ಇಸ್ರೇಲ್ ಭೂಮಿಯಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ...
ಹಮಾಸ್ ಉಗ್ರರ ವಿರುದ್ಧ ಯುದ್ಧವು ಶುರುವಾದ ಬಳಿಕ ಇಸ್ರೇಲ್ ಗ್ರಹಚಾರವೇ ಸರಿಯಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಮಧ್ಯಪ್ರಾಚ್ಯದ ಈ ದೇಶಕ್ಕೆ ಇದೀಗ ಮಿತ್ರರೆಲ್ಲ ಶತ್ರುಗಳಾಗಿ ಹೋಗಿದ್ದಾರೆ. ಇದು ಸಾಲದು ಎಂಬಂತೆ ಈಗ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧವೇ ಇಸ್ರೇಲ್ನಲ್ಲಿ ಆಕ್ರೋಶದ ಕಹಳೆ ಮೊಳಗಿದೆ. ಹಾಗಾದರೆ ದಿಢೀರ್ ಈ ರೀತಿಯ ವಾತಾವರಣ ಸೃಷ್ಟಿಯಾಗಿದ್ದು ಏಕೆ?
ಹಮಾಸ್ ಉಗ್ರರು ಮಾಡಿದ ಕಿತಾಪತಿಗೆ ಇಸ್ರೇಲ್ ತಿರುಗಿಬಿದ್ದು, ಯುದ್ಧ ಸಾರಿದೆ. ಆದರೆ ಈ ವಿಚಾರದಲ್ಲಿ ಇಸ್ರೇಲ್ ಯುದ್ಧ ಸಾರಿ ದೊಡ್ಡ ಎಡವಟ್ಟು ಮಾಡಿದೆ ಅಂತಿದ್ದಾರೆ ಸ್ವತಃ ಇಸ್ರೇಲ್ ನಿವಾಸಿಗಳು. ಅದರಲ್ಲೂ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇಸ್ರೇಲ್ ಆಡಳಿತ ನೋಡಿಕೊಳ್ಳುತ್ತಿರುವ ಸಚಿವರ ವಿರುದ್ಧ ಭಾರಿ ಆಕ್ರೋಶ ಮೊಳಗಿದೆ. ಈ ನಡುವೆ ಹೊರಗೆ ಬರುವ ಇಸ್ರೇಲ್ ಸಚಿವರ ಮೇಲೆ ಅವಾಚ್ಯ ಶಬ್ಧ ಪ್ರಯೋಗ ಕೂಡ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಇಸ್ರೇಲ್ ಜನರು ಸ್ವತಃ ಇಸ್ರೇಲ್ ಪ್ರಧಾನಿ ವಿರುದ್ಧವೇ ಹೀಗೆ ಕೋಪಗೊಂಡಿದ್ದು ಏಕೆ?

ಆಂತರಿಕ ಬೆಂಕಿಯಲ್ಲಿ ಬೆಂದ ಇಸ್ರೇಲ್?
ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್ ವಿರುದ್ಧವೇ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದರು. ಹಾಗೇ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರವನ್ನ ಮತ್ತು ಬಾಂಬ್ ಹಿಡಿದು ಇಸ್ರೇಲ್ ಒಳಗೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್ ಕೂಡ ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಆದರೆ ಅಷ್ಟೊತ್ತಿಗೆ ಪರಿಸ್ಥಿತಿ ಕೈಮೀರಿತ್ತು. ನೂರಾರು ಜನರ ಅಪಹರಣ ಮಾಡಿದ್ದ ಹಮಾಸ್ ಉಗ್ರರು, ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಅಲ್ಲದೆ ಈ ಪೈಕಿ ಹಲವರ ಹತ್ಯೆ ಕೂಡ ನಡೆದಿದೆ. ಹೀಗಾಗಿ ಇಸ್ರೇಲ್ ಜನ ತಮ್ಮ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹಾಗೇ ಬೆಂಜಮಿನ್ ನೆತನ್ಯಾಹು ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಯಲಿ ಎಂಬ ಆಗ್ರಹ ಕೂಡ ಕೇಳಿಬರುತ್ತಿದೆ ಎನ್ನಲಾಗಿದೆ.
ಇಕ್ಕಟ್ಟಿಗೆ ಸಿಲುಕಿದ ಬೆಂಜಮಿನ್ ನೆತನ್ಯಾಹು?
ಹಾಗೆ ನೋಡುವುದಾದರೆ, ಇಸ್ರೇಲ್ ದೇಶವನ್ನು ಹಲವು ಆಪತ್ತಿನಿಂದ ಈ ಹಿಂದೆ ರಕ್ಷಿಸಿದ್ದ ಕೀರ್ತಿ ಬೆಂಜಮಿನ್ ನೆತನ್ಯಾಹು ಅವರಿಗೆ ಸಲ್ಲುತ್ತದೆ. ಆದರೆ ಅಕ್ಟೋಬರ್ 7 ರಂದು ನಡೆದ ಘಟನೆ ಎಲ್ಲವನ್ನು ಹಾಳು ಮಾಡಿ ಹಾಕಿದೆ. ಒಂದು ಕಾಲದಲ್ಲಿ ಇದೇ ಇಸ್ರೇಲಿಗರ ಪಾಲಿಗೆ ಹೀರೋ ಆಗಿದ್ದ ಬೆಂಜಮಿನ್ ನೆತನ್ಯಾಹು, ಇದೀಗ ವಿಲನ್ ರೀತಿ ಕಾಣುತ್ತಿದ್ದಾರೆ. ಹಾಗೇ ತಮ್ಮವರನ್ನು ಕಳೆದುಕೊಂಡ ನೋವಿಗೆ ಇಸ್ರೇಲಿಗರು ಬೆಂಜಮಿನ್ ನೆತನ್ಯಾಹು ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಇಸ್ರೇಲ್ ಆಡಳಿತ ನೋಡಿಕೊಳ್ಳುತ್ತಿರುವ ಇಸ್ರೇಲ್ನ ಪ್ರಮುಖ ಬಲಪಂಥೀಯ ಪಕ್ಷದ ವಿರುದ್ಧ ಆಕ್ರೋಶ ಮೊಳಗಿದೆ. ಜೊತೆಗೆ ಇಸ್ರೇಲ್ ಸಚಿವರು ತಮ್ಮ ಕಚೇರಿ ಕೆಲಸ ಮುಗಿಸಿ, ಮನೆಗೆ ಹೋಗಲು ಕಾರು ಹತ್ತುವಾಗ ಅವಾಚ್ಯ ಶಬ್ಧಗಳಿಂದ ಜನ ಬೈಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯುದ್ಧ ನಿಲ್ಲಿಸುತ್ತಾ ಇಸ್ರೇಲ್ ಸೇನೆ?
ಇಷ್ಟೆಲ್ಲ ಘಟನೆಗಳು ಸಂಭವಿಸುತ್ತಿರುವ ಸಮಯದಲ್ಲೇ ಕದನ ವಿರಾಮ ಘೋಷಿಸಬೇಕು ಎಂಬ ಆಗ್ರಹಕ್ಕೆ ಇಸ್ರೇಲ್ ಗರಂ ಆಗುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದೆ ಗಾಜಾಪಟ್ಟಿ ಮೇಲೆ ದಾಳಿ ನಿಲ್ಲಿಸಿ ಕದನ ವಿರಾಮ ಘೋಷಿಸಿ ಎಂಬ ಮನವಿಗೆ ನೆತನ್ಯಾಹು ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೆ ಹಮಾಸ್ ಉಗ್ರರನ್ನ ಸಂಪೂರ್ಣವಾಗಿ ನಾಶ ಮಾಡುವುದಾಗಿ ಮತ್ತೊಮ್ಮೆ ಗುಡುಗಿದ್ದರು ಇಸ್ರೇಲ್ ಪ್ರಧಾನಿ.

ಒಟ್ನಲ್ಲಿ ಹಮಾಸ್ ಉಗ್ರರು & ಇಸ್ರೇಲ್ ಮಧ್ಯೆ ನಡೆಯುತ್ತಿರುವ ಘೋರ ಯುದ್ಧಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗ ಇಸ್ರೇಲ್ ಪಿಎಂ ವಿರುದ್ಧ ಇಸ್ರೇಲ್ ಒಳಗೆ ಅಸಮಾಧಾನ ಭುಗಿಲೆದ್ದಿದೆ. ಆದರೆ ಪ್ರಧಾನಿಯಾಗಿ ಇಸ್ರೇಲ್ನಲ್ಲಿ 6 ಬಾರಿ ಅಧಿಕಾರ ನಡೆಸಿದ ಅನುಭವ ಹೊಂದಿರುವ 74 ವರ್ಷದ ಬೆಂಜಮಿನ್ ನೆತನ್ಯಾಹು ಇಂತಹ ಹೋರಾಟ, ಪ್ರತಿಭಟನೆ, ಅಸಮಾಧಾನಗಳನ್ನ ಹಲವು ಬಾರಿ ನೋಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹೋರಾಟಗಳನ್ನ ಹಿಡಿತಕ್ಕೆ ತರುವುದು ಬೆಂಜಮಿನ್ ನೆತನ್ಯಾಹುಗೆ ಕಷ್ಟ ಅನಿಸಲಾರದು. ಆದರೆ ಯುದ್ಧವು ಮಾತ್ರ ಜಗತ್ತನ್ನು ಇದೇ ರೀತಿ ಸುಡುವ ಸೂಚನೆ ಈಗ ಸಿಗುತ್ತಿದೆ.












Click it and Unblock the Notifications