ಹೆಲಿಕಾಪ್ಟರ್ ಬ್ಲೇಡ್ ಗೆ ಸಿಲುಕಿ ನೇಪಾಳದಲ್ಲಿ ಭಾರತೀಯ ಯಾತ್ರಿಕ ಸಾವು
ಕಠ್ಮಂಡು, ಆಗಸ್ಟ್ 15: ಈ ವರದಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಏಕೆಂದರೆ, ನೇಪಾಳದ ಹಿಲ್ಸಾ ಭಾಗದಲ್ಲಿ ಮಂಗಳವಾರ ಈ ಅನಾಹುತ ಸಂಭವಿಸಿದ್ದು, ಕೈಲಾಶ್ ಮಾನಸರೋವರದ ನಲವತ್ತೆರಡು ವರ್ಷದ ಯಾತ್ರಾರ್ಥಿ ಕತ್ತು ಕತ್ತರಿಸಿಹೋಗಿದೆ. ಈ ದುರ್ಘಟನೆಗೆ ಕಾರಣವಾಗಿರುವುದು ಹೆಲಿಕಾಪ್ಟರ್ ನ ಬ್ಲೇಡ್.
ಮುಬೈನ ನಾಗೇಂದ್ರ ಕುಮಾರ್ ಕಾರ್ತೀಕ್ ಮೆಹ್ತಾ ಮೃತರು. ಅವರು ಕೈಲಾಶ್ ಮಾನಸಸರೋವರಕ್ಕೆ ತೆರಳುತ್ತಿದ್ದರು ಎಂದು 'ಮೈ ರಿಪಬ್ಲಿಕಾ' ವರದಿ ಮಾಡಿದೆ. ಈ ಅನಾಹುತ ನಡೆದದ್ದು ಹೇಗೆ ಎಂಬ ಬಗ್ಗೆ ಅಲ್ಲಿನ ಜಿಲ್ಲಾ ಅಧಿಕಾರಿ ಮಹೇಶ್ ಕುಮಾರ್ ಪೊಖರೇಲ್ ಮಾಹಿತಿ ನೀಡಿದ್ದಾರೆ.
ನೀವು ಗಮನಿಸಿದ್ದಿರಬಹುದು: ಹೆಲಿಕಾಪ್ಟರ್ ನ ತಲೆ ಮೇಲೆ ಚೂಪಾದ ಬ್ಲೇಡ್ ನಂಥದ್ದು ಇರುತ್ತದೆ. ಅದು ಚಲಿಸುವಾಗ ತಿರುಗುತ್ತಿರುತ್ತದೆ. ಅಂಥ ಹೆಲಿಕಾಪ್ಟರ್ ನೆಲಕ್ಕೆ ಇಳಿದ ಮೇಲೆ ನಾಗೇಂದ್ರ ಕುಮಾರ್ ದೂರಕ್ಕೆ ಸರಿಯಬೇಕಿತ್ತು. ಆದರೆ ಆ ಬ್ಲೇಡ್ ಕಡೆಗೆ ಹೋಗಿದ್ದಾರೆ. ಆಗ ತಿರುಗುತ್ತಿದ್ದ ಬ್ಲೇಡ್ ನಿಂದ ಕತ್ತು ಕತ್ತರಿಸಿ, ಮೃತಪಟ್ಟಿದ್ದಾರೆ.

ನೇಪಾಳದ ಸಿಮಿಕೋಟ್ ಮತ್ತು ಹಿಲ್ಸಾಗೆ ಹೊರಜಗತ್ತಿನ ಸಂಪರ್ಕ ಇರುವುದು ಸಣ್ಣ ವಿಮಾನಗಳು ಅಥವಾ ಹೆಲಿಕಾಪ್ಟರ್ ಗಳ ಮೂಲಕವೇ. ಇಲ್ಲಿಗೆ ಬರುವುದಕ್ಕಾಗಲೀ ಅಥವಾ ಇಲ್ಲಿಂದ ಹೊರಗೆ ಹೋಗುವುದಕ್ಕಾಗಲೀ ಬೇರೆ ವ್ಯವಸ್ಥೆ ಇಲ್ಲ.
ಕೈಲಾಶ್ ಮಾನಸ ಸರೋವರವು ಚೀನಾದ ಟಿಬೆಟನ್ ಭಾಗದಲ್ಲಿದೆ. ಈ ಸ್ಥಳವು ಹಿಂದೂಗಳು, ಬೌದ್ಧರು ಹಾಗೂ ಜೈನರಿಗೆ ಪವಿತ್ರವಾದದ್ದು. ಈ ಯಾತ್ರೆ ಬಲು ಪ್ರಯಾಸಕರವೇ ಆದರೂ ನೂರಾರು ಭಾರತೀಯರು ಅಲ್ಲಿಗೆ ಹೋಗುತ್ತಾರೆ.












Click it and Unblock the Notifications