ಉತ್ತರ ಕೊರಿಯಾದಲ್ಲಿ ನೆಮ್ಮದಿಯಾಗಿ ಸಾಯೋದಕ್ಕೂ ಆಗಲ್ಲ!
ಪೊಂಗ್ಯಾಂಗ್: ಸರ್ವಾಧಿಕಾರಿಗಳೇ ಸೃಷ್ಟಿಸಿದ ನರಕ ಉತ್ತರ ಕೊರಿಯಾದಲ್ಲಿ ದಿನಕ್ಕೊಂದು ರೂಲ್ಸ್ ಜಾರಿಯಾಗುತ್ತಿದೆ. ಇಷ್ಟುದಿನ ತಿಕ್ಕಲು ತಿಕ್ಕಲು ನಿಯಮಗಳಿಂದ, ಜಗತ್ತಿನ ಮೂಲೆ ಮೂಲೆಗೂ ಫೇಮಸ್ ಆಗಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೀಗ ಮತ್ತೆ ಸದ್ದು ಮಾಡಿದ್ದಾನೆ. ಈ ಬಾರಿ ಆತ್ಮಹತ್ಯೆ ಬಗ್ಗೆ ಕಿಮ್ ತಂದಿರುವ ರೂಲ್ಸ್ ಭಯಾನಕವಾಗಿದೆ!
ಹೌದು, ಕಿಮ್ ಜಾಂಗ್ ಉನ್ ಉತ್ತರ ಕೊರಿಯಾದ ಅಧ್ಯಕ್ಷ. ಆದರೆ ಜಗತ್ತಿನ ಪಾಲಿಗೆ ಈ ವ್ಯಕ್ತಿ ಸರ್ವಾಧಿಕಾರಿ. ಇಂತಿಪ್ಪ ಸರ್ವಾಧಿಕಾರಿ ನಾಡಲ್ಲಿ ಯಾರೇ ಅವನ ವಿರುದ್ಧ ಉಸಿರು ಎತ್ತಿದ್ರೂ ಕಥೆ ಮುಗಿದಂತೆ. ಪರಿಸ್ಥಿತಿ ಹೀಗಿದ್ದಾಗ ಉತ್ತರ ಕೊರಿಯಾದಲ್ಲಿ ತಿನ್ನಲು ಅನ್ನವು ಸಿಗಲ್ಲ. ಕೋಟಿ ಕೋಟಿ ಜನರು ನರಳಾಡುತ್ತಿದ್ದಾರೆ. ಹಸಿವು ತಡೆಯಲು ಆಗದೆ ನೂರಾರು ಜನ ಉತ್ತರ ಕೊರಿಯಾದಲ್ಲಿ ಸೂಸೈಡ್ ಮಾಡಿಕೊಳ್ಳುತ್ತಾರೆ. ಆದರೆ ಹೀಗೆ ಹಸಿವು ಅಂತಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಅಡ್ಡಿ ಮಾಡಿದ್ದಾನೆ ಸರ್ವಾಧಿಕಾರಿ. ಉತ್ತರ ಕೊರಿಯಾ (North Korea) ಜನರಿಗೆ ಸರ್ವಾಧಿಕಾರಿ ಮತ್ತೊಂದು ಶಾಕ್ ಕೊಟ್ಟಿದ್ದಾನೆ.

ಆತ್ಮಹತ್ಯೆ ಕೂಡ ದೇಶದ್ರೋಹ!
ಕಿಮ್ ಜಾಂಗ್ ಉನ್ ಯಾವ ರೂಲ್ಸ್ ತಂದರೂ ಅವನನ್ನ ಪ್ರಶ್ನೆ ಮಾಡಲು ಆಗೋದಿಲ್ಲ. ಯಾಕಂದ್ರೆ ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿಗೆ ಪ್ರಶ್ನೆ ಹಾಕುವ ವ್ಯಕ್ತಿ ಯಾರೂ ಇಲ್ಲ ಅಂತಾನೆ ಹೇಳಬಹುದು. ಹೀಗೆ ಕಿಮ್ ವಿರುದ್ಧ ನಿಂತವರು ಈಗಾಗಲೇ ಹೆಣವಾಗಿಬಿಟ್ಟರು. ಇದೇ ಕಾರಣಕ್ಕೆ ಯಾರೂ ಅವನ ವಿರುದ್ಧ ಉಸಿರು ಬಿಡಲ್ಲ. ಇದೀಗ ಆತ್ಮಹತ್ಯೆ ವಿರುದ್ಧ ಕಾನೂನು ತಂದಿರುವ ಕಿಮ್, ಸೂಸೈಡ್ ಸಮಾಜವಾದದ ವಿರುದ್ಧ ದೇಶದ್ರೋಹ ಎಂದು ಕರೆದಿದ್ದಾನೆ. ಈ ಮೂಲಕ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆಗೆ ಯತ್ನಿಸಿದರೆ ಕಠಿಣ ಶಿಕ್ಷೆ ಗ್ಯಾರಂಟಿಯಾಗಿದೆ.
ವಿಷ ಕುಡಿದು ಸಾಯುತ್ತಿದ್ದಾರೆ ಜನ
ಉತ್ತರ ಕೊರಿಯಾ ಸರ್ವಾಧಿಕಾರಿಗೆ ಸದಾ ಯುದ್ಧ ಮಾಡುವ ಹುಚ್ಚು. ಹೀಗಾಗಿ ಆತನಿಗೆ ಬರೀ ವೆಪನ್ಸ್ ಬೇಕು. ಆದರೆ ಪ್ರಜೆಗಳಿಗೆ ಅನ್ನ ಯಾರು ಕೊಡ್ತಾರೆ? ಸಮಸ್ಯೆ ಹೀಗಿದ್ದಾಗಲೇ ಜನ ತುತ್ತು ಅನ್ನಕ್ಕೂ ಪರದಾಡುತ್ತಾರೆ. ಎಷ್ಟೋ ಜನ ಹಸಿವು ತಡೆಯಲಾಗದೆ ಸತ್ತಿದ್ದಾರೆ. ಇನ್ನೂ ಕೆಲವರು ಹಸಿವು ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಹೀಗೆ ತನ್ನ ದೇಶದಲ್ಲಿ ಅನ್ನ ಸಿಗದೆ ಪ್ರಜೆಗಳು ಸೂಸೈಡ್ ಮಾಡಿಕೊಂಡರೆ ಸರ್ವಾಧಿಕಾರಿಗೆ ಕೆಟ್ಟ ಹೆಸರು ತಾನೆ? ಇದೇ ಕಾರಣಕ್ಕೆ ಉತ್ತರ ಕೊರಿಯಾದಲ್ಲಿ ಆತ್ಮಹತ್ಯೆ ಬ್ಯಾನ್ ಮಾಡಲಾಗಿದೆ.

ಜನ ಹೊರ ಹೋಗದಂತೆ ಗೋಡೆ!
ಉತ್ತರ ಕೊರಿಯಾದಲ್ಲಿ ಬದುಕುವ ಜನ ಥೇಟ್ ಕೈದಿಗಳಂತೆ ಜೀವನ ನಡೆಸಬೇಕು. ಅಕಸ್ಮಾತ್ ಉತ್ತರ ಕೊರಿಯಾದ ಕ್ರೂರಿ, ಮನುಷ್ಯತ್ವ ಇಲ್ಲದ ಸರ್ವಾಧಿಕಾರಿ ವಿರುದ್ಧ ಧ್ವನಿ ಎತ್ತಿದರೆ ಕಥೆ ಮುಗಿಯಿತು. ವಿರೋಧಿಗಳನ್ನು ಕ್ಷಣದಲ್ಲೇ ಕೊಲೆ ಮಾಡಿಸುವ ರಾಕ್ಷಸ ಈತ. ಇಂತಿಪ್ಪ ಕಿಮ್ ವಿರುದ್ಧ ನೂರಾರು ಆರೋಪಗಳಿವೆ. ಹೀಗಿದ್ದಾಗ ತನ್ನದೇ ದೇಶದ ಪ್ರಜೆಗಳು ಬೇರೆ ದೇಶಕ್ಕೆ ಓಡಿ ಹೋಗಬಾರದು ಅಂತಾ ಗೋಡೆಯನ್ನೇ ಕಟ್ಟಿಸಿದ್ದಾನೆ ಈ ಭೂಪ. ಅನ್ನ ಸಿಗದೆ ಲಕ್ಷಾಂತರ ಜನರು ಈಗಾಗಲೇ ಉತ್ತರ ಕೊರಿಯಾ ಬಿಟ್ಟು ಓಡಿ ಹೋಗಿದ್ದಾರೆ.

ಉತ್ತರ ಕೊರಿಯಾ ಅನ್ನೋ ಜೈಲಿನಿಂದ ತಪ್ಪಿಸಿಕೊಂಡು ಹೋಗಲು ಉತ್ತರ ಕೊರಿಯಾದ ಜನ ಸದಾ ಪ್ರಯತ್ನಿಸುತ್ತಾರೆ. ಆದರೆ ಅದನ್ನ ತಡೆಯಲು ಈ ಕಿಮ್ ಜಾಂಗ್ ಉನ್ನ ಇಡೀ ಕುಟುಂಬ ಪ್ರಯತ್ನ ಮಾಡುತ್ತಲೇ ಬಂದಿದೆ. ಹಿಂದೆಯೂ ಕಿಮ್ನ ಅಪ್ಪ ಮತ್ತು ತಾತ ಉತ್ತರ ಕೊರಿಯಾ ಆಳಿದ್ದಾಗ ತಮ್ಮ ದೇಶದ ಜನರನ್ನ ಬಲಿ ಹಾಕುತ್ತಾ ಬಂದಿದ್ದರು. ಸರಿ ಬಿಡು ನೆಮ್ಮದಿಯಾಗಿ ಸಾಯೋಣ ಅಂತಾ ಉತ್ತರ ಕೊರಿಯಾ ಜನ ಪ್ರಯತ್ನಿಸಿದರೂ ಈಗ ಕಠಿಣ ಶಿಕ್ಷೆ ಗ್ಯಾರಂಟಿ ಆಗಿದೆ. ಒಟ್ನಲ್ಲಿ ಆಳುವ ದೊರೆ ರಾಕ್ಷಸನಾದರೆ ಪರಿಸ್ಥಿತಿ ಏನು? ಎಂಬಂತಾಗಿದೆ ಉತ್ತರ ಕೊರಿಯಾ ಪ್ರಜೆಗಳ ಪರಿಸ್ಥಿತಿ.












Click it and Unblock the Notifications