ಮಾಲ್ಡೀವ್ಸ್ ನಲ್ಲಿ ಭಾರತ ಮೂಲದ ಪತ್ರಕರ್ತರಿಬ್ಬರ ಬಂಧನ
ಮಾಲೆ, ಫೆಬ್ರವರಿ 09 : ವಲಸೆ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಫ್ರಾನ್ಸ್ ಪ್ರೆಸ್ ಸಂಸ್ಥೆಗೆ ಕೆಲಸ ಮಾಡುತ್ತಿರುವ ಭಾರತೀಯ ಪತ್ರಕರ್ತ ಮತ್ತು ಭಾರತ ಮೂಲದ ಬ್ರಿಟಿಷ್ ಪತ್ರಕರ್ತನನ್ನು ಶುಕ್ರವಾರ ಬಂಧಿಸಲಾಗಿದೆ.
ದ್ವೀಪ ರಾಷ್ಟ್ರದಲ್ಲಿ ಮಾಲ್ಡೀವ್ಸ್ ನಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಎಲ್ಲ ವಿದೇಶಿಯರು ಇಲ್ಲಿನ ವಲಸೆ ಮಾರ್ಗದರ್ಶಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಮಾಲ್ಡೀವ್ಸ್ ಪೊಲೀಸರು ಮನವಿ ಮಾಡಿದ್ದಾರೆ.
ಬಂಧಿತರಾಗಿರುವ ಪತ್ರಕರ್ತರ ಹೆಸರು ಮತ್ತಿತರ ವಿವರ ನೀಡಲು ನಿರಾಕರಿಸಿದ್ದಾರೆ. ಅವರಿಬ್ಬರು ಮಾಲ್ಡೀವ್ಸ್ ವಲಸೆ ಕಾಯ್ದೆ ಮತ್ತು ನಿಯಮಗಳ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮಾಲ್ಡೀವ್ಸ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಆದರೆ, ಎಎನ್ಐ ಸುದ್ದಿ ಸಂಸ್ಥೆ ಬಂಧಿತರನ್ನು ಅಮೃತಸರದ ಮನಿ ಶರ್ಮಾ ಮತ್ತು ಲಂಡನ್ನಿನ ಆತಿಶ್ ಪಟೇಲ್ ಎಂದು ಗುರುತಿಸಿದೆ. ಮಾಲ್ಡೀವ್ಸ್ ನಲ್ಲಿ ವಾಕ್ ಸ್ವಾತಂತ್ರ್ಯ ಸತ್ತುಹೋಗಿದೆ. ಕಳೆದ ರಾತ್ರಿ ಟಿವಿ ಸುದ್ದಿ ವಾಹಿನಿಯನ್ನು ಕೂಡ ಬಂದ್ ಮಾಡಲಾಗಿದೆ ಎಂದು ಮಾಲ್ಡೀವ್ಸ್ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಲ್ಡೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ವಿರುದ್ಧದ ಭಯೋತ್ಪಾದನಾ ಆರೋಪಗಳನ್ನು ಕೈಬಿಟ್ಟಿದ್ದು, ಅವರು ಸೇರಿದಂತೆ ಇತರ 8 ವಿರೋಧ ಪಕ್ಷದ ನಾಯಕರನ್ನು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವನ್ನು ಹಾಲಿ ಅಧ್ಯಕ್ಷ ಯಾಮೀನ್ ನಿರಾಕರಿಸಿದ್ದರಿಂದ ರಾಜಕೀಯ ಬಿಕ್ಕಟ್ಟು ತಲೆದೋರಿದೆ. 15 ದಿನ ತುರ್ತು ಪರಿಸ್ಥಿತಿ ಹೇರಿದ್ದು, ಇಬ್ಬರು ನ್ಯಾಯಮೂರ್ತಿಗಳನ್ನು ಬಂಧಿಸಿದ್ದಾರೆ.












Click it and Unblock the Notifications