಲ್ಲ. ಅಂದಹಾಗೆ 1993ರ ಮುಂಬೈ ಸ್ಫೋಟದ ರುವಾರಿ ದಾವೂದ್ ಇಬ್ರಾಹಿಂ ಮತ್ತು ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಮುಖ್ಯಸ್ಥನಾಗಿರುವ ಕರ್ನಾಟಕ ಮೂಲದ ರಿಯಾಜ್ ಭಟ್ಕಳ್ ಸೇರಿದಂತೆ 21 ಡೆಡ್ಲಿ ಟೆರರಿಸ್ಟ್ಗಳಿಗೆ 'ಪಾಪಿ'ಸ್ತಾನ ರಾಜಾತಿಥ್ಯ ಮುಂದುವರಿಸಿದೆ.
ಇಂಥ ನಟೋರಿಯಸ್ ಉಗ್ರರಿಗೆ ಪಾಕ್ ಸರ್ಕಾರ ವಿಐಪಿ ಭದ್ರತೆ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಿದೆ ಎಂಬ ಸ್ಫೋಟಕ ಮಾಹಿತಿ ಬಟಾಬಯಲಾಗಿದೆ. ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರನ್ನು ಸಾಕುತ್ತಿರುವುದು ಪದೇ ಪದೆ ಸಾಬೀತಾಗುತ್ತಿದೆ.
ಆದರೂ ಕಟುಸತ್ಯ ಒಪ್ಪಿಕೊಳ್ಳಲು ಸಿದ್ಧವಿಲ್ಲದ ನರಿಬುದ್ಧಿ ಪಾಕ್, ನಮ್ಮ ನೆಲದಲ್ಲಿ ಉಗ್ರರು ಇಲ್ಲ ಅಂತಾ ಹೇಳುತ್ತಲೇ ಬಂದಿದೆ. ಆದರೆ ಈಗ ಪಾಕಿಸ್ತಾನದ ನೆಲದಲ್ಲಿ ಪಾಪಿ ಉಗ್ರರು ನೆಲೆಯೂರಿರುವ ಅಂಶ ಮತ್ತೆ ಬಟಾಬಯಲಾಗಿದೆ. ಈ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದ ಎದುರು ಬೆತ್ತಲಾಗಿದೆ. ಪಾಕಿಸ್ತಾನಿ ನಾಯಕರು ಅದೆಷ್ಟು ಸುಳ್ಳುಬುರುಕರು ಎಂಬ ಸತ್ಯ ಮತ್ತೊಮ್ಮೆ ಮನವರಿಕೆ ಆಗಿದೆ.
ಕರ್ನಾಟಕದ ಉಗ್ರನಿಗೂ ‘ಪಾಪಿ’ಸ್ತಾನದಲ್ಲಿ ನೆಲೆ
ರಿಯಾಜ್ ಭಟ್ಕಳ ಎಂಬ ಹೆಸರು ರಾಜ್ಯ ಅಥವಾ ದೇಶದ ಜನರಿಗೆ ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳ ಜನರಿಗೂ ಈತ ಚಿರಪರಿಚಿತ. ಏಕೆಂದರೆ ಈ ಉಗ್ರಕ್ರಿಮಿ ನಡೆಸಿರುವ ಕೃತ್ಯ ಅಂತಹದ್ದು. ಕರ್ನಾಟಕದ ಭಟ್ಕಳ ಮೂಲದ ಈತ ಎಂಜಿನಿಯರಿಂಗ್ ಪದವೀಧರ. ಆದರೆ ಬ್ರೈನ್ ವಾಶ್ ನಂತರ 'ಸಿಮಿ' ಸಂಘಟನೆಯಲ್ಲಿ ಗುರುತಿಸಿಕೊಂಡ ರಿಯಾಜ್ ಭಟ್ಕಳ, ಇಂಡಿಯನ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿದ್ದ. ಈಗ ರಿಯಾಜ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
209 ಜನರನ್ನು ಕೊಂದಿದ್ದ ರಿಯಾಜ್
2006ರ ಜುಲೈ 11ರಂದು ಮುಂಬೈ ಲೋಕಲ್ ಟ್ರೈನ್ಗಳಲ್ಲಿ ಭಯಾನಕ ಸರಣಿ ಸ್ಫೋಟಗಳು ಸಂಭವಿಸಿದ್ದವು. 11 ನಿಮಿಷದ ಅಂತರದಲ್ಲಿ ಮುಂಬೈ ರೈಲುಗಳಲ್ಲಿ 7 ಸರಣಿ ಬಾಂಬ್ಗಳು ಸ್ಫೋಟಗೊಂಡು 209 ಜನರು ಮೃತಪಟ್ಟಿದ್ದರು. ಅಂದಹಾಗೆ ಈ ಭಯಾನಕ ಕೃತ್ಯದ ಮಾಸ್ಟರ್ ಮೈಂಡ್ ಈತನೇ, ಸ್ಫೋಟಕ್ಕಾಗಿ ಉಗ್ರರಿಗೆ ರಿಯಾಜ್ ಭಟ್ಕಳ 35 ಕೆ.ಜಿ.ಯಷ್ಟು ಸ್ಫೋಟಕ ಸರಬರಾಜು ಮಾಡಿದ್ದ. ಇಷ್ಟೇ ಅಲ್ಲ ಜೈಪುರ, ಹೈದರಾಬಾದ್ ಸೇರಿದಂತೆ ಅಹಮದಾಬಾದ್ ಮತ್ತು ದೆಹಲಿ ಸರಣಿ ಸ್ಫೋಟಗಳಲ್ಲೂ ರಿಯಾಜ್ ಮಾಸ್ಟರ್ ಮೈಂಡ್ ಆಗಿದ್ದ. ಆದರೆ ಭಾರತೀಯ ಪೊಲೀಸರಿಗೆ ಹೆದರಿ ದೇಶದಿಂದ ಪರಾರಿಯಾಗಿದ್ದ ಈತ ಪಾಕ್ನಲ್ಲಿ ಅಡ ಕೂತಿದ್ದಾನೆ.
ಕಪ್ಪುಪಟ್ಟಿಗೆ ಸೇರಲಿದೆಯಾ ಪಾಕಿಸ್ತಾನ..?
ಸದಾ ಬೇರೆಯರಿಗೆ ಕೇಡು ಬಯಸುವ ಪಾಕಿಸ್ತಾನ ತನ್ನ ತಲೆ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಳ್ಳುತ್ತಿದೆ. ಈಗಲೂ ಅದೇ ಆಗಿದೆ. ಪಾಕಿಸ್ತಾನ ಉಗ್ರರು ಹಾಗೂ ಉಗ್ರ ಸಂಘಟನೆ ಮುಖ್ಯಸ್ಥರಿಗೆ ವಿಐಪಿ ಸೆಕ್ಯೂರಿಟಿ ನೀಡುತ್ತಿರುವ ವಿಚಾರ ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಸದ್ಯದಲ್ಲೇ ನಡೆಯಲಿರುವ ಪ್ಯಾರಿಸ್ ಮೂಲದ 'ಹಣಕಾಸು ಕ್ರಿಯಾ ಕಾರ್ಯಪಡೆ' (FATF)ಯ ವಾರ್ಷಿಕ ಸಭೆಯಲ್ಲಿ ಪಾಕ್ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. 2018ರಲ್ಲಿ ಹಣಕಾಸು ಕಾರ್ಯಪಡೆ ಪಾಪಿ ಪಾಕಿಸ್ತಾನವನ್ನು ಬೂದುಪಟ್ಟಿ (Graylist) ಅಂದರೆ, ಉಗ್ರರಿಗೆ ನೆಲೆ ಹಾಗೂ ಹಣಕಾಸು ನೆರವು ನೀಡುವ ದೇಶಗಳ ಲಿಸ್ಟ್ಗೆ ಸೇರಿಸಿತ್ತು. ಈಗ ಇದೇ ಸಂಸ್ಥೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ.
ಬರೆ ಎಳೆದರೂ ಬುದ್ಧಿ ಬರಲಿಲ್ಲವೇ..?
'ಹಣಕಾಸು ಕ್ರಿಯಾ ಕಾರ್ಯಪಡೆ' (FATF) ಪಾಕ್ ಮೇಲೆ ಎಳೆದಿದ್ದ ಬರೆ ಇನ್ನೂ ವಾಸಿಯಾಗಿಲ್ಲ. ಇದರ ನಡುವೆ ಮತ್ತೊಮ್ಮೆ FATF ಪಾಕ್ ವಿರುದ್ಧ ಕ್ರಮಕ್ಕೆ ಮುಂದಾಗುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಪಾಕ್ ಬೂದುಪಟ್ಟಿಯಿಂದ (Graylist) ಹೊರಬರಲು FATF ಷರತ್ತು ವಿಧಿಸಿತ್ತು. ಅದೇನೆಂದರೆ 2020ರ ಫೆಬ್ರವರಿ ಒಳಗೆ ಉಗ್ರರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿತ್ತು. ಆದರೂ ಪಾಕ್ ತೆಪ್ಪಗೆ ಕೂತಿತ್ತು. ಕೊರೊನಾ ನೆಪದಲ್ಲಿ ಅದನ್ನು ಜೂನ್ಗೆ ವಿಸ್ತರಿಸಿ ನಂತರ ಸೆಪ್ಟೆಂಬರ್ಗೆ ವಿಸ್ತರಿಸಿದರೂ ಪಾಕ್ ಬದಲಾಗಿಲ್ಲ. ಹೀಗಾಗಿ ಸದ್ದದಲ್ಲೇ ನಡೆಯಲಿರುವ 'ಹಣಕಾಸು ಕ್ರಿಯಾ ಕಾರ್ಯಪಡೆ'ಯ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಅಂದರೆ ಉಗ್ರ ನಿಗ್ರಹದಲ್ಲಿ ಅಸಹಕಾರ ಎಂಬ ಪಟ್ಟಿಯಲ್ಲಿ ಗುರುತಿಸಬಹುದು. ಹೀಗೆ ಆದರೆ ಪಾಕ್ ಬೀದಿಗೆ ಬೀಳಲಿದೆ.
Recommended Video
ಭಿಕ್ಷೆ ಎತ್ತಬೇಕು ಪಾಪಿ ಪಾಕ್
ಅಕಸ್ಮಾತ್ 'ಹಣಕಾಸು ಕ್ರಿಯಾ ಕಾರ್ಯಪಡೆ' (FATF) ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ (ಉಗ್ರ ನಿಗ್ರಹದಲ್ಲಿ ಅಸಹಕಾರ) ಸೇರಿಸಿದರೆ, ಜಗತ್ತಿನ ಮುಂದೆ ಪಾಕ್ ಭಿಕ್ಷೆ ಎತ್ತಿದರೂ ಒಂದು ರೂಪಾಯಿ ಕೂಡ ಗಿಟ್ಟುವುದಿಲ್ಲ. ಏಕೆಂದರೆ ಕಪ್ಪುಪಟ್ಟಿಗೆ ಸೇರಿದ ದೇಶ ಐಎಂಎಫ್, ಎಡಿಬಿ ಹಾಗೂ ವಿಶ್ವಬ್ಯಾಂಕ್ನಿಂದಲೂ ನಿಷೇಧಕ್ಕೆ ತುತ್ತಾಗುತ್ತದೆ. ಈ ರೀತಿ ಆದರೆ ಸಾಲ ಸೌಲಭ್ಯ ಸಿಗುವುದಿಲ್ಲ, ಅಂತಾರಾಷ್ಟ್ರೀಯ ನಿಷೇಧದಿಂದ ವಹಿವಾಟು ಸ್ತಗಿತವಾಗುತ್ತದೆ. ಈಗಾಗಲೇ ಆರ್ಥಿಕವಾಗಿ ಬೀದಿಗೆ ಬಿದ್ದಿರುವ ಪಾಕಿಸ್ತಾನ, ಅಕ್ಷರಶಃ ನಲುಗಿ ಹೋಗಲಿದೆ.