ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್, ಎಚ್ಚರಿಕೆ ನೀಡಿದ ಭಾರತ
ನವದೆಹಲಿ, ಜುಲೈ 25: ಪಾಕಿಸ್ತಾನದಲ್ಲಿ 30 ಸಾವಿರದಿಂದ 40 ಸಾವಿರದಷ್ಟು ಉಗ್ರರು ಇನ್ನೂ ಇದ್ದಾರೆ ಎಂದು ಅಮೆರಿಕದಲ್ಲಿ ಒಪ್ಪಿಕೊಂಡ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮಾತಿಗೆ ಭಾರತ ಕಟುವಾಗಿ ಪ್ರತಿಕ್ರಿಯೆ ನೀಡಿದೆ.
"ಸತ್ಯವನ್ನು ಒಪ್ಪಿಕೊಂಡಿದ್ದೀರಿ. ನಿಮ್ಮ ನೆಲದಲ್ಲೇ ಬೆಳೆಸಿದ ಭಯೋತ್ಪಾದಕರ ವಿರುದ್ಧ ಇನ್ನಾದರೂ ಕಠಿಣ ಕ್ರಮ ಕೈಗೊಳ್ಳಿ. ಅವರಿಗೆ ನೆಲೆ ನೀಡುವುದನ್ನು ಮೊದಲು ಬಿಟ್ಟುಬಿಡಿ" ಎಂಬ ಹೇಳಿಕೆಯನ್ನು ಭಾರತೀಯ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ.
ಭಾರತದಲ್ಲಿ ನಡೆದ ಬಹುತೇಕ ಎಲ್ಲ ಭಯೋತ್ಪಾದಕ ದಾಳಿಯಲ್ಲೂ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಭಾರತ ಹಲವು ಸಾಕ್ಷ್ಯಗಳನ್ನು ನೀಡಿದ್ದರೂ ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ತನ್ನ ನೆಲೆಯಲ್ಲಿ ಭಯೋತ್ಪಾದಕರಿರುವುದನ್ನು ಸ್ವತಃ ಒಪ್ಪಿಕೊಂಡಂತಾಗಿದೆ.

ಕಳೆದ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ ನಲವತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಹೊಣೆಯನ್ನು ಪಾಕ್ ಮೂಲದ ಜೈಶ್ ಇ ಮೊಹಮ್ಮದ್ ಸಂಘಟನೆಯೇ ಹೊತ್ತುಕೊಂಡರೂ, ಪಾಕಿಸ್ತಾನ ಮಾತ್ರ ಈ ಘಟನೆಗೂ ತನಗೂ ಸಂಬಂಧವಿಲ್ಲ ಎಂದಿತ್ತು. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಕಾರಣ ಸುಮ್ಮನಾಗಿತ್ತು.
ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್ ಖಾನ್, ಬುಧವಾರದಂದು ಮಾತನಾಡುತ್ತ, "ಪಾಕಿಸ್ತಾನದಲ್ಲಿ ಇನ್ನೂ 30 ರಿಂದ 40 ಸಾವಿರ ಉಗ್ರರಿದ್ದಾರೆ. ಈ ಹಿಂದಿನ ಸರ್ಕಾರಗಳು ಉಗ್ರ ಧಮನಕ್ಕಾಗಿ ಯಾವ ಪ್ರಯತ್ನವನ್ನೂ ಮಾಡಿಲ್ಲ. ಉಗ್ರ ಚಟುವಟಿಕೆಗಳು ನಡೆದಾಗ ಸುಮ್ಮನೇ ಮೊಸಳೆ ಕಣ್ಣೀರು ಸುರಿಸಿದವು ಅಷ್ಟೇ. ಆದರೆ ಎನಮ್ಮ ಸರ್ಕಾರ ಉಗ್ರದಮನಕ್ಕೆ ಕಂಕಣಬದ್ಧವಾಗಿದೆ" ಎಂದು ಇಮ್ರಾನ್ ಖಾನ್ ಹೇಳಿದ್ದರು.












Click it and Unblock the Notifications