ಕೊನೆಗೂ ಪ್ರಧಾನಿ ಮೋದಿ-ಇಮ್ರಾನ್ ಖಾನ್ ಉಭಯಕುಶಲೋಪರಿ ವಿನಿಮಯ
ಬಿಷೆಕ್, ಜೂನ್ 15: ಕಿರ್ಗಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ (ಎಸ್ಸಿಒ) ಶೃಂಗ ಸಭೆಯ ಎರಡನೇ ದಿನ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಭಯಕುಶಲೋಪರಿ ವಿನಿಮಯ ಮಾಡಿಕೊಂಡಿದ್ದಾರೆ.
ಸಭೆಯೊಂದರಲ್ಲಿ ಇಬ್ಬರೂ ಮುಖಾಮುಖಿಯಾಗುವ ಸಂದರ್ಭ ಬಂದಾಗ ಔಪಚಾರಿಕವಾಗಿ ಇಬ್ಬರೂ ಕುಶಲೋಪರಿ ವಿನಮಯ ಮಾಡಿಕೊಂಡಿದ್ದಾರೆ. ಶುಕ್ರವಾರ ಇಮ್ರಾನ್ ಖಾನ್ ಉಭಯ ನಾಯಕರೂ ಎದುರಲ್ಲೇ ಸಿಕ್ಕರೂ ಮಾತುಕತೆಯಾಡಿರಲಿಲ್ಲ.

ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮೂಲದ ಜೆಇಎಂ ಕೈವಾಡ ಸಾಬೀತಾದ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನದ ನಡುವಿನ ಸಂಬಂಧ ಬಿಗುಡಾಯಿಸಿತ್ತು. ಈಗಲೂ ಔಪಚಾರಿಕವಾಗಿ ಉಭಯಕುಶಲೋಪರಿ ವಿನಿಮಯವಾಗಿದ್ದು ಬಿಟ್ಟರೆ, ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ರಾಜತಾಂತ್ರಿಕ ಮಾತುಕತೆಗೆ ಭಾರತ ಮುಂದಾಗಿಲ್ಲ. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಮಾತುಕತೆ ಎಂದು ಈಗಾಗಲೇ ಪ್ರಧಾನಿ ಮೋದಿ ಖಡಕ್ಕಾಗಿ ಹೇಳಿದ್ದಾರೆ.
ಆದರೆ ಇಮ್ರಾನ್ ಖಾನ್ ರಷ್ಯನ್ ನ್ಯೂಸ್ ಏಜೆನ್ಸಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಭಾರತದೊಂದಿಗೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. "ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ತೀರಾ ಬಿಗುಡಾಯಿಸಿದ್ದು, ಎಂದೂ ಇಲ್ಲದಷ್ಟು ಕೆಳಸ್ಥಾನಕ್ಕೆ ತಲುಪಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸಿಕ್ಕ ಜನಾದೇಶವನ್ನು ಭಾರತ-ಪಾಕಿಸ್ತಾನದ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡಲು ಬಳಸುತ್ತಾರೆ ಎಂದು ಭಾವಿಸಿದ್ದೇನೆ" ಎಂದಿದ್ದರು.
ಇದೇ ವೇಳೆ ಶುಕ್ರವಾರ ಸಭೆಯಲ್ಲಿ ಇಮ್ರಾನ್ ಖಾನ್ ಎದುರಲ್ಲೇ ಮಾತನಾಡಿದ್ದ ಮೋದಿ, "ಭಯೋತ್ಪಾದಕರಿಗೆ ಯಾವ ದೇಶ ಹಣ ನೀಡುತ್ತದೋ, ಆಶ್ರಯ ನೀಡುತ್ತದೋ, ಕುಮ್ಮಕ್ಕು ನೀಡುತ್ತದೋ ಆ ದೇಶವೇ ಭಯೋತ್ಪಾದಕ ದಾಳಿಗಳಿಗೂ ಹೊಣೆಯಾಗಿರುತ್ತದೆ. ಆದ್ದರಿಂದ ವಿಶ್ವದ ಇತರ ದೇಶಗಳು ಉಗ್ರಗಾಮಿತ್ವಕ್ಕೆ ಬೆಂಬಲ ನೀಡುವ ದೇಶವನ್ನು ದೂರ ಇಡಬೇಕು"- ಎಂದು ಪಾಕಿಸ್ತಾನಕ್ಕೆ ಪರೋಕ್ಷ ಟಾಂಗ್ ನೀಡಿದ್ದರು.












Click it and Unblock the Notifications