ಇಸ್ಲಾಂನ ಪವಿತ್ರ ರಮ್ಜಾನ್ ಮಾಸಕ್ಕೆ ಮೆತ್ತಿದ ರಕ್ತ ಒರೆಸುವುದು ಹೇಗೆ?
ರಮ್ಜಾನ್ ಮಾಸಕ್ಕೆ ಇಸ್ಲಾಂನಲ್ಲಿ ಬಹಳ ಪ್ರಾಮುಖ್ಯ. ಆ ಮಾಸದ ಕೊನೆಗೆ ಈದ್ ಉಲ್ ಫಿತ್ರ್ ಎಂದು ಆಚರಿಸಲಾಗುತ್ತದೆ. ಈ ಮಾಸಕ್ಕೆ ದಾನ- ಧರ್ಮ ಒಳಿತನ್ನೇ ಸೂಚಿಸುವ ಗುಣವಿದೆ. ಯಾವ ಮಾಸಕ್ಕೆ ಇವೆಲ್ಲವನ್ನು ಹೇಳುವ ಗುಣವಿಲ್ಲ ಹೇಳಿ? ಆದರೆ ರಮ್ಜಾನ್ ಅಂದರೆ ಒಂದು ಕೈ ಮೇಲು. ಶ್ರದ್ಧೆಯಿಂದ ರೋಜಾ (ಉಪವಾಸ), ನಮಾಜ್, ದಾನ ಮಾಡಿ, ಪುನೀತರಾಗುವ ಸಮಯ ಇದು.
ಆದರೆ, ಇತ್ತೀಚೆಗೆ ರಮ್ಜಾನ್ ಮಾಸದಲ್ಲಿ ತಮ್ಮ ಜೀವವನ್ನೇ ಅರ್ಪಣೆ ಮಾಡುವ, ಅದಕ್ಕೆ ತ್ಯಾಗ ಎಂಬ ಹೆಸರು ನೀಡುವ ಪ್ರವೃತ್ತಿ ಹೆಚ್ಚಾಗಿದೆ. ಅದರಲ್ಲೂ ಆತ್ಮಾಹುತಿ ದಾಳಿ, ಜನರ ಕೊಲೆಗೆ ಈ ಮಾಸವನ್ನೇ ಆಯ್ದುಕೊಳ್ಳಲಾಗುತ್ತಿದೆ. ಇವೆಲ್ಲ ಉಗ್ರಗಾಮಿ ಸಂಘಟನೆಗಳ ಕೃತ್ಯ ಬಿಡಿ. ಏಕೆಂದರೆ, ಧರ್ಮದ ಹೆಸರಿನಲ್ಲಿ ರೊಚ್ಚಿಗೆಬ್ಬಿಸಿ, ಮನಸ್ಸನ್ನು ಹಾಳು ಮಾಡಿ, ಕೊಲ್ಲುವ ಕೃತ್ಯಕ್ಕೆ ಜನರನ್ನು ಬಳಸಿಕೊಳ್ಳುವ 'ಮಾದರಿ' ಇದು.
ಎಷ್ಟೋ ಮುಸ್ಲಿಮೇತರ ದೇಶಗಳು ಮುಸ್ಲಿಂ ದೇಶಗಳಲ್ಲಿನ ತಮ್ಮ ರಾಯಭಾರ ಕಚೇರಿಯನ್ನೇ ಈ ಮಾಸದಲ್ಲಿ ತೆರೆಯುವುದಿಲ್ಲ. ಏಕೆಂದರೆ, ಉಗ್ರಗಾಮಿಗಳು ದಾಳಿ ಮಾಡಿದ ಉದಾಹರಣೆಗಳಿವೆ ಹಾಗೂ ತಮ್ಮ ದೇಶದ ಎಷ್ಟೋ ಮಂದಿಯನ್ನು ಕಳೆದುಕೊಂಡಿದ್ದೂ ಇದೆ. ಈ ವರ್ಷದ ರಮ್ಜಾನ್ ಮಾಸದಲ್ಲಿ ಅಂಥ ಘಟನೆಗಳು ಎಷ್ಟಾದವು ಎಂಬುದರ ಮಾಹಿತಿ ಇಲ್ಲಿದೆ.

ಈ ವರ್ಷದ ಮೇ 16ರಿಂದ ಜೂನ್ 14ರ ವರೆಗೆ ರಮ್ಜಾನ್ ಮಾಸ. ಈ ವೇಳೆ ನಡೆದ ಭಯೋತ್ಪಾದಕ ದಾಳಿಗಳ ಒಂದು ಪಟ್ಟಿ. ಇದು ಒಂದು ಧರ್ಮದ ವಿರುದ್ಧದ ಲೆಕ್ಕವಲ್ಲ. ಧರ್ಮದ ಉದ್ದೇಶವನ್ನು ತಮಗೆ ಬೇಕೆಂದ ರೀತಿ ಬಳಸುತ್ತಿರುವವರ ಲೆಕ್ಕದ ವಿವರ ಇದು.
ಮೇ 16: ಇಂಡೋನೇಷ್ಯಾದ ಪೆಕನ್ ಬರುದಲ್ಲಿ ನಡೆ ಕತ್ತಿಯಿಂದ ಮಾಡಿದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರು. ಇಸ್ಲಾಮಿಕ್ ಸ್ಟೇಟ್ ಸಂಘಟನೆ ಇದರ ಹೊಣೆ ಹೊತ್ತಿತ್ತು.
ಮೇ 16: ಮೊಜಾಂಬಿಕ್ ನ ಮ್ಯಾಕೊಮಿಯಾದಲ್ಲಿ ಅನ್ಸರ್- ಅಲ್ ಸುನ್ನಾ ಸಂಘಟನೆಯ ಬಂದೂಕು ಹಾಗೂ ಕತ್ತಿ ದಾಳಿಯಲ್ಲಿ ಇಬ್ಬರನ್ನು ಕೊಂದಿದ್ದರು. ಆದರೆ ಅವರು ಅಲ್ಲಿನ ಮೀನುಗಾರರ ಬಳಿ ಇಟ್ಟ ಬೇಡಿಕೆ ಈಡೇರಲಿಲ್ಲ ಎಂಬ ಕಾರಣಕ್ಕೆ ಹಾಗೆ ಮಾಡಿದ್ದರು.
ಮೇ 16: ಇರಾಕ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದರು.
ಮೇ 17: ನೈಜೀರಿಯಾದ ದಿಕ್ವಾದಲ್ಲಿ ಬೋಕೋಹರಾಮ್ ಆತ್ಮಾಹುತಿ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದರು.
ಮೇ 17: ಪಾಕಿಸ್ತಾನದ ನೌಷೇರಾದಲ್ಲಿ ಹಿಜ್ಬುಲ್ ಅಹ್ರಾರ್ ಆತ್ಮಾಹುತಿ ದಾಳಿಗೆ ಒಬ್ಬರು ಮೃತಪಟ್ಟಿದ್ದರು
ಮೇ 17: ಪಾಕಿಸ್ತಾನದ ಕ್ವೆಟ್ಟಾದ ನಡೆದ ಕಾರು ಬಾಂಬ್ ಹಾಗೂ ಆತ್ಮಾಹುತಿ ದಾಳಿ ನಡೆಸಿದ ತೆಹ್ರೀಕ್ ಇ ತಾಲಿಬಾನ್ ಒಬ್ಬರನ್ನು ಕೊಂದಿತ್ತು.
ಹೀಗೆ ದಾಳಿಯು ನಾನಾ ಕಡೆ ನಡೆದಿದೆ. ಆರಂಭದಲ್ಲಿ ಮೃತ ಪಟ್ಟವರ ಸಂಖ್ಯೆ ಆ ನಂತರ ಹೆಚ್ಚಾಗಿದೆ. ಆದರೆ ಉಗ್ರಗಾಮಿ ಸಂಘಟನೆಗಳ ದಾಳಿ ಮಾತ್ರ ಭೀಕರವಾಗಿ ನಡೆದಿದೆ. ಒಂದು ಅಂದಾಜಿನ ಪ್ರಕಾರ ಮೇ ತಿಂಗಳೊಂದರಲ್ಲೇ ಮೃತಪಟ್ಟವರ ಸಂಖ್ಯೆ 327ಕ್ಕೂ ಹೆಚ್ಚಿದೆ. ಇನ್ನು ಗಾಯಗೊಂಡವರ ಲೆಕ್ಕ ಮತ್ತೂ ಹೆಚ್ಚಾಗುತ್ತದೆ.
ಇದರಲ್ಲಿ ಜೂನ್ ತಿಂಗಳು ನಡೆದಿರುವ ಅಂದರೆ ಹದಿನಾಲ್ಕು ದಿನದ ಲೆಕ್ಕ್ ಸೇರಿಕೊಂಡಿಲ್ಲ. ಅದು ಸೇರಿದರೆ ಮತ್ತೂ ಹೆಚ್ಚಾಗುತ್ತದೆ. ಆತ್ಮಾಹುತಿ ದಾಳಿ, ರಾಕೆಟ್ ದಾಳಿ, ಕಾರ್ ಬಾಂಬ್, ಅಷ್ಟೇ ಏಕೆ ಗುರುವಾರ- ಜೂನ್ ಹದಿನಾಲ್ಕನೇ ತಾರೀಕು ಶ್ರೀನಗರದಲ್ಲಿ ಹತ್ಯೆಯಾದ ಪತ್ರಕರ್ತ ಬುಖಾರಿ ಕೂಡ ಉಗ್ರರಿಂದಲೇ ಹತ್ಯೆಯಾದವರು ಎನ್ನಲಾಗುತ್ತಿದೆ.
ಇಡೀ ಜಗತ್ತನ್ನೇ ಪುಟ್ಟಪುಟ್ಟ ಸ್ಮಶಾನವಾಗಿ ಮಾಡಿ, ದಾನ- ಧರ್ಮ ಯಾರಿಗೆ ಮಾಡಬೇಕು? ಪುಣ್ಯ ಸಂಪಾದನೆ ಹೇಗಾಗಬೇಕು?












Click it and Unblock the Notifications