ವಿಮಾನಗಳ ಹೈಜಾಕ್ ಮಾಡಿ ಭಾರತದ ಮೇಲೆ ದಾಳಿ?
ಕರಾಚಿ, ಜೂನ್ 9: ಭಾನುವಾರ ನಡುರಾತ್ರಿ ಭಯೋತ್ಪಾದಕರು ಜಿನ್ನಾ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿ 18 ಗಂಟೆ ಕಳೆದಿದೆ. ಇದೀಗ ನಿಲ್ದಾಣವು ಸಹಜ ಸ್ಥಿತಿಗೆ ಮರಳುತ್ತಿದ್ದು, ಇನ್ನೇನು ವಿಮಾನ ಹಾರಾಟ ಪುನರಾರಂಭಿಸಲು ಸಿದ್ಧತೆ ನಡೆದಿದೆ. ಈ ಮಧ್ಯೆ, ಪಾಕಿಸ್ತಾನ ಮತ್ತು ತದನಂತರ ವಿಶ್ವದ ಇತರೆಡೆ ಅದರ ಪರಿಣಾಮಗಳು ಏನೇನಾಯಿತು ಎಂಬುದರತ್ತ ಒಂದು ನೋಟ ಹರಿಸಿದಾಗ ...
2008ರ ಮುಂಬೈ ದಾಳಿ ಮಾದರಿಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ ಉಗ್ರರು 20-25 ವರ್ಷ ವಯಸ್ಸಿನವರು. 10 ಮಂದಿ ಉಗ್ರರು ಸೇರಿದಂತೆ ಒಟ್ಟು 29 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ಉಗ್ರರು 2 ತಂಡಗಳಲ್ಲಿ ದಾಳಿ ನಡೆಸಿದ್ದಾರೆ. ಭಾನುವಾರ ರಾತ್ರಿ 10 ಗಂಟೆ ಕತ್ತಲಲ್ಲಿ ಶುರುವಾದ ದಾಳಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಕ್ತಾಯವಾಗಿದೆ.
ವಿಮಾನಗಳ ಹೈಜಾಕ್ ಮಾಡಿ ಭಾರತದ ಮೇಲೆ ದಾಳಿ ಉದ್ದೇಶ?:

ದಾಳಿ ಮುಗಿದ ನಂತರ ರಾಕೆಟ್ ಲಾಂಚರ್ ಗಳು, ಗ್ರೆನೇಡುಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ನಿಲ್ದಾಣದಲ್ಲಿ ಪತ್ತೆಯಾಗಿವೆ. ಉಗ್ರರು ಭಾರಿ ತರಬೇತಿ ಪಡೆದವರಾಗಿದ್ದರು. ಒಣ ಹಣ್ಣುಗಳು ಮತ್ತು ಅಪಾರ ಶಸ್ತ್ರಾಸ್ತ್ರ ನೋಡಿದರೆ ವಿಮಾನಗಳನ್ನು ಹೈಜಾಕ್ ಮಾಡಿ, ನೆರೆಯ ರಾಷ್ಟ್ರಗಳಲ್ಲಿ ಮತ್ತಷ್ಟು ಭಯೋತ್ಪಾದಕ ಕೃತ್ಯವೆಸಗುವ ಉದ್ದೇಶ ಹೊಂದಿದ್ದರು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅಷ್ಟರೊಳಗೆ ಪಾಕ್ ಭದ್ರತಾ ಪಡೆಗಳು ಯಶಸ್ವಿ ಕಾರ್ಯಾಚರಣೆ ನಡೆಸಿ, ಅಷ್ಟೂ ಉಗ್ರರನ್ನು ಜಿನ್ನಾ ನಿಲ್ದಾಣದಲ್ಲೇ ಸದೆಬಡಿದಿದ್ದಾರೆ.
ವಿಮಾನ ನಿಲ್ದಾಣದ ಮೇಲಿನ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬನ್ ಭಯೋತ್ಪಾದಕ ಸಂಘಟನೆ Tehreek-e-Taliban Pakistan (TTP) ಹೊತ್ತುಕೊಂಡಿದೆ. ಇದೇ ಸಂಘಟನೆಯ 15 ಮಂದಿ ಕಟ್ಟಾ ಉಗ್ರರು, 2011ರ ಮೇ ತಿಂಗಳಲ್ಲಿ ಮೆಹ್ರಾನ್ ನಾವಲ್ ಏರ್ ಬೇಸ್ ಮೇಲೆ ಇಂಥದ್ದೇ ಮಾರಕ ದಾಳಿ ನಡೆಸಿ 18ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿ, ಅನೇಕ ವಿಮಾನಗಳನ್ನು ಜಖಂ ಮಾಡಿದ್ದರು. ತೆಹ್ರೀಕ್-ಇ-ತಾಲಿಬಾನಿಗಳು ಪಾಕಿಸ್ತಾನದ ತಾಲಿಬಾನಿಗಳು. ಇವರು ಅಫಘಾನಿಸ್ತಾನದ ತಾಲಿಬಾನಿಗಳ ಜತೆ ಗುರುತಿಸಿಕೊಂಡಿದ್ದಾರಾದರೂ ಪ್ರತ್ಯೇಕವಾಗಿದ್ದಾರೆ.
ಆದಾಗ್ಯೂ, ಕರಾಚಿ ದಾಳಿಗೆ ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿಯೇ ಕಾರಣವೆಂದು 2008ರ ಮುಂಬೈ ದಾಳಿ ರೂವಾರಿ ಹಫೀಜ್ ಮೊಹಮದ್ ಸಯೀದ್ ಸರಣಿ ಟ್ವೀಟ್ ಮಾಡಿ, ದ್ವೇಷ ಬಿತ್ತಿದ್ದಾನೆ. ಇದರಿಂದ ಭಾರತದ ವಿಮಾನ ನಿಲ್ದಾಣಗಳಲ್ಲಿಯೂ ತಕ್ಷಣ ಕಟ್ಟೆಚ್ಚರ ಹಾಕಲಾಗಿದೆ.
ಮೂವರು ಭಯೋತ್ಪಾದಕರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಮೂವರೂ ಕಾರಿಡಾರಿನಲ್ಲಿ ಠಳಾಯಿಸುತ್ತಾ, ತಮ್ಮನ್ನು ತಾವೇ ಸ್ಫೋಟಿಸಿಕೊಂಡರು. ಇದರಿಂದ ತಾವೆಲ್ಲಾ ಆತ್ಮಹತ್ಯಾ ಬಾಂಬುರುಗಳು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದ್ದು, ಇಡೀ ಪ್ರದೇಶದಲ್ಲಿ ಸೇವೆ ಹಾಗೂ ಪೊಲೀಸರು ಭಾರೀ ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಪ್ರಸ್ತುತ ವಿಮಾನ ನಿಲ್ದಾಣದೊಳಕ್ಕೆ ಯಾರಿಗೂ ಪ್ರವೇಶವಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವ ಖವಾಜ್ ಆಸೀಫ್ ಮತ್ತು ಸಿಂಧ್ ಪ್ರಾಂತ್ಯದ ಆರೋಗ್ಯ ಸಚಿವ ಸಘೀರ್ ಅಹ್ಮದ್ ಹೇಳಿದ್ದಾರೆ.
ಪಾಕ್ ಸರಕಾರ ಮತ್ತು ತಾಲಿಬಾನ್ ಉಗ್ರರ ನಡುವೆ ಆಗಾಗ್ಗೆ ಶಾಂತಿ ಮಾತುಕತೆ ನಡೆಯುತ್ತಾ ಬಂದಿದೆ. ಸದ್ಯದಲ್ಲೇ ಪಾಕ್ ಪ್ರಧಾನಿ ನವಾಜ್ ಷರೀಪ್ ಮತ್ತು ತಾಲಿಬಾನಿಗಳ ಮಧ್ಯೆ ಶಾಂತಿ ಮಾತುಕತೆ ನಡೆಯಬೇಕಿತ್ತು. ಆದರೆ ಸದ್ಯ ಪರಿಸ್ಥಿತಿ ಬಿಗಡಾಯಿಸಿದೆ.
ದಾಳಿ ನಡೆದಾಗ Emirates ಮತ್ತು Thai Airways ಸಂಸ್ಥೆಗಳು ತನ್ನ ತನ್ನ ವಿಮಾನದೊಳಕ್ಕೆ ನೂರಾರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದರು. ಸುಮಾರು 15 ವಿಮಾನಗಳು ಹಾರಾಟಕ್ಕೆ ನಿಲ್ದಾಣದಲ್ಲಿ ಸಜ್ಜಾಗಿದ್ದವು. ಅಂದರೆ ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ನಿಲ್ದಾಣದಲ್ಲಿದ್ದರು.












Click it and Unblock the Notifications