‘ಆಪರೇಷನ್ ಕಾವೇರಿ’ ಮೂಲಕ ಭಾರತೀಯರು ತಾಯ್ನಾಡಿಗೆ
ಖರ್ಟೋಮ್, ಸುಡಾನ್: ಸೇನಾ ಸಂಘರ್ಷದಲ್ಲಿ ಸಿಲುಕಿ ನರಳುತ್ತಿರುವ ಭಾರತೀಯರನ್ನ ರಕ್ಷಣೆ ಮಾಡಿ ತಾಯ್ನಾಡಿಗೆ ಕರೆತರುವ ಪ್ರಯತ್ನ ಭರದಿಂದ ಸಾಗಿದೆ. ಸುಡಾನ್ ಸೇನೆ ಹಾಗೂ ಅರೆಸೇನಾ ಪಡೆ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ ಸಣ್ಣ ಬ್ರೇಕ್ ಸಿಕ್ಕಿದ್ದು, 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ. ಹೀಗಾಗಿ ಭಾರತೀಯರ ರಕ್ಷಣೆಗೆ ಸೂಕ್ತ ಸಮಯ ಸಿಕ್ಕಂತಾಗಿದೆ.
ಸುಡಾನ್ನಲ್ಲಿ ಭಾರತ ಮೂಲದ 3,000 ಪ್ರಜೆಗಳು ಸಿಲುಕಿರುವ ಸಾಧ್ಯತೆ ಇದೆ. ಹೀಗಾಗಿ ಇವರೆಲ್ಲರನ್ನೂ ರಕ್ಷಿಸಿ, ತಾಯ್ನಾಡಿಗೆ ಕರೆತರುವ ಕೆಲಸ ಭರದಿಂದ ಸಾಗಿದೆ. ಸುಡಾನ್ (Sudan) ಸೇನೆ ಹಾಗೂ ಸುಡಾನ್ನ ಅರೆಸೇನಾ ಪಡೆಯ ನಡುವೆ ಕಳೆದ 10 ದಿನಗಳಿಂದ ಭೀಕರ ಹಿಂಸಾಚಾರ ನಡೆಯುತ್ತಿದೆ. ಪರಿಸ್ಥಿತಿ ಹಿಡಿತಕ್ಕೆ ಸಿಗದ ಕಾರಣ ಕೋಟ್ಯಂತರ ಜನರು ಅಪಾಯದಲ್ಲಿದ್ದಾರೆ. ಭಾರತೀಯ ಸೇನೆ ಹಾಗೂ ಭಾರತ ಸರ್ಕಾರ ನಮ್ಮವರ ರಕ್ಷಣೆಗೆ ದೊಡ್ಡ ಪಡೆಯನ್ನೇ ಅಲ್ಲಿಗೆ ಕಳುಹಿಸಿದೆ.

ಸೌದಿ ಮೂಲಕ ರಕ್ಷಣಾ ಕಾರ್ಯ
ಕೆಂಪು ಸಮುದ್ರ ತೀರದಲ್ಲಿ ಚಾಚಿಕೊಂಡಿರುವ ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆಯ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿಕೊಂಡಿದೆ. ಹೀಗಾಗಿ ಸೌದಿ ಅರೇಬಿಯಾ ಮೂಲಕ ಭಾರತೀಯರನ್ನ ರಕ್ಷಿಸಿ ಕರೆತರುವ ಕಾರ್ಯ ನಮ್ಮ ಸೇನೆಯಿಂದ ಮುಂದುವರಿದಿದೆ. 500ಕ್ಕೂ ಹೆಚ್ಚು ಭಾರತೀಯರು ಸುಡಾನ್ ಬಂದರನ್ನ ತಲುಪಿದ್ದು, ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ. 72 ಗಂಟೆಗಳ ಕಾಲ ಘೋಷಣೆಯಾಗಿರುವ ಕದನ ವಿರಾಮಕ್ಕೆ ಕೌಂಟ್ಡೌನ್ ಶುರುವಾಗಿರುವುದು ಆತಂಕ ಹೆಚ್ಚಿಸಿದೆ.
ಕಂಡ ಕಂಡಲ್ಲಿ ಕಗ್ಗೊಲೆ
ತಿನ್ನಲು ಅನ್ನವಿಲ್ಲದೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಸುಡಾನ್ ನೆಲದಲ್ಲಿ ಮತ್ತೊಮ್ಮೆ ಸೇನಾ ಹಿಂಸಾಚಾರ ಭುಗಿಲೆದ್ದಿದೆ. ಮಿಲಿಟರಿ, ಪ್ಯಾರಾ ಮಿಲಿಟರಿ ನಡುವೆ ಉಂಟಾದ ಸಂಘರ್ಷದಲ್ಲಿ ಲಕ್ಷಾಂತರ ಅಮಾಯಕರು ಒದ್ದಾಡುತ್ತಿದ್ದಾರೆ. ಮನೆಯಿಂದ ಹೊರ ಬಂದರೆ ಹೆಣಗಳು ಬೀಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿವಿಧ ಕಾರಣಕ್ಕೆ ಸುಡಾನ್ಗೆ ತೆರಳಿದ್ದ ಭಾರತೀಯರು ಸಂಕಷ್ಟಕ್ಕೆ ಸಿಲುಕಿ ಜೀವಭಯದಲ್ಲಿ ನರಳುತ್ತಿದ್ದಾರೆ. ಅದರಲ್ಲೂ ಕರ್ನಾಟಕದಿಂದ ತೆರಳಿದ್ದ ಹಕ್ಕಿಪಿಕ್ಕಿ ಜನಾಂಗ ಅಪಾಯಕ್ಕೆ ಸಿಲುಕಿದೆ.

ಹೊಟ್ಟೆಪಾಡಿಗೆ ಹೋದವರಿಗೆ ಸಂಕಷ್ಟ
ಬೇಟೆ ನಿಲ್ಲಿಸಿದ ಬಳಿಕ ಕಳೆದ ಹತ್ತಾರು ವರ್ಷಗಳಿಂದ ಬೇರೆ ಬೇರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆ ಹಕ್ಕಿಪಿಕ್ಕಿ ಜನಾಂಗ. ಅದರಲ್ಲೂ ಆಯುರ್ವೇದಿಕ್ ಔಷಧ ಮುಖ್ಯ ಉದ್ಯೋಗವಾಗಿದೆ. ಆದರೆ ಆಯುರ್ವೇದ ಔಷಧಗಳಿಗೆ ಭಾರತದಲ್ಲಿ ಅಷ್ಟಾಗಿ ಬೇಡಿಕೆ ಇಲ್ಲ. ಆಫ್ರಿಕಾ ಸೇರಿ ಹೊರ ದೇಶಗಳಲ್ಲಿ ಆಯುರ್ವೇದಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಜನ ಆಯುರ್ವೇದ ಔಷಧ ಮಾರಾಟವನ್ನೇ ತಮ್ಮ ಉದ್ಯೋಗ ಮಾಡಿಕೊಂಡಿದ್ದರು. ಹೀಗೆ ಔಷಧ ಮಾರಲು ಸುಡಾನ್ಗೆ ಹೋದವರು ನರಳುತ್ತಿದ್ದಾರೆ.
ಭಾರತೀಯ ಪ್ರಜೆಗಳು ತಾಯ್ನಾಡಿಗೆ
ಸುಡಾನ್ ಕಾರ್ಯಾಚರಣೆ ನಿನ್ನೆಯಿಂದ ಪರಿಣಾಮಕಾರಿಯಾಗಿ ಶುರುವಾಗಿದೆ. ಇದೀಗ ಭಾರತೀಯರ ರಕ್ಷಣೆಗೆ ಭಾರತೀಯ ಸೇನೆ ರೂಪಿಸಿರುವ ಪ್ಲ್ಯಾನ್ ಪ್ರಕಾರ, ಹಕ್ಕಿಪಿಕ್ಕಿ ಜನರನ್ನೂ ರಕ್ಷಿಸಿ ಕರೆತರುವ ಪ್ರಯತ್ನ ಮುಂದುವರಿದಿದೆ. ಭಾರತೀಯ ಪ್ರಜೆಗಳು ಕಂಡರೆ ಸಾಕು ಜಗತ್ತಿನ ಯಾವುದೇ ದೇಶ ಬೇಕಾದ್ರೂ ಸಹಾಯಕ್ಕೆ ಬರುತ್ತಿದೆ. ಇದೇ ರೀತಿ ಈಗಾಗಲೇ ಹಲವು ದೇಶಗಳು ನಮ್ಮ ಜನರನ್ನ ರಕ್ಷಣೆ ಮಾಡಿವೆ. ಸೌದಿ ಕೂಡ ಭಾರತೀಯರನ್ನ ರಕ್ಷಿಸಿ ತಾಯ್ನಾಡಿಗೆ ಕಳುಹಿಸಿ ಕೊಟ್ಟಿದೆ.
ಹಿಸಾಂಚಾರದ ತವರು ಸುಡಾನ್
ಈಗ ಸುಡಾನ್ನಲ್ಲಿ ನಡೆಯುತ್ತಿರುವ ಹಿಂಸೆ ಮೊದಲೇನಲ್ಲ. ಇಲ್ಲಿ ಪದೇಪದೆ ಹಿಂಸೆ ನಡೆಯುತ್ತಿದೆ. ಇದಕ್ಕೆ ಕಾರಣ ಹಲವು. ಆದರೆ 1956ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರ, 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರ ನೋಡಿದೆ. 1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕ ಅಂದರೆ 30 ವರ್ಷಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.












Click it and Unblock the Notifications