ಭಾರತೀಯರು ಪಾಲ್ಗೊಂಡಿದ್ದ 'ಗುರುತ್ವ ಅಲೆ'ಗಳ ಸಂಶೋಧನೆಗೆ ನೊಬೆಲ್
ಸ್ಟಾಕ್ ಹೋಮ್, ಅಕ್ಟೋಬರ್ 4: 'ಗುರುತ್ವ ತರಂಗ'ಗಳ ಅನ್ವೇಷಣೆಗೆ 2017ನೇ ಸಾಲಿನ ನೊಬೆಲ್ ಪ್ರಶಸ್ತಿ ಸಂದಿದೆ.
ಅಮೆರಿಕಾದ ಭೌತ ವಿಜ್ಞಾನಿಗಳಾದ ರೈನರ್ ವೆಯಿಸ್, ಬ್ಯಾರಿ ಬ್ಯಾರಿಶ್ ಮತ್ತು ಕಿಪ್ ಥಾರ್ನೆ ನೊಬೆಲ್ ಪಾರಿತೋಷಕ ಪಡೆದಿದ್ದು, ಈ ಗುರುತ್ವ ಅಲೆಗಳ ಅನ್ವೇಷಣೆಯಲ್ಲಿ ಇಬ್ಬರು ಭಾರತೀಯ ವಿಜ್ಞಾನಿಗಳೂ ಪಾಲ್ಗೊಂಡಿದ್ದರು.

ದಿವಂಗತ ಸಿವಿ ವಿಶ್ವೇಶ್ವರ ಮತ್ತು ಸಂಜೀವ್ ಧುರಂಧರ್ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು ಎಂಬುದು ಭಾರತೀಯರಗೆಲ್ಲಾ ಹೆಮ್ಮೆಯ ವಿಷಯವಾಗಿದೆ.
2016ರ ಫೆಬ್ರವರಿ 18ರಂದು ಗುರುತ್ವ ತರಂಗಗಳ ಅನ್ವೇಷಣೆಯನ್ನು ಘೋಷಿಸಲಾಗಿತ್ತು. ವಿಶ್ವವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಸಿದ್ಧಾಂತ ಆಧರಿಸಿ ನಡೆದ ಪ್ರಯೋಗದಲ್ಲಿ ಗುರುತ್ವ ಅಲೆಗಳ ಇರುವಿಕೆ ಸಾಬೀತಾಗಿತ್ತು. ಐನ್ ಸ್ಟೈನ್ ಸಾಪೇಕ್ಷ ಸಿದ್ದಾಂತ ನೀಡಿದ 100 ವರ್ಷಗಳ ನಂತರ ಗುರುತ್ವದ ಅಲೆಗಳ ಇರುವಿಕೆ ಋಜುವಾತಾಗಿತ್ತು. ಅರ್ಹವಾಗಿಯೇ ಈ ಸಂಶೋಧನೆ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದೆ.

ತಂಡವಾಗಿ ಸಂಶೋಧನೆ ನಡೆಸಿದರೂ ಗರಿಷ್ಠ ಮೂರು ಜನರಿಗೆ ಮಾತ್ರ ನೊಬೆಲ್ ಪ್ರಶಸ್ತಿ ನೀಡುವುದರಿಂದ ಭಾರತೀಯರು ನೊಬೆಲ್ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಗುರುತ್ವ ತರಂಗಳ ಸಂಶೋಧನೆಯಲ್ಲಿ ಧುರಂಧರ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಸಿವಿ ವಿಶ್ವೇಶ್ವರರ ಪಾತ್ರವೂ ಪ್ರಮುಖವಾಗಿದ್ದು ಅವರು ತಮ್ಮ 74ನೇ ವಯಸ್ಸಿನಲ್ಲಿ, ಈ ವರ್ಷದ ಆರಂಭದಲ್ಲಿ ಅಸುನೀಗಿದ್ದರು.
37 ವಿಜ್ಞಾನಿಗಳ ತಂಡ ಈ ಗುರುತ್ವ ಅಲೆಗಳನ್ನು ಪತ್ತೆ ಹಚ್ಚುವ 'ಲೈಗೊ' (ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್- ವೇವ್ ಒಬ್ಸರ್ವೇಟರಿ) ಸಂಶೋಧನೆಯನ್ನು ನಡೆಸಿತ್ತು. ಇದರಲ್ಲಿ ಇಬ್ಬರು ಭಾರತೀಯರು ಇದ್ದರು.
ರಸಾಯನ ಶಾಸ್ತ್ರ ನೊಬೆಲ್
ಪರಮಾಣುಗಳ ಮಟ್ಟದಲ್ಲಿ ಕೆಲಸ ಮಾಡುವ ಮಾನವ ಜೀವಕೋಶಗಳ ವೀಕ್ಷಣೆಯ ಸಂಶೋಧನೆಗೆ ರಸಾಯನಿಕ ವಿಭಾಗದ ನೊಬೆಲ್ ಪ್ರಶಸ್ತಿ ದಕ್ಕಿದೆ.
ಸ್ವಿಟ್ಜರ್ಲಾಂಡ್ ನ ಸಂಶೋಧಕ ಜಾಕ್ವೆಸ್ ಡುಬೋಶೆಟ್, ಅಮೆರಿಕಾದ ಜೋಕಿಮ್ ಫ್ರಾಂಕ್ ಮತ್ತು ಬ್ರಿಟನ್ ನ ರಿಚರ್ಡ್ ಹೆಂಡರ್ಸನ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.












Click it and Unblock the Notifications