ಇಸ್ರೇಲ್ ಮನವಿ ತಿರಸ್ಕರಿಸಿದ ಭಾರತ, ಯಾವ ಕಾರಣಕ್ಕೆ ಗೊತ್ತಾ..?
ಅಂತಾರಾಷ್ಟ್ರೀಯ ಸಂಬಂಧ ನಿರ್ಧಾರವಾಗಿವುದು ಆಯಾ ದೇಶಗಳ ಸಂಕಷ್ಟದ ಸಂದರ್ಭದಲ್ಲಿ. ಬಹುತೇಕ ರಾಷ್ಟ್ರಗಳು ಹೀಗೆ ಆತ್ಮೀಯ ಗೆಳೆಯರೂ ಆಗಿದ್ದಾರೆ, ಇದೇ ವಿಚಾರಕ್ಕೆ ದೂರವೂ ಆಗಿದ್ದಾರೆ. ಈಗ ಭಾರತ ಹಾಗೂ ಇಸ್ರೇಲ್ ನಡುವೆ ಇಂತಹದ್ದೇ ಬಿರುಕು ಮೂಡಿದೆಯಾ ಎಂಬ ಅನುಮಾನ ಕಾಡುತ್ತಿದೆ.
ಏಕೆಂದರೆ ಪ್ಯಾಲೆಸ್ಟೇನಿಯನ್ ಪ್ರಾಂತ್ಯಗಳ ವಿಚಾರದಲ್ಲಿ ಇಸ್ರೇಲ್ನ ಕಾರ್ಯಾಚರಣೆ ಕುರಿತು ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇಸ್ರೇಲ್ ರಕ್ಷಣಾ ಪಡೆಗಳ ಕಾರ್ಯಾಚರಣೆಯನ್ನು ಐಸಿಸಿ ಖಂಡಿಸಿತ್ತು.
ಇಸ್ರೇಲ್ ರಾಜತಾಂತ್ರಿಕರಿಗೆ ರಕ್ಷಣೆ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ
ಕೋರ್ಟ್ನ ತೀರ್ಪನ್ನು ಖಂಡಿಸುವಂತೆ ಇಸ್ರೇಲ್ ಭಾರತದ ಬಳಿ ಮನವಿ ಮಾಡಿತ್ತು. ಆದ್ರೆ ಭಾರತ ಈ ವಿಚಾರದಲ್ಲಿ ನಾಜೂಕಿನ ನಡೆ ಪ್ರದರ್ಶಿಸಿದೆ. ಬೆಣ್ಣೆಯಲ್ಲಿ ಕೂದಲು ತೆಗೆದಂತೆ ವ್ಯವಹರಿಸಿದೆ. ಪ್ಯಾಲೆಸ್ಟೇನ್ ಮತ್ತು ಇಸ್ರೇಲ್ ನಡುವೆ ಅಘೋಷಿತ ಯುದ್ಧ ನಡೆಯುತ್ತಿದೆ. ಪ್ಯಾಲೆಸ್ಟೇನ್ ಬಂಡುಕೋರರು ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಇಸ್ರೇಲ್ ತಕ್ಕ ಉತ್ತರವನ್ನು ನೀಡಿ, ಮರುದಾಳಿ ನಡೆಸುತ್ತಿದೆ.
ಆದರೆ ಇಸ್ರೇಲ್ ಕಾರ್ಯಾಚರಣೆಯನ್ನ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ಖಂಡಿಸಿತ್ತು. ಪ್ಯಾಲೆಸ್ಟೇನ್ ಬಂಡುಕೋರರು ಮತ್ತು ಇಸ್ರೇಲ್ ಪಡೆಗಳನ್ನು ಒಂದೇ ತಕ್ಕಡಿಯಲ್ಲಿ ತೂಗಿತ್ತು. ಇದು ಇಸ್ರೇಲ್ ಕಣ್ಣು ಕೆಂಪಾಗಿಸಿದ್ದು, ಐಸಿಸಿ ತೀರ್ಪನ್ನು ಖಂಡಿಸಿದೆ.
ಭಾರತಕ್ಕೆ ಪತ್ರ ಬರೆದ ಇಸ್ರೇಲ್..!
ಇಸ್ರೇಲ್ ರಕ್ಷಣಾ ಪಡೆಗಳು ಹಾಗೂ ಪ್ಯಾಲೆಸ್ಟೇನ್ ಬಂಡುಕೋರರಾದ ಹಮಾಸ್ ಇಬ್ಬರನ್ನೂ ಸಂಭವನೀಯ ದುಷ್ಕರ್ಮಿಗಳು ಎಂದು ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಫೆಬ್ರವರಿ 5ರಂದು ಐಸಿಸಿ ನೀಡಿದ ತೀರ್ಪು ಇಸ್ರೇಲ್ ನಾಯಕರನ್ನು ಕೆಂಡವಾಗುವಂತೆ ಮಾಡಿತ್ತು. ಅದರಲ್ಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಭಾರತಕ್ಕೆ ಫೆಬ್ರವರಿ 7ರಂದು ನೆತನ್ಯಾಹು ಪತ್ರ ಬರೆದಿದ್ದರು. ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ನ ತೀರ್ಪನ್ನು ವಿರೋಧಿಸಿ ಎಂದಿದ್ದರು. ಆದರೆ ಈ ಸೂಕ್ಷ್ಮ ವಿಚಾರವನ್ನು ಭಾರತ ನಾಜೂಕಾಗಿ ನಿಭಾಯಿಸಿದೆ.
ಭಾರತ ಹೇಳಿದ್ದೇನು ಗೊತ್ತಾ..?
ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ತೀರ್ಪಿನ ಬಗ್ಗೆ ನಾವು ಮಾತನಾಡಲು ಆಗುವುದಿಲ್ಲ ಎಂದಿದೆ ಭಾರತ. ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ನ ಸ್ಥಾಪಕ ಒಪ್ಪಂದವಾದ ರೋಮ್ ಶಾಸನದಲ್ಲಿ ಭಾರತ ಸದಸ್ಯ ರಾಷ್ಟ್ರವಾಗಿಲ್ಲ. ಈ ಕಾರಣಕ್ಕೆ ನಾವು ಯಾವುದೇ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಭಾರತ ನಾಜೂಕಿನಿಂದ ಉತ್ತರ ನೀಡಿದೆ. ಭಾರತ ಹಲವು ದಶಕಗಳ ಹಿಂದೆಯೇ ಈ ನಿಲುವನ್ನು ತಳೆದಿತ್ತು. ಏಕೆಂದರೆ ಜಮ್ಮುಕಾಶ್ಮೀರ ಸೇರಿದಂತೆ ಮತ್ತಿತರ ಪ್ರದೇಶಗಳ ವಿಚಾರದಲ್ಲಿ ಮುಂದೊಂದು ದಿನ ಈ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಎಂಟ್ರಿ ಆಗಬಹುದು ಎಂಬ ದೂರದೃಷ್ಟಿಯಿಂದ ಭಾರತ ರೋಮ್ ಶಾಸನದಲ್ಲಿ ಸದಸ್ಯ ರಾಷ್ಟ್ರವಾಗಿರಲಿಲ್ಲ. ಇದೇ ವಿಚಾರವನ್ನು ಪ್ರಸ್ತಾಪಿಸಿ ಭಾರತ ಇಸ್ರೇಲ್ ಮನವಿಯಿಂದ ದೂರ ಉಳಿದಿದೆ.
ಭಾರತದ ಬೆಂಬಲ ಏಕೆ ಬೇಕು..?
ಇಸ್ರೇಲ್ ಒಂದು ದೇಶ ಎಂದು ಜಗತ್ತಿನ ಹಲವು ರಾಷ್ಟ್ರಗಳು ಒಪ್ಪಿಕೊಳ್ಳುವುದೇ ಇಲ್ಲ. ಅದರಲ್ಲೂ ಅರಬ್ ರಾಷ್ಟ್ರಗಳು ಈಗಲೂ ಇಸ್ರೇಲ್ ಕಂಡರೆ ಕೆಂಡಕಾರುತ್ತವೆ. ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ಜೊತೆ ಸಂಬಂಧ ಸುಧಾರಿಸುತ್ತಿದ್ದರೂ, ಅರಬ್ ರಾಷ್ಟ್ರಗಳು ಸಂಪೂರ್ಣವಾಗಿ ಇಸ್ರೇಲ್ನ ಬೆನ್ನಿಗೆ ನಿಲ್ಲುತ್ತಿಲ್ಲ. ಈ ವಿಚಾರದಲ್ಲಿ ಇಸ್ರೇಲ್ ನಂಬಿಕೊಂಡಿರುವುದು ಅಮೆರಿಕವನ್ನು ಬಿಟ್ಟರೆ ಯುರೋಪ್ ರಾಷ್ಟ್ರಗಳನ್ನ ಮಾತ್ರ. ಈ ಪಟ್ಟಿಯಲ್ಲಿ ಭಾರತಕ್ಕೂ ಸ್ಥಾನವಿದೆ. ಇಸ್ರೇಲ್ ಭಾರತವನ್ನು ಆಪ್ತ ಗೆಳೆಯ ಎನ್ನುತ್ತಿದೆ. ಅದರಲ್ಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ಆಪ್ತತೆಯನ್ನು ಬಯಸುತ್ತಿದ್ದಾರೆ. ಹೀಗಾಗಿಯೇ ನಮ್ಮ ಬೆಂಬಲಕ್ಕೆ ನಿಲ್ಲಿ ಎಂದು ಇಸ್ರೇಲ್ ಕೋರಿತ್ತು. ಆದರೆ ಭಾರತ ಸೂಕ್ಷ್ಮ ವಿಚಾರದಲ್ಲಿ ಸೂಕ್ಷ್ಮವಾಗಿಯೇ ಉತ್ತರ ನೀಡಿದೆ.
ಇಸ್ರೇಲ್ ಜೊತೆ ಸಂಬಂಧದ ಪ್ರಶ್ನೆ..!
ಹೌದು, ಭಾರತ ಹೀಗೆ ಇಸ್ರೇಲ್ ಮನವಿಗೆ 'ಇಲ್ಲ' ಎಂದು ಉತ್ತರ ನೀಡಿರುವುದು ಸಹಜವಾಗಿ ಹಲವು ಪ್ರಶ್ನೆ ಮೂಡುವಂತೆ ಮಾಡಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಸ್ನೇಹಕ್ಕೆ ಧಕ್ಕೆಯಾಗುತ್ತಾ ಎಂಬ ಆತಂಕವನ್ನೂ ಉಂಟುಮಾಡಿದೆ. ಆದರೆ ಭಾರತ ನೀಡಿರುವ ಉತ್ತರ ಬೆಣ್ಣೆಯಲ್ಲಿ ಕೂದಲು ತೆಗೆದಂತಿದ್ದು, ಯಾವುದೇ ರೀತಿ ವಿವಾದ ಏಳಲು ಅವಕಾಶವಿಲ್ಲ. ಹೀಗಾಗಿ ಇಸ್ರೇಲ್ಗೆ ಭಾರತ ಸ್ಪಷ್ಟ ಸಂದೇಶ ನೀಡಿದೆ. ಭಾರತದ ಈ ನಡೆಗೆ ಏಷ್ಯಾದ ಹಲವು ರಾಷ್ಟ್ರಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ಪ್ರತಿಕ್ರಿಯೆ ಹೊರಬಿದ್ದಿಲ್ಲ.