ಅರುಣಾಚಲ ಪ್ರದೇಶದಲ್ಲಿ ಚೀನಾಗೆ ಹೀಗೆ ಕೌಂಟರ್ ಕೊಡುವುದೇ ಭಾರತ?
ನವದೆಹಲಿ, ಡಿಸೆಂಬರ್ 20: ಭಾರತೀಯ ವಾಸ್ತವಿಕ ಗಡಿ ರೇಖೆಯ ಬಳಿ ಚೀನಾ ಅಭಿವೃದ್ಧಿಪಡಿಸುತ್ತಿರುವ ಗ್ರಾಮಗಳಿಗೆ ಕೌಂಟರ್ ಕೊಡುವ ನಿಟ್ಟಿನಲ್ಲಿ ಭಾರತವು ದಿಟ್ಟ ಹೆಜ್ಜೆ ಇರಿಸಿದೆ.
ನೈಜ ನಿಯಂತ್ರಣ ರೇಖೆಯಲ್ಲಿ ಚೀನಾದ ಆಕ್ರಮಣವನ್ನು ಎದುರಿಸಲು ಕೇಂದ್ರ ಸರ್ಕಾರವು ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯವನ್ನು ನಡೆಸುತ್ತಿದೆ.
ಭಾರತದ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ ಚೀನಾದಿಂದ ಗ್ರಾಮಗಳ ನಿರ್ಮಾಣ
ಡಿಸೆಂಬರ್ ಎರಡನೇ ವಾರದಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದಕ್ಕೂ ಮೊದಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯು ಗಡಿಯಲ್ಲಿ ಗ್ರಾಮಗಳ ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ ಎಂದು ಸುದ್ದಿಯಾಗಿತ್ತು. ಇದರ ಬಗ್ಗೆ ಸಾಕ್ಷ್ಯಗಳು ಸಹ ಸಿಕ್ಕಿದ್ದವು. ಹೀಗಾಗಿ ಚೀನಾದ ಸೇನೆಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಗಡಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಕೇಂದ್ರ ಸರ್ಕಾರವು ಲಕ್ಷ್ಯ ವಹಿಸಿದೆ.
ಎರಡು ಸುರಂಗಗಳ ನಿರ್ಮಾಣಕ್ಕೆ ಕಾಮಗಾರಿ ಶುರು
ಗಡಿ ರಸ್ತೆಗಳ ಸಂಸ್ಥೆಯು ಪಶ್ಚಿಮ ಅಸ್ಸಾಂ ಮತ್ತು ಪಶ್ಚಿಮ ಅರುಣಾಚಲ ಪ್ರದೇಶದ ಗಡಿ ಪ್ರದೇಶಗಳಲ್ಲಿ ಎಲ್ಲಾ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುತ್ತಿದೆ. ಎರಡು ಸುರಂಗಗಳು - ಸೆಲಾ ಮತ್ತು ನೆಚಿಪು ನಿರ್ಮಾಣ ಹಂತದಲ್ಲಿದೆ, ಏಕೆಂದರೆ ಚಳಿಗಾಲದಲ್ಲಿ ಭಾರೀ ಹಿಮಪಾತದಿಂದ ವಾಹನ ಸಂಚಾರ ಕಷ್ಟವಾಗುತ್ತದೆ, ಎಂದು ಮುಖ್ಯ ಇಂಜಿನಿಯರ್ ಬ್ರಿಗ್ ರಾಮನ್ ಕುಮಾರ್ ತಿಳಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಬಲಪಡಿಸುವುದು
ನಾವು ತವಾಂಗ್ ಜಿಲ್ಲೆಯ ದೂರದ ಪ್ರದೇಶಗಳನ್ನು ಸಂಪರ್ಕಿಸಲು ಬಯಸುತ್ತೇವೆ. ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತೇವೆ. ರಸ್ತೆ ಸಂಪರ್ಕದ ಹೊರತಾಗಿ, ತವಾಂಗ್ ಮತ್ತು ಅರುಣಾಚಲ ಪ್ರದೇಶದ ಇತರ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಬಲಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಬಿಆರ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚೀನಾ ಕುರಿತು ಮುನ್ನೆಚ್ಚರಿಕೆ ನೀಡಿದ ಗುಪ್ತಚರ ಇಲಾಖೆ
ಗುಪ್ತಚರ ಮಾಹಿತಿಯ ಪ್ರಕಾರ, ಚೀನಾ ಗಡಿಯುದ್ದಕ್ಕೂ ಮೂಲಸೌಕರ್ಯಗಳನ್ನು ಹೆಚ್ಚಿಸಿದೆ, ಭಾರೀ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಸುರಂಗಗಳನ್ನು ನಿರ್ಮಿಸಿದೆ ಮತ್ತು ಗಡಿಗಳ ಬಳಿ ತನ್ನ ಶಕ್ತಿಯನ್ನು ದ್ವಿಗುಣಗೊಳಿಸಿದೆ. ಅರುಣಾಚಲ ಗಡಿ ಭಾಗಗಳಲ್ಲಿ ಭಾರತೀಯ ಸೇನೆಯು ತನ್ನ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ. ಆದರೆ, ಈ ಗಡಿ ಭಾಗಗಳಿಗೆ ಸ್ಪಲ್ಪ ದೂರದಲ್ಲಿ ಚೀನಾ ದೇಶದವು ಸೇತುವೆ ಸೇರಿದಂತೆ ಹೊಸ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.
ಈ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಿಸುತ್ತಿದೆ ಎಂದು ಮೂಲಗಳು ಹೇಳಿವೆ. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಿದೆ. ಚೀನಾದ ನಿರ್ಮಾಣ ಕಾರ್ಯಗಳ ಮೇಲೆ ಭಾರತ ನಿಗಾ ಇರಿಸಿದ್ದು, ಭಾರತದ ಸಾರ್ವಭೌಮತೆಗೆ ಧಕ್ಕೆಯಾಗುತ್ತಿದೆ ಎಂದು ಅನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ
ಚೀನಾದಿಂದ ಗಡಿಯಲ್ಲಿ ಗ್ರಾಮ ನಿರ್ಮಾಣದ ಕಸರತ್ತು
ಅರುಣಾಚಲ ಪ್ರದೇಶ ಗಡಿಯಲ್ಲಿರುವ ಉಪರಿ ಸುಬನಸಿರಿ ಎಂಬ ಪ್ರದೇಶದಲ್ಲಿ ಚೀನಾ ಗ್ರಾಮವೊಂದನ್ನು ನಿರ್ಮಿಸಿದೆ ಎಂಬುದರ ಬಗ್ಗೆ ವರದಿಯಾಗಿತ್ತು. ಇದಕ್ಕೆ, ಹಿಂದೆಯೇ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ ಈ ಪ್ರದೇಶವನ್ನು 1960ರಿಂದ ಚೀನಾ ಅತಿಕ್ರಮಿಸಿಕೊಂಡಿದೆ ಎಂದು ಹೇಳಿತ್ತು. ಚೀನಾ ದೇಶದ ಸೈನಿಕರು ಭಾರತದ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ವಿಚಾರವೀಗ ಕಲ್ಲೋಲವನ್ನು ಸೃಷ್ಟಿಸಿದೆ. ಚೀನಾದ ಅತಿಕ್ರಮಣ ಹಾಗೂ ಮೊಂಡಾಟವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಿಯಾಗಿ ಎದುರಿಸುತ್ತಿಲ್ಲ. ಚೀನಾ ದೇಶವು ಯುದ್ದಕ್ಕೆ ಸಿದ್ಧತೆ ನಡೆಸುತ್ತಿರುವಾಗ, ಮೋದಿ ಸರ್ಕಾರ ನಿದ್ರಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ಈ ಹಿಂದೆಯೂ ಅರುಣಾಚಲ ಪ್ರದೇಶದ ಗಾಲ್ವಾನ್ ಕಣಿವೆಯಲ್ಲಿ ಭಾರತದ ಸುಮಾರು 20 ಯೋಧರನ್ನು ಚೀನಾ ಹತ್ಯೆ ಮಾಡಿತ್ತು.
ಎರಡು ವಾರದ ಹಿಂದೆ ಕಾಲ್ಕೆರೆದು ಬಂದ ಚೀನಾ
ಚೀನಾಗೆ ಸೇರಿದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯ 300-400 ಸೈನಿಕರು ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಮೂಲಕ ಒಳನುಗ್ಗಲು ಪ್ರಯತ್ನಿಸಿದರು. ಈ ಹಿನ್ನೆಲೆ ಡಿಸೆಂಬರ್ 9ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ಇದನ್ನು ಭಾರತೀಯ ಸೈನಿಕರು "ದೃಢವಾಗಿ ಎದುರಿಸಿದರು, ಗಡಿಯಲ್ಲಿ ನಿಯೋಜನೆಯಾಗಿದ್ದ ಯೋಧರು, ಚೀನಿಯರನ್ನು ಹಿಮ್ಮೆಟ್ಟುವಂತೆ ಮಾಡಿದರು.