ಲಂಡನ್ನಿನ ಅಗ್ನಿದುರಂತ: ಅಮಾಯಕರ ದುರ್ಮರಣಕ್ಕೆ ಹೊಣೆ ಯಾರು?
ಲಂಡನ್, ಜೂನ್ 15:ನೋಡುವುದಕ್ಕೆ ಸುಂದರ, ಗಗನಚುಂಬಿ ಕಟ್ಟಡ 'ಹ್ರೆನ್ ಫೆಲ್ ಟವರ್'. ಲಂಡನ್ನಿನ ಪಶ್ಚಿಮ ಭಾಗದಲ್ಲಿರುವ 24 ಮಹಡಿಗಳ ಆ ಕಟ್ಟಡದೊಳಗೆ ತನ್ನ ದಾಹತೀರಿಸಿಕೊಳ್ಳುವುದಕ್ಕಾಗಿ ಯಮ ಅಡಗಿ ಕುಳಿತಿದ್ದಾನೆ ಎಂಬ ನಿರೀಕ್ಷೆ ಯಾರಿಗಿರುವುದಕ್ಕೆ ಸಾಧ್ಯ? ಸಿಹಿ-ಸಿಹಿ ಕನಸು ಕಾಣುತ್ತ, ನಿದ್ದೆಯಲ್ಲೂ ನಸುನಗು ಬೀರುತ್ತ ಮಲಗಿದ್ದ ಹಲವರಿಗೆ ಒಮ್ಮೆಯೂ, ಇದೇ ತಮ್ಮ ಕೊನೆಯ ದಿನ ಎಂಬ ಊಹೆ ಆ ಕನಸಿನಲ್ಲಿಯೂ ಬಂದಿರಲಿಕ್ಕಿಲ್ಲ.
ಆದರೆ ನಾಲ್ಕು ದಶಕ ಹಳೆಯ ಆ ಕಟ್ಟಡದ ತುಂಬ ತೆಳು ಹೊಗೆ ತುಂಬಿ, ಅದು ಮತ್ತಷ್ಟು ಢಾಳಾಗುತ್ತ ಬಂದಾಗಲೇ ಯಾವುದೋ ಅಪಾಯದ ಸೂಚನೆ ಸಿಕ್ಕು ಹಲವರು ಕೆಮ್ಮುತ್ತ, ಎದ್ದು ಕಿಟಕಿ ತೆರೆದು ನೋಡಿದ್ದರು. ಇಷ್ಟು ದಿನ ಆಸರೆ ನೀಡಿದ್ದ ಮನೆಯೇ ಇಂದು ಹೊತ್ತಿ ಉರಿಯುತ್ತಿರುವುದನ್ನು ಕಂಡು ದಿಗ್ಭ್ರಮೆ! ಅದಾಗಲೇ ಅಪಾಯದ ಸ್ಪಷ್ಟ ಚಿತ್ರಣ ಸಿಕ್ಕಿಬಿಟ್ಟಿತ್ತು.
ಇನ್ನೂ ನಿದ್ದೆಯಲ್ಲೇ ಇರುವ ಪುಟ್ಟ ಪುಟ್ಟ ಮಕ್ಕಳನ್ನಾದರೂ ರಕ್ಷಿಸುವ ಪ್ರಯತ್ನಕ್ಕೆ ಮುಂದಾದವರು ಬೆಡ್ ಶೀಟಿನೊಳಗೆ ಮಕ್ಕಳನ್ನು ಸುತ್ತಿ ಏನಾದರಾಗಲಿ ಎಂದು ಮಕ್ಕಳನ್ನು ಕಿಟಿಕಿಯಿಂದ ಹೊರಗೆಸೆದರು, ಆ ಅಗ್ನಿಯ ಕೆನ್ನಾಲಗೆಯಿಂದ ಹೊರಹೋಗುವುದಕ್ಕೆ ಮಾಡದ ಪ್ರಯತ್ನವಿಲ್ಲ. ಆದರೆ ಸಾವು ಹಣೆಯಲ್ಲಿ ಬರೆದಿರುವಾಗ ಏನು ಮಾಡುವುದಕ್ಕೆ ಸಾಧ್ಯ? ಮೃತ ನತದೃಷ್ಟರಿಗೆ ನಮ್ಮೆಲ್ಲರ ಸಂತಾಪವಿರಲಿ.
ಚಿತ್ರಕೃಪೆ: ಪಿಟಿಐ
|
ದುರದೃಷ್ಟದ ದಿನ
ಕಟ್ಟಡದ ಹೊರಗೆ ನಿಂತ 200 ಅಗ್ನಿ ಶಾಮಕ ವಾಹನಗಳಿಗೂ ಸವಾಲೆಸೆಯುವಂತೆ ಹೊತ್ತಿ ಉರಿಯುತ್ತಲೇ ಇತ್ತು ಬೆಂಕಿ! ಎಂಥ ದುರದೃಷ್ಟ ಅಂದ್ರೆ ಲಿಫ್ಟ್ ಗಳು, ಫೈರ್ ಅಲಾರ್ಮ್ ಗಳು ಎಲ್ಲವೂ ಕೈಕೊಟ್ಟಿದ್ದವು! 120 ಮನೆಗಳುಳ್ಳ, 600 ಜನ ವಾಸಿಸುವ ಇಂಥ ಬೃಹತ್ ಕಟ್ಟಡದಲ್ಲಿ ಮುಂಜಾಗರೂಕತೆಗೆ ಯಾವ ಸೌಲಭ್ಯವೂ ಇರಲಿಲ್ಲವೇ? ಅದು ಲಂಡನ್ನಿನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಎಂಬ ಪ್ರಶ್ನೆ ಏಳದೆ ಇರದು.

12 ಜನ ಅಮಾಯಕರ ದುರ್ಮರಣ
ಅದೇನೇ ಇರಲಿ, ಈ ಹೃದಯವಿದ್ರಾವಕ ಘಟನೆಯಲ್ಲಿ 12 ಜನ ಮೃತಪಟ್ಟಿದ್ದು, ಇನ್ನೂ ಹಲವರು ತೀವ್ರ ಗಾಯಗೊಂಡಿದ್ದಾರೆ. ಹಲವರು ಇನ್ನೂ ಪತ್ತೆಯಯಾಗಿಲ್ಲ, ಅವರೆಲ್ಲ ಬದುಕಿದ್ದಾರೋ, ಇಲ್ಲವೋ ಎಂಬ ಬಗ್ಗೆಯೂ ಮಾಹಿತಿ ದೊರೆತಿಲ್ಲ. ಮಕ್ಕಳನ್ನು ಕಳೆದು ಕೊಂಡ ತಂದೆ-ತಾಯಿ, ತಂದೆ-ತಾಯಿಯರನ್ನು ಕಳೆದುಕೊಂಡ ಮಕ್ಕಳು, ಸ್ನೇಹಿತರನ್ನು ಕಳೆದುಕೊಂಡವರು... ಹೀಗೆ ಎಲ್ಲರ ಆಕ್ರಂದನವೂ ಕರುಳು ಕಿವುಚುತ್ತದೆ.

ಕಾರಣ ಏನು?
ಘಟನೆಗೆ ಕಾರಣ ಅಪಾರ್ಟ್ ಮೆಂಟಿನ ಎರಡೋ ಅಥವಾ ಮೂರನೇ ಮಹಡಿಯಲ್ಲಿ ಫ್ರಿಡ್ಜ್ ಶಾರ್ಟ್ ಸರ್ಕ್ಯೂಟ್ ಆಗಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಭುಗಿಲೆದ್ದ ಆಕ್ರೋಶ
ಅಪಾರ್ಟ್ ಮೆಂಟಿನ ನಿರ್ವಹಣೆಯ ಬಗ್ಗೆ ಮ್ಯಾನೇಜ್ ಮೆಂಟ್ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂಬ ದೂರೂ ಕೇಳಿಬರುತ್ತಿದೆ. ಮ್ಯಾನೇಜ್ ಮೆಂಟ್ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿದೆ.
|
ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ
ಈ ದುರಂತದಲ್ಲಿ ಮಡಿದವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ. ನಾಪತ್ತೆಯಾದವರ ಪತ್ತೆಗೆ ಸಹಾಯ ಬೇಡಲಾಗಿದೆ. ಈ ಘಟನೆಯ ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ವಿವರಿಸುವಾಗ ಈಗಲೂ ಉದ್ವೇಗಕ್ಕೊಳಗಾಗುತ್ತಿದ್ದಾರೆ. ಇವೆಲ್ಲ ಕನಸೋ, ನನಸೋ ಎಂಬುದೇ ತಿಳಿಯದಷ್ಟು ದಿಗ್ಬ್ರಮೆಯಲ್ಲಿ ಅವರಿರುವುದು ಅವರಮುಖಭಾವದಿಂದಲೇ ತಿಳಿಯುತ್ತಿದೆ.












Click it and Unblock the Notifications