‘ಗಾಜಾ’ ಯುದ್ಧ ನಿಲ್ಲಿಸಲು ಪಣತೊಟ್ಟ ಭಾರತ?
ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ತೀವ್ರ ಸ್ವರೂಪದ ಹಿಂಸೆಗೆ ಗಾಜಾ ಪಟ್ಟಿ ಈಗ ನರಳಿ ಹೋಗಿದೆ. ಒಂದು ಕಡೆ ಜನರಿಗೆ ಅನ್ನ & ನೀರು ಸಿಗುತ್ತಿಲ್ಲ. ಇನ್ನೊಂದು ಕಡೆ ಇದೇ ಯುದ್ಧ 3ನೇ ಮಹಾಯುದ್ಧವಾಗಿ ಪರಿವರ್ತನೆ ಕಾಣುವ ಭಯ ಆವರಿಸಿದೆ. ಇಷ್ಟೆಲ್ಲಾ ಗೊಂದಲ & ಆತಂಕದ ನಡುವೆ ಇದೀಗ ಭಾರತದ ವಿದೇಶಾಂಗ ಸಚಿವರು ಗಾಜಾ ಯುದ್ಧದ ಬಗ್ಗೆ ಭಾರಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಇಸ್ರೇಲ್ & ಹಮಾಸ್ ನಡುವಿನ ಯುದ್ಧ ನಿಲ್ಲಿಸಿ, ಗಾಜಾ ಪ್ರದೇಶವನ್ನು ಸೈಲೆಂಟ್ ಮಾಡಿ ಮತ್ತೆ ಮೊದಲ ಪರಿಸ್ಥಿತಿಗೆ ತರಬೇಕು ಎಂಬುದು ವಿಶ್ವಸಂಸ್ಥೆಯ ಆಸೆ. ಆದರೆ ಈ ಆಸೆ ಈಡೇರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಯಾಕಂದ್ರೆ ಇಸ್ರೇಲ್ ತನ್ನ ದಾಳಿಯನ್ನ ಮತ್ತಷ್ಟು ತೀವ್ರಗೊಳಿಸಿ ಗಾಜಾ ಮೇಲೆ ನುಗ್ಗಿ ಹೋಗುತ್ತಿದೆ. ಇನ್ನೊಂದು ಕಡೆ ಹಮಾಸ್ ಕೂಡ ಶರಣಾಗದೆ ಪದೇ, ಪದೇ ಇಸ್ರೇಲ್ ಸೇನೆಯನ್ನ ಕೆಣಕುವ ಕೆಲಸ ಮಾಡುತ್ತಿದೆ. ಹೀಗಾಗಿ ಗಾಜಾ ಪಟ್ಟಿಯಲ್ಲಿ ಈಗ ಜನರು ನರಳುತ್ತಿದ್ದಾರೆ. ಇದೇ ಸಮಯದಲ್ಲಿ ಭಾರತ ಮಹತ್ವದ ಹೇಳಿಕೆ ನಿಡಿದೆ.

ಯುದ್ಧ ನಿಲ್ಲಿಸಲು ಭಾರತದ ಆಗ್ರಹ!
ಭಾರತವು ಇಸ್ರೇಲ್ ಜೊತೆಗೆ ಅತ್ಯುತ್ತಮ ಸಂಬಂಧ ಹೊಂದಿದೆ. ಆದರೂ ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಬೇಕು ಎಂದು ಆಗ್ರಹಿಸುತ್ತಿದೆ ಭಾರತ. ಈ ಮೂಲಕ ಗಾಜಾದ ಹಿಂಸಾಚಾರಕ್ಕೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಮಾತನಾಡಿರುವ ಭಾರತೀಯ ವಿದೇಶಾಂಗ ಸಚಿವರು, ಗಾಜಾದ ಮೇಲೆ ನಡೆಯುತ್ತಿರುವ ಯುದ್ಧ ಕೊನೆಯಾಗಲಿ ಎಂದಿದ್ದಾರೆ.
ಅಲ್ಲದೆ ಪ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವು ನೀಡುವುದನ್ನು ಭಾರತ ಮುಂದುವರಿಸಲಿದೆ ಎಂದು ಘೋಷಿಸಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ 14ನೇ ಶೃಂಗಸಭೆ ಇದೀಗ ಲಾವೋಸ್ನಲ್ಲಿ ನಡೆಯುತ್ತಿದೆ. ಇಲ್ಲೇ ಎಸ್. ಜಯಶಂಕರ್ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ. ಭಾರತ ಈ ಮೊದಲಿನಿಂದ ಕೂಡ ಜಗತ್ತಿನಲ್ಲಿ ಯುದ್ಧಗಳು ನಡೆಯುವ ಕಾಲಘಟ್ಟ ಇದಲ್ಲ ಎಂದು ಪ್ರತಿಪಾದನೆ ಮಾಡುತ್ತಿದೆ.
ಉಕ್ರೇನ್ ಯುದ್ಧಕ್ಕೆ ಮಾತುಕತೆಯೇ ಮದ್ದು!
ರಷ್ಯಾ & ಉಕ್ರೇನ್ ಯುದ್ಧದ ಬಗ್ಗೆಯೂ ಮಾತನಾಡಿರುವ ಭಾರತದ ವಿದೇಶಾಂಗ ಸಚಿವರು, ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧ ಮಾತುಕತೆಯ ಮೂಲಕ ಕೊನೆಯಾಗಲಿ. ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ ಮಾಡುವುದನ್ನ ನಿಲ್ಲಿಸಬೇಕು ಎಂದಿದ್ದಾರೆ. ಈ ಮೂಲಕ ಭಾರತ ಯುದ್ಧವನ್ನು ಮತ್ತೊಮ್ಮೆ ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಯುದ್ಧ ನಿಂತು ಶಾಂತಿ ಮೂಡಲಿ ಎಂದು ಆಗ್ರಹಿಸುತ್ತಿದೆ ಭಾರತ. ಆದರೆ ಈ ಮಾತನ್ನು ಗಾಜಾ & ಉಕ್ರೇನ್ ನೆಲದಲ್ಲಿ ಯುದ್ಧ ಮಾಡುತ್ತಿರುವ ನಾಯಕರು ಫಾಲೋ ಮಾಡ್ತಾರಾ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications