ಭಾರತದ ಗೃಹ ಸಚಿವರು ಪಾಕಿಸ್ತಾನಕ್ಕೆ ಕಾಲಿಡದಂತೆ ಎಚ್ಚರಿಕೆ!
ಲಾಹೋರ್, ಆಗಸ್ಟ್ 1: ಜಮಾತ್ - ಉದ್- ದವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತೆ ಭಾರತದ ವಿರುದ್ದ ವಿಷ ಕಕ್ಕುವ ಭಾಷಣ ಮಾಡಿದ್ದಾನೆ. ಭಾರತದ ಗೃಹ ಸಚಿವರು ಪಾಕಿಸ್ತಾನದ ನೆಲಕ್ಕೆ ಕಾಲಿಟ್ಟರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಕಾಶ್ಮೀರದ ಅಮಾಯಕರ ಸಾವಿಗೆ ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಪರೋಕ್ಷವಾಗಿ ಕಾರಣ. ಸಾರ್ಕ್ ಸಮ್ಮೇಳನಕ್ಕೆ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ಬಂದರೆ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹಫೀಜ್, ಪಾಕ್ ಸರಕಾರಕ್ಕೆ ಸಂದೇಶ ರವಾನಿಸಿದ್ದಾನೆ. (ಭಾರತದ ಮೇಲೆ ದಾಳಿಗೆ ಹಫೀಜ್ ತಹತಹ)
ಇದೇ ಆಗಸ್ಟ್ ಮೂರರಂದು ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸಲು ರಾಜನಾಥ್ ಸಿಂಗ್ ಅವರಿಗೆ ಅನುಮತಿ ನೀಡಬಾರದು ಎಂದು ಪಾಕ್ ಸರಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನಮ್ಮ ಮನವಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಹಫೀಜ್ ಹೇಳಿದ್ದಾನೆ.
ಕಾಶ್ಮೀರದಲ್ಲಿ ಭಾರತ ಸರಕಾರ ನಡೆಸುತ್ತಿರುವ ಗೂಂಡಾವರ್ತನೆಗೆ ಇಡೀ ಪಾಕಿಸ್ತಾನೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇತ್ತ ಪಾಕಿಸ್ತಾನ ಸರಕಾರ ಹೂವು ಹಾಕಿ ಬರಮಾಡಿಕೊಂಡು ರಾಜನಾಥ್ ಸಿಂಗ್ ಅವರಿಗೆ ಸನ್ಮಾನ ಮಾಡುವುದು ಯಾವ ನ್ಯಾಯ ಎಂದು ಹಫೀಜ್ ಆಕ್ರೋಶ ವ್ಯಕ್ತ ಪಡಿಸಿದ್ದಾನೆ.
ರಾಜನಾಥ್ ಪಾಕ್ ನೆಲಕ್ಕೆ ಕಾಲಿಟ್ಟಿದ್ದೇ ಆದಲ್ಲಿ ಕ್ವೆಟ್ಟಾ, ಲಾಹೋರ್, ಕರಾಚಿ, ಮುಲ್ತಾನ್, ಫೈಸ್ಲಾಬಾದ್, ಪೇಷಾವರ ಮುಂತಾದ ಕಡೆ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹಫೀಜ್ ಆರ್ಭಟಿಸಿದ್ದಾನೆ.
ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಯನ್ನು ಈ ತಕ್ಷಣದಿಂದಲೇ ವಾಪಸ್ ಕರೆಸಿಕೊಳ್ಳಬೇಕೆಂದು, ಪ್ರಧಾನಿ ನವಾಜ್ ಷರೀಫ್ ಬಳಿ ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಆಗ್ರಹಿಸಿದ್ದಾನೆ.