ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ: ಮೊರ್ಬಿ ಸೇತುವೆ ದುರಂತಕ್ಕೆ ಬೈಡನ್ ಸಂತಾಪ
ವಾಷಿಂಗ್ಟನ್/ನವದೆಹಲಿ: ಗುಜರಾತ್ನ ಮೊರ್ಬಿ ಸೇತುವೆ ದುರಂತವು 140ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿದೆ. ನಾಪತ್ತೆಯಾದವರ ಶೋಧಕಾರ್ಯ ಮುಂದುವರಿದಿದೆ.
ಮೊರ್ಬಿ ಸೇತುವೆ ದುರಂತಕ್ಕೆ ಜಗತ್ತಿನ ಹಲವು ಗಣ್ಯ ನಾಯಕರು ಈಗಾಗಲೇ ಸಂತಾಪ ಸೂಚಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ದುರಂತದಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
'ನಮ್ಮ ಹೃದಯಗಳು ಭಾರತದೊಂದಿಗಿವೆ. ಸೇತುವೆ ಕುಸಿತ ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಾನು ಹಾಗೂ ನನ್ನ ಪತ್ನಿ ಸಂತಾಪ ಸೂಚಿಸುತ್ತೇವೆ. ಪ್ರೀತಿಯ ಜೀವಗಳನ್ನು ಕಳೆದುಕೊಂಡಿರುವವರ ನೋವಿನಲ್ಲಿ ನಾವು ಭಾಗವಹಿಸುತ್ತೇವೆ' ಎಂದು ಬೈಡನ್ ಹೇಳಿದ್ದಾರೆ.

'ಅಮೆರಿಕಾ ಹಾಗೂ ಭಾರತವು ಪಾಲುದಾರ ದೇಶಗಳಾಗಿವೆ. ನಮ್ಮ ದೇಶಗಳ ನಾಗರಿಕರ ನಡುವೆ ಆಳವಾದ ಬಾಂಧವ್ಯವಿದೆ. ಈ ಕಷ್ಟದ ಸಮಯದಲ್ಲಿ, ನಾವು ಭಾರತದ ಜನರೊಂದಿಗೆ ನಿಲ್ಲುತ್ತೇವೆ ಮತ್ತು ಬೆಂಬಲಿಸುತ್ತೇವೆ' ಎಂದು ಅವರು ತಿಳಿಸಿದ್ದಾರೆ.
135ಕ್ಕೂ ವರ್ಷಕ್ಕೂ ಹಳೆಯದಾದ ಸೇತುವೆಯನ್ನು ದುರಸ್ತಿ ಮಾಡಲಾಗಿತ್ತು. ಅಕ್ಟೋಬರ್ 26ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. 500ಕ್ಕೂ ಹೆಚ್ಚು ಜನರು ಸೇತುವೆ ಮೇಲೆ ಸಾಗುತ್ತಿರುವಾಗ ಈ ದುರಂತ ಸಂಭವಿಸಿದೆ. ಈಗಾಗಲೇ ಸುಮಾರು 140ಕ್ಕೂ ಹೆಚ್ಚು ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತರಲ್ಲಿ 50 ಮಕ್ಕಳು ಮತ್ತು 40 ಮಹಿಳೆಯರೂ ಸೇರಿದ್ದಾರೆ. ಇನ್ನೂ ಹಲವರ ದೇಹಗಳು ನೀರಿನಲ್ಲೇ ಇವೆ. ಅವುಗಳ ಶೋಧ ಕಾರ್ಯ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ದೂರ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಪ್ರಧಾನಿ ಮೋದಿ ಭೇಟಿ:
ಸೇತುವೆ ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ಮಂಗಳವಾರ ಭೇಟಿ ನೀಡಲಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಲಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ ₹ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ದುರಂತ ನಡೆದು ಎರಡು ದಿನ ಕಳೆದರೂ, ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲ್ಲ ಎಂದು ವಿರೋಧ ಪಕ್ಷಗಳು ಹರಿಹಾಯ್ದಿವೆ.
ಸಂಚಾರಕ್ಕೆ ಸೇತುವೆ ಮುಕ್ತ: ಅರ್ಹತಾ ಪ್ರಮಾಣ ಪತ್ರವನ್ನೇ ಪಡೆದಿಲ್ಲ
ಶತಮಾನಕ್ಕೂ ಹಳೆಯದಾದ ಸೇತುವೆ ದುರುಸ್ತಿ ಮಾಡಲಾಗಿತ್ತು. 26ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ದುರಸ್ತಿ ಕಾಮಗಾರಿ ಮಾಡಿದ ಕಂಪನಿಯು ಅರ್ಹತಾ ಪ್ರಮಾಣ ಪತ್ರವನ್ನೇ ಪಡೆದಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಈ ವಿಚಾರವಾಗಿ ಮಾಹಿತಿ ನೀಡಿರುವ ಮೊರ್ಬಿ ಪುರಸಭಾ ಅಧಿಕಾರಿಯೊಬ್ಬರು, 'ಈ ಸೇತುವೆಯು ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದೆ. ಇದು ಶಿಥಿಲಾವಸ್ಥೆಯಲ್ಲಿ ಇತ್ತು. ಇದರ ನಿರ್ವಹಣೆಯನ್ನು 15 ವರ್ಷಗಳ ಅವಧಿಗೆ ಒರೆವಾ ಕಂಪನಿಗೆ ನೀಡಲಾಗಿತ್ತು. ಈ ವರ್ಷದ ಮಾರ್ಚ್ನಲ್ಲಿ ನವೀಕರಣ ಕಾರ್ಯ ಆರಂಭವಾಗಿತ್ತು. ಹೀಗಾಗಿ, ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಅಕ್ಟೋಬರ್ 26ರಂದು ಸಾರ್ವಜನಕ ಸಂಚಾರಕ್ಕೆ ಮತ್ತೆ ಮುಕ್ತಗೊಳಿಸಲಾಗಿತ್ತು. ಇದಕ್ಕೆ ಪುರಸಭೆಯಿಂದ ಅರ್ಹತಾ ಪ್ರಮಾಣ ಪತ್ರ ನೀಡಿರಲಿಲ್ಲ' ಎಂದು ಮಾಹಿತಿ ನೀಡಿದ್ದಾರೆ.

ದುರಂತಕ್ಕೆ ಸರ್ಕಾರವೇ ಹೊಣೆ: ವಿರೋಧ ಪಕ್ಷಗಳು
ಮೊರ್ಬಿ ದುರಂತಕ್ಕೆ ನೇರವಾಗಿ ಗುಜರಾತ್ನ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ. ಅರ್ಹತಾ ಪ್ರಮಾಣ ಪತ್ರ ಪಡೆಯದೇ ಸೇತುವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಇದು ಗುಜರಾತ್ ಸರ್ಕಾರದ ಹೊಣೆಗೇಡಿತನವನ್ನು ಸೂಚಿಸುತ್ತದೆ ಎಂದು ಸಿಪಿಐ ವಾಗ್ದಾಳಿ ನಡೆಸಿದೆ.
ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಘಟನೆ ಕುರಿತಂತೆ ಯಾವುದೇ ರಾಜಕೀಯ ಮಾಡುವುದಿಲ್ಲ. ಹಾಗೇನಾದರೂ ಮಾಡಿದರೆ, ಸತ್ತವರಿಗೆ ಅವಮಾನ ಮಾಡಿದಂತೆ' ಎಂದು ಹೇಳಿದ್ದಾರೆ.












Click it and Unblock the Notifications