ರಾಜೀನಾಮೆ ನೀಡಿದ ಪ್ರಧಾನಿ, ಕೊರೊನಾ ಚಿಕಿತ್ಸೆ ಎಡವಟ್ಟಿನ ಎಫೆಕ್ಟ್..!
ಎಲ್ಲೆಲ್ಲೂ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಇಂತಹ ಸಂದರ್ಭದಲ್ಲೇ ಮಂಗೋಲಿಯಾದ ಆರೋಗ್ಯ ವ್ಯವಸ್ಥೆ ಮೇಲೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವೀಡಿಯೋ ತುಣುಕೊಂದು ಮಂಗೋಲಿಯಾ ಆರೋಗ್ಯ ವ್ಯವಸ್ಥೆಯನ್ನ ಬಿಡಿಸಿ ಹೇಳುತ್ತಿತ್ತು. ಅಷ್ಟಕ್ಕೂ ಬಾಣಂತಿ ಹಾಗೂ ಹಸುಗೂಸನ್ನು ನಡೆಸಿಕೊಂಡ ರೀತಿ ಕಿಚ್ಚು ಹಚ್ಚಿತ್ತು. ಕೊರೊನಾ ಸೋಂಕಿತೆಯೊಬ್ಬರು ಕೆಲ ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು.
ಆದರೆ ಇವರನ್ನು ಚಿಕಿತ್ಸೆಗೆ ಕರೆತರುವ ಸಂದರ್ಭದಲ್ಲಿ, ಆಕೆ ಹಾಗೂ ಮಗುವನ್ನ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಚಿಕಿತ್ಸೆ ನೀಡಲಾಗಿತ್ತು. ಮಂಗೋಲಿಯಾ ಉತ್ತರ ಧ್ರುವಕ್ಕೆ ಹತ್ತಿರದಲ್ಲೇ ಇರುವ ದೇಶ. ಹೀಗಾಗಿ ಸದ್ಯ ಅಲ್ಲಿನ ವಾತಾವರಣ ಮೈನಸ್ 25ರವರೆಗೂ ಇಳಿದಿದೆ. ಇಂತಹ ವಾತಾವರಣದಲ್ಲಿ ತಾಯಿ ಹಾಗೂ ಮಗುವನ್ನು ಬೆಚ್ಚಗೆ ಇಡಬೇಕಿತ್ತು. ಆದರೆ ಮಂಗೋಲಿಯಾದ ಆಸ್ಪತ್ರೆಯಲ್ಲಿ ತಾಯಿ-ಮಗುವನ್ನು ನಡೆಸಿಕೊಂಡ ರೀತಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಹೋರಾಟ ನಡೆದಿದ್ದು, ಸಾವಿರಾರು ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ನನ್ನ ತಪ್ಪು ಎಂದು ಮಂಗೋಲಿಯಾ ಪ್ರಧಾನಿ ಖುರೆಲ್ಸುಖ್ ಉಖ್ನಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಸಂಪ್ರದಾಯ ಏನು ಹೇಳುತ್ತೆ..?
ಭಾರತದಲ್ಲೂ ಬಾಣಂತಿಯರನ್ನ ಬೆಚ್ಚಗೆ ಇಡಬೇಕು ಎನ್ನುತ್ತಾರೆ ಹಿರಿಯರು. ಇದು ಕೆಲವು ದೇಶಗಳ ರೂಢಿ ಅಲ್ಲ, ಜಗತ್ತಿನ ಬಹುಪಾಲು ದೇಶಗಳು ಬಾಣಂತಿಯರನ್ನು ಬೆಚ್ಚಗೆ ಇಡಲು ಕಠಿಣ ನಿಯಮ ಅನುಸರಿಸುತ್ತವೆ. ಏಕೆಂದರೆ ತಾಯಿಗೆ ಶೀತವಾದರೆ, ಮಗುವಿಗೂ ಅದರಿಂದ ಸಮಸ್ಯೆ ಖಂಡಿತ. ಮಗುವಿಗೆ ಎಳೆಯ ವಯಸ್ಸಲ್ಲಿ ಶೀತ ರೋಗ ಆವರಿಸಿದರೆ ಭವಿಷ್ಯದಲ್ಲೂ ಮಗುವಿಗೆ ಸಮಸ್ಯೆ ಆಗುತ್ತದೆ. ಇದೇ ಕಾರಣಕ್ಕೆ ಬಾಣಂತಿಯನ್ನು ಬೆಚ್ಚಗಿಡಲು ಹತ್ತಾರು ಕ್ರಮಗಳನ್ನ ಕೈಗೊಳ್ಳಲಾಗುತ್ತದೆ. ಇದೇ ರೀತಿ ಮಂಗೋಲಿಯಾ ಸಂಪ್ರದಾಯ ಹೇಳುವ ಪ್ರಕಾರ, ಬಾಣಂತಿ ಒಂದು ತಿಂಗಳ ಕಾಲ ಶೀತದಿಂದ ದೂರ ಇರಬೇಕು. ಆದರೆ ಮಂಗೋಲಿಯಾ ಆಸ್ಪತ್ರೆಯ ಸಿಬ್ಬಂದಿ ಮಾಡಿದ್ದೇ ಬೇರೆ. ಇದೇ ಕಾರಣಕ್ಕೆ ಪ್ರಧಾನಿ ತಲೆದಂಡವಾಗಿದೆ.
ಕೊರೊನಾ, ಚಳಿ ಆರ್ಭಟ..!
ಜಗತ್ತಿನಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಗೆ ಚಳಿಯೂ ಕಾರಣವಾಗಿದೆ. ಇನ್ನು ಮಂಗೋಲಿಯಾ ವಾತಾವರಣ ಕೇಳಬೇಕಾ..? ಅಲ್ಲಿ ಫ್ರೀಜಿಂಗ್ ಟೆಂಪ್ರೇಚರ್ ಇರುತ್ತದೆ. ಹೀಗಾಗಿಯೇ ಅಲ್ಲಿನ ವಾತಾವರಣವು ರೋಗ ಹರಡಲು ಸಹಕಾರಿಯಾಗಿರುತ್ತದೆ. ಹೀಗೆ ಮಂಗೋಲಿಯಾದಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಇಂತಹ ಹೊತ್ತಲ್ಲೇ ಮಂಗೋಲಿಯಾ ಆರೋಗ್ಯ ಇಲಾಖೆ ಹೀಗೆ ಎಡವಟ್ಟು ಮಾಡಿಕೊಂಡು, ಪ್ರಧಾನಿಯನ್ನೇ ಹುದ್ದೆ ಬಿಟ್ಟು ಓಡುವಂತೆ ಮಾಡಿದೆ. ಜಗತ್ತಿನಾದ್ಯಂತ ಮಂಗೋಲಿಯಾ ಪ್ರಧಾನಿಯ ಈ ನಿರ್ಧಾರ ಮಿಂಚಿನ ಸಂಚಲನ ಸೃಷ್ಟಿಸಿದೆ.
ಚೀನಾಗೆ ಒಳಗೊಳಗೆ ಖುಷಿ..!
ಘಟನೆ ಬಳಿಕ ಚೀನಾ ಒಳಗೊಳಗೆ ಖುಷಿಪಡುತ್ತಿದೆ. ಏಕೆಂದರೆ ಅಕ್ಕಪಕ್ಕದ ದೇಶಗಳ ಗಡಿ ಮೇಲೆ ಕಣ್ಣಿಟ್ಟು ಕೂತಿರುವ ಚೀನಾ, ಒಂದೊಂದೇ ದೇಶದ ಗಡಿ ಭಾಗಗಳನ್ನು ಕಬಳಿಸುತ್ತಿದೆ. ಹಾಂಕಾಂಗ್, ತೈವಾನ್ ಜೊತೆ ಗುದ್ದಾಡುವಾಗಲೇ ಬೂತಾನ್ ಹಾಗೂ ನೇಪಾಳದಲ್ಲೂ ಗಡಿ ಒತ್ತುವರಿ ಮಾಡಿದೆ ಚೀನಾ. ಇದೇ ಕಾರಣಕ್ಕೆ ಮಂಗೋಲಿಯಾದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುತ್ತಿರುವುದು ಸಹಜವಾಗಿಯೇ ಚೀನಿ ಗ್ಯಾಂಗ್ಗೆ ಸ್ವಲ್ಪ ಸಂತಸ ತಂದಿದೆ. ಏಕೆಂದರೆ ಚೀನಾ ಮತ್ತು ಮಂಗೋಲಿಯಾ ಮಧ್ಯೆ ಬಹುದೊಡ್ಡ ಗಡಿ ಹಾದು ಹೋಗುತ್ತದೆ.
ಚೀನಿಯರ ಪರಮ ಶತ್ರುಗಳು..!
ಮಂಗೋಲಿಯನ್ನರು ಮತ್ತು ಚೀನಿಯರು ಶತಮಾನಗಳಿಂದ ಕಿತ್ತಾಡಿಕೊಂಡು ಬಂದಿದ್ದಾರೆ. ಕಿತ್ತಾಟ ಇಂದಿಗೂ ಮುಂದುವರಿದಿದೆ. ಒಂದು ಕಡೆ ಮಂಗೋಲಿಯಾ ಜನರ ಮೇಲೆ ಚೀನಾ ಸರ್ಕಾರ ಒತ್ತಡ ಹಾಕುತ್ತಾ ಬಂದಿದೆ. ಇನ್ನೊಂದ್ಕಡೆ ಗಡಿಯನ್ನೂ ಕಬಳಿಸಲು ಕಾಯುತ್ತಿದೆ. ಇಂತಹ ಹೊತ್ತಲ್ಲೇ ರಾಜಕೀಯ ಅಸ್ಥಿರತೆ ಮೂಡಿದರೆ ಕಷ್ಟ ಎಂಬುದು ಮಂಗೋಲಿಯಾ ನಾಯಕರಿಗೂ ಗೊತ್ತಿದೆ. ಹೀಗಾಗಿ ಪ್ರಧಾನಿ ಖುರೆಲ್ಸುಖ್ ಉಖ್ನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಂತರಿಕ ಹೋರಾಟಗಳು ಭುಗಿಲೇಳದಂತೆ ಕ್ರಮ ಕೈಗೊಂಡಿದ್ದಾರೆ. ಆದರೆ ಜನ ಇಷ್ಟಕ್ಕೇ ಸುಮ್ಮನಾಗುತ್ತಾರಾ, ಇಲ್ಲ ಹೋರಾಟ ಮುಂದುವರಿಯುತ್ತಾ ಅಂತಾ ಕಾದು ನೋಡಬೇಕಿದೆ.