ಇಸ್ರೇಲ್ ವಿರುದ್ಧ ಮತ್ತೆ ಗುಡುಗಿದ ಇರಾನ್: ಯಾಕೆ ಗೊತ್ತಾ?
ಹಮಾಸ್ ವಿರುದ್ಧ ಯುದ್ಧ ಘೋಷಿಸಿ ಗಾಜಾಪಟ್ಟಿ ಮೇಲೆ ಇಸ್ರೇಲ್ ಭೀಕರವಾಗಿ ಅಟ್ಯಾಕ್ ಮಾಡುತ್ತಿದೆ. ಅತ್ತ ಅಮೆರಿಕ ಇಸ್ರೇಲ್ ಪರ ನಿಂತಿದೆ, ಇನ್ನು ರಷ್ಯಾ ಜಗತ್ತಿನ ಮುಂದೆ ಈ ಯುದ್ಧದ ಸಮಸ್ಯೆಗಳನ್ನ ತೋರಿಸಲು ಮುಂದಾಗಿದೆ. ಇದು ಸಾಲದು ಎಂಬಂತೆ ಇರಾನ್ಗೆ ಕೂಡ ಇಸ್ರೇಲ್ ಮೇಲೆ ಕೆಂಡದಂತಹ ಕೋಪ ಬಂದಿದೆ. ಹೀಗಾಗಿ ಇಸ್ರೇಲ್ ವಿರುದ್ಧ ಪದೇ ಪದೆ ವಾರ್ನಿಂಗ್ ಮಾಡುತ್ತಿದ್ದು, ಈಗ ಜಗಳ ತಾರಕಕ್ಕೆ ಏರಿದೆ.
ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಹೋರಾಡುತ್ತಿದ್ದರೆ, ಇರಾನ್ ಹಮಾಸ್ ಬಂಡುಕೋರರ ಪರ ಕರುಣೆ ತೋರಿಸಿದೆ ಎಂಬ ಆರೋಪ ಇದೆ. ಈ ಬೆಳವಣಿಗೆ ಘರ್ಷಣೆಯನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಜನರಿಗೆ ಕನಿಷ್ಠ ಸೌಕರ್ಯವೂ ಸಿಗದಂತೆ ಮಾಡಿ, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ಮಾಡ್ತಿದೆ. ಈ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನಿನ್ನೆ ಗಾಜಾಪಟ್ಟಿ ಆಸ್ಪತ್ರೆಯ ಮೇಲೆ, ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. 500ಕ್ಕೂ ಹೆಚ್ಚು ಜನ ಮೃತಪಟ್ಟ ಬಳಿಕ ಅರಬ್ ದೇಶಗಳು ಕೂಡ ಇಸ್ರೇಲ್ ವಿರುದ್ಧ ರೊಚ್ಚಿಗೆದ್ದಿವೆ, ಈ ಸಮಯಕ್ಕೆ ಇರಾನ್ ಯುದ್ಧ ರಂಗಕ್ಕೆ ಪ್ರವೇಶ ಮಾಡಿದೆ.

ಇಸ್ರೇಲ್ ವಿರುದ್ಧ ನಿರ್ಬಂಧ ಹೇರಿಕೆ?
ಗಾಜಾಪಟ್ಟಿಯ ಮೇಲೆ ದಾಳಿ ನಡೆಯುತ್ತಿರುವ ಸಮಯದಲ್ಲೇ ಇರಾನ್ ಮಹತ್ವದ ಹೇಳಿಕೆ ನೀಡಿದೆ. ಅಂದಹಾಗೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟ ಅಂದರೆ ಒಐಸಿಯ ಸದಸ್ಯ ರಾಷ್ಟ್ರಗಳು ಇಸ್ರೇಲ್ ವಿರುದ್ಧ ತೈಲ ಪೂರೈಕೆ ಸೇರಿ ಇತರ ರೀತಿ ನಿರ್ಬಂಧವನ್ನ ವಿಧಿಸಬೇಕು. ಇಷ್ಟೇ ಅಲ್ಲದೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿರುವ ಇಸ್ರೇಲ್ ರಾಯಭಾರಿಗಳನ್ನ ಹೊರಹಾಕಬೇಕು ಎಂದು ಇರಾನ್ ಹೇಳಿದೆ. ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದುಲ್ಲಾಹಿಯಾನ್ ಇಂತಹ ಸಲಹೆಯನ್ನ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟಕ್ಕೆ ನೀಡಿದ್ದಾರೆ.
ನಿನ್ನೆ ಗಾಜಾಪಟ್ಟಿ ಆಸ್ಪತ್ರೆ ಮೇಲೆ ದಾಳಿ ನಡೆದ ನಂತರ, ಸೌದಿಯ ಜೆಡ್ಡಾದಲ್ಲಿ ಮಹತ್ವದ ಸಭೆ ನಡೆಸಿದೆ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಒಕ್ಕೂಟ. ಈ ಮಧ್ಯೆ ಇರಾನ್ನಿಂದ ಇಂತಹ ಸಲಹೆ ಕೇಳಿಬಂದಿದೆ. ಇಸ್ರೇಲ್ ರಾಯಭಾರಿಗಳನ್ನ ಹೊರಹಾಕುವುದರ ಜತೆ ತೈಲ ನಿರ್ಬಂಧ ಸೇರಿ ಇಸ್ಲಾಮಿಕ್ ರಾಷ್ಟ್ರಗಳಿಂದ ಇಸ್ರೇಲ್ ಮೇಲೆ ತಕ್ಷಣದ ಮತ್ತು ಸಂಪೂರ್ಣ ನಿರ್ಬಂಧ ಹೇರಿ ಎಂದು ಇರಾನ್ ಒತ್ತಡ ಹೇರಿದೆ. ಹೀಗಾಗಿಯೇ ಹಮಾಸ್ & ಇಸ್ರೇಲ್ ಸಂಘರ್ಷ ಮತ್ತಷ್ಟು ಭೀಕರವಾಗುವ ಅಪಾಯ ಎದುರಾಗಿದೆ.

ಮಧ್ಯ ಬಂದಿದ್ದು ಏಕೆ ಇರಾನ್?
ನಿನ್ನೆ ರಾತ್ರಿ ಗಾಜಾಪಟ್ಟಿಯ ಅಲ್-ಶಿಫಾ ಆಸ್ಪತ್ರೆ ಮೇಲೆ, ಭೀಕರ ವಾಯು ದಾಳಿ ನಡೆದು 500ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಸ್ರೇಲ್ ಹಮಾಸ್ ನಡುವೆ ಯುದ್ಧ ಶುರುವಾಗಿ 1 ವಾರ ಕಳೆದಿದ್ದು, 2ನೇ ವಾರಕ್ಕೆ ಕಾಲಿಟ್ಟಿದೆ. ನೋಡ ನೋಡುತ್ತಲೇ ಗಾಜಾದಲ್ಲಿ 3500 ಕ್ಕೂ ಹೆಚ್ಚು ಜನ ಮೃತಪಟ್ಟು, ಒಟ್ಟು 12,500 ಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಹಮಾಸ್ & ಇಸ್ರೇಲ್ ಸೇನೆ ಘರ್ಷಣೆ ಸಾಮಾನ್ಯ ಪ್ರಜೆಗಳ ಸಾವಿಗೂ ಕಾರಣವಾಗಿದೆ ಎಂಬ ಆಕ್ರೋಶ ಮೊಳಗಿದೆ. ಇದೇ ಆಧಾರದಲ್ಲಿ ಇರಾನ್ ಕೂಡ ಯುದ್ಧದಲ್ಲಿ ಮೂಗು ತೂರಿಸಲು ಬಂದಿದೆ.
ನಿನ್ನೆಯಷ್ಟೇ ಗಾಜಾ ಮೇಲೆ ನಡೆಸುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಿಸದಿದ್ರೆ ಇಸ್ರೇಲ್ ಮತ್ತೊಂದು ಆಘಾತ ಎದುರಿಸುತ್ತೆ ಎಂದು ಇರಾನ್ ಎಲೈಟ್ ರೆವಲೂಷನರಿ ಗಾರ್ಡ್ಸ್ ಡೆಪ್ಯುಟಿ ಕಮಾಂಡರ್ ಎಚ್ಚರಿಕೆ ಕೊಟ್ಟಿದ್ದ. ಅಲ್ಲದೆ ಇಸ್ರೇಲ್ ದೇಶವನ್ನು ಕ್ಯಾನ್ಸರ್ ಗಡ್ಡೆಗೂ ಹೋಲಿಸಿದ್ದ ಇರಾನ್ ಕಮಾಂಡರ್. ಈಗ ನೋಡಿದರೆ ಇರಾನ್ ವಿದೇಶಾಂಗ ಸಚಿವರ ರಿಯಾಕ್ಷನ್ ಮತ್ತಷ್ಟು ಭೀತಿ ಮೂಡಿಸುತ್ತಿದೆ. ಅಕಸ್ಮಾತ್ ಇಸ್ರೇಲ್ ರೊಚ್ಚಿಗೆದ್ದು ಇರಾನ್ ವಿರುದ್ಧವೂ ಯುದ್ಧಕ್ಕೆ ನಿಂತು ದಾಳಿ ಮಾಡಿದರೆ, ನ್ಯೂಕ್ಲಿಯರ್ ವೆಪನ್ಸ್ ಅಂದರೆ ಪರಮಾಣು ಅಸ್ತ್ರಗಳ ಬಳಕೆಯಾಗುವ ಅಪಾಯ ಇದೆ. ಹೀಗೆ ಪರಮಾಣು ಅಸ್ತ್ರ ಬಳಕೆಯಾದ್ರೆ 3ನೇ ಮಹಾಯುದ್ಧ ಫಿಕ್ಸ್ ಅಂತಾ ಹೇಳ್ತಿದ್ದಾರೆ ಅಂತಾರಾಷ್ಟ್ರೀಯ ರಾಜಕೀಯ ತಜ್ಞರು.












Click it and Unblock the Notifications