‘ಖಲಿಸ್ತಾನಿ’ ವಿಚಾರದಲ್ಲಿ ಮತ್ತೆ ಅಮೆರಿಕ ಎಂಟ್ರಿ! ಕಾರಣ ತಿಳಿಯಿರಿ
ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತೊಮ್ಮೆ ತಲೆಹಾಕಿದೆ. ಇಷ್ಟುದಿನ ಪರೋಕ್ಷವಾಗಿ ಈ ವಿಚಾರದಲ್ಲಿ ಅಮೆರಿಕ ಮಾತನಾಡುತ್ತಿತ್ತು, ಆದ್ರೆ ಇಂದು ನೇರವಾಗಿಯೇ ಭಾರತಕ್ಕೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಅಮೆರಿಕ ಸಲಹೆ ಒಂದನ್ನ ನೀಡಿದೆ. ಹಾಗಾದ್ರೆ ಅಮೆರಿಕ ಎಂಟ್ರಿ ಕೊಟ್ಟಿದ್ದು ಏಕೆ? ಇದು ಭಾರತ & ಅಮೆರಿಕ ಸಂಬಂಧದ ಮೇಲೆ ಪ್ರಭಾವ ಬೀರುತ್ತಾ?
ಅಷ್ಟಕ್ಕೂ ಭಾರತ ಹಾಗೂ ಕೆನಡಾ ನಡುವೆ ಹರ್ದೀಪ್ ಸಿಂಗ್ ನಿಜ್ಜರ್ ವಿಚಾರದಲ್ಲಿ ಬೆಂಕಿ ಹೊತ್ತಿರುವುದು ಗೊತ್ತಿರುವ ಸಂಗತಿ. ಆದರೆ ಈ ವಿಚಾರದಲ್ಲಿ ಅಮೆರಿಕ ಪದೇ ಪದೆ ಮಧ್ಯ ಪ್ರವೇಶಕ್ಕೆ ಯತ್ನಿಸುತ್ತಿದೆ. ಈಗಲೂ ಅಷ್ಟೇ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾ ಸರ್ಕಾರದ ಆರೋಪ ಗಂಭೀರವಾಗಿದ್ದು, ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಅಮೆರಿಕ ಇದೀಗ ಪ್ರತಿಪಾದಿಸಿದೆ. ಅಮೆರಿಕ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ.

ಭಾರತದ ಮೇಲಿನ ಆರೋಪ ಗಂಭೀರ...
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವೈಟ್ಹೌಸ್ನ ರಾಷ್ಟ್ರೀಯ ಭದ್ರತಾ ಮಂಡಳಿ ಸಂಯೋಜಕ ಜಾನ್ ಕಿರ್ಬಿ, ಹರ್ದೀಪ್ ಸಿಂಗ್ ಹತ್ಯೆಯ ಕುರಿತು ಭಾರತದ ಮೇಲಿನ ಆರೋಪ ಗಂಭೀರ ಸ್ವರೂಪದ್ದು. ಈ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಹಿಂದೆಯೇ ನಾವು ಹೇಳಿದ್ದೇವೆ. ತನಿಖೆಗೆ ಭಾರತ ಸಹಕಾರ ನೀಡಬೇಕಿದೆ ಎಂದಿದ್ದಾರೆ. ವಿಷಯಕ್ಕೆ ಸಂಬಂಧಿಸಿ ತಲೆದೋರಿರುವ ದ್ವಿಪಕ್ಷೀಯ ಬಾಂಧವ್ಯದ ಬಿಕ್ಕಟ್ಟನ್ನು ಬಗೆಹರಿಸುವ ಆಯ್ಕೆಯನ್ನು ಎರಡೂ ದೇಶಗಳಿಗೆ ಬಿಟ್ಟಿದ್ದೇವೆ ಎಂದಿದ್ದಾರೆ.
ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದೇವೆ
ಇನ್ನು ಮತ್ತೊಂದು ಕಡೆ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ವಿದೇಶಾಂಗ ಇಲಾಖೆ ಉಪ ವಕ್ತಾರ ವೇದಾಂತ್ ಪಟೇಲ್, ಕೃತ್ಯ ಎಸಗಿದ ದುಷ್ಕರ್ಮಿಗಳ ಪತ್ತೆ ಹಚ್ಚುವುದು ಕೆನಡಾಗೆ ಕಷ್ಟಕರ. ಹಾಗಾಗಿ, ತನಿಖೆಗೆ ಎಲ್ಲಾ ರೀತಿ ಸಹಕಾರ ನೀಡುವಂತೆ ಈಗಾಗಲೇ ನಾವು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದೀವಿ ಎಂದಿದ್ದಾರೆ. ಈ ಮೂಲಕ ಅಮೆರಿಕ ನೇರವಾಗಿ ಇದೀಗ ಭಾರತ ಹಾಗೂ ಕೆನಡಾ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ. ಆದರೆ ಈ ಕುರಿತು ಭಾರತ ಇನ್ನೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದೆ ಏನಾಗುತ್ತದೋ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ.

ಈ ಘಟನೆಯ ಹಿನ್ನೆಲೆ ಏನು?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಈಗ ಅಮೆರಿಕ ಬುದ್ಧಿ ಹೇಳಲು ಬಂದಿದೆ.
ವಿಶ್ವಸಂಸ್ಥೆಯಲ್ಲೇ ಭಾರತದ ತಿರುಗೇಟು
ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ನೀಡಿರುವ ಹೇಳಿಕೆ ಗಮನ ಸೆಳೆದಿತ್ತು. ಅತ್ತ ಪಾಕಿಸ್ತಾನದ ಗಡಿಯ ಉದ್ವಿಗ್ನ ಪರಿಸ್ಥಿತಿ ಮತ್ತು ಭಾರತ & ಕೆನಡಾದ ರಾಜತಾಂತ್ರಿಕ ವಿವಾದಕ್ಕೆ ಖಡಕ್ ತಿರುಗೇಟು ನೀಡಿದಂತಿತ್ತು. ಕೆನಡಾಗೆ ನೇರವಾಗಿ ಸಂದೇಶ ನೀಡಿದ್ದ ಜೈಶಂಕರ್ ಅವರು, ರಾಜಕೀಯ ಅನುಕೂಲತೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರತಿಕ್ರಿಯೆಗಳನ್ನು ನಿರ್ಧರಿಸುತ್ತೆ ಎಂದು ಪರಿಗಣಿಸಬಾರದು ಎಂದಿದ್ರು. ಈ ಮೂಲಕ ಕೆನಡಾಗೆ ಭಾರತದ ವಿದೇಶಾಂಗ ಸಚಿವರು ಸೂಕ್ತ ತಿರುಗೇಟು ಕೊಟ್ಟಿದ್ದರು. ಆದರೆ ಈಗ ಅಮೆರಿಕ ಕೂಡ ಮಧ್ಯಪ್ರವೇಶ ಮಾಡುತ್ತಿದೆ.












Click it and Unblock the Notifications