ಎಫ್ಎಟಿಎಫ್ ಕಪ್ಪುಪಟ್ಟಿಯಿಂದ ಬಚಾವಾಗಲು ಪಾಕ್ ಕಳ್ಳಾಟ
ಇಸ್ಲಾಮಾಬಾದ್, ಆಗಸ್ಟ್ 23: ಪಾಕಿಸ್ತಾನವು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ಫೋರ್ಸ್ ಕಪ್ಪು ಪಟ್ಟಿಯಿಂದ ಬಚಾವಾಗಲು ಸಾಕಷ್ಟು ಕಳ್ಳಾಟವಾಡುತ್ತಿದೆ.
ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದು, ಹಫೀಜ್ ಸಯೀದ್, ಮಸೂದ್ ಅಜರ್ ಸೇರಿದಂತೆ 88 ಉಗ್ರರ ಮೇಲಿನ ನಿರ್ಬಂಧ ಹೆಚ್ಚಳ ಮಾಡಲಾಗಿದೆ ಎಂಸು ಪಾಕಿಸ್ತಾನ ಹೇಳಿದೆ.
ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ 88 ನಿಷೇಧಿತ ಭಯೋತ್ಪಾದಕ ಗುಂಪುಗಳ ನಾಯಕರು ಮತ್ತು ಮೋಸ್ಟ್ ವಾಂಟೆಡ್ ಉಗ್ರರ ಮೇಲಿನ ನಿರ್ಬಂಧಗಳನ್ನು ಹೆಚ್ಚಳ ಮಾಡಲಾಗಿದೆ.

ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರುಗಳ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಆದೇಶಿಸುವ ಮೂಲಕ ಕಠಿಣ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದೂ ಪಾಕ್ ಹೇಳಿದೆ.
ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ ಎನ್ನಲಾಗಿದೆ. ಇದೇ ದಾವೂದ್ ವಿಚಾರವಾಗಿ ಭಾರತ ಸಾಕಷ್ಟು ವರ್ಷಗಳ ಪಾಕ್ ಸರ್ಕಾರದ ಮೇಲೆ ಒತ್ತಡ ಹೇರಿತ್ತು.
ದಾವೂದ್ ಪಾಕ್ ನಲ್ಲೇ ಇದ್ದು, ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಆತನಿಗೆ ಆಶ್ರಯ ನೀಡಿದೆ ಎಂದೂ ವಾದಿಸಿತ್ತು. ಆದರೆ ಅದನ್ನು ದಶಕಗಳ ಕಾಲ ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು. ಇದೀಗ ಫತ್ಫ್ ಪಟ್ಟಿ ಭೀತಿ ಹಿನ್ನಲೆಯಲ್ಲಿ ದಾವೂದ್ ಪಾಕಿಸ್ತಾನದಲ್ಲಿರುವುದನ್ನು ಬೇರೆ ದಾರಿ ಇಲ್ಲದೆ ಒಪ್ಪಿಕೊಂಡಿದೆ.
ಭಯೋತ್ಪಾದಕ ಸಂಘಟನೆಗಳ ಪ್ರಮುಖ ವ್ಯಕ್ತಿಗಳಾದ 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ ಮುಖ್ಯಸ್ಥ ಸಯೀದ್, ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಅಜರ್, ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಅವರ ಮೇಲೆ ನಿರ್ಬಂಧ ವಿಧಿಸುವ ಹಿನ್ನಲೆಯಲ್ಲಿ ಅಗಸ್ಟ್ 18 ರಂದು ನೋಟಿಸ್ ಹೊರಡಿಸಿತ್ತು.
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್2018 ರ ಜೂನ್ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಇರಿಸಿತ್ತು. 2019 ರ ಅಂತ್ಯದ ವೇಳೆಗೆ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ಗಡುವನ್ನು ನಂತರ ವಿಸ್ತರಿಸಿತ್ತು.












Click it and Unblock the Notifications