India & Maldives: ಭಾರತ ವಿರೋಧಿ ಮಾಲ್ಡೀವ್ಸ್ ಅಧ್ಯಕ್ಷ ಬದಲಾಗ್ತಾರಾ?
ಮಾಲ್ಡೀವ್ಸ್ಗೆ ಹೊಸ ಅಧ್ಯಕ್ಷರ ಆಗಮನದ ನಂತರ, ಭಾರತ & ಮಾಲ್ಡೀವ್ಸ್ ನಡುವೆ ಕಿಚ್ಚು ಹೊತ್ತಿದೆ. ಅದ್ರಲ್ಲೂ ಭಾರತೀಯ ಸೇನಾ ಪಡೆಗಳನ್ನು ವಾಪಸ್ ಕಳುಹಿಸುವ ಸಂಕಲ್ಪ ಮಾಡಿ ವೋಟ್ ಪಡೆದಿದ್ದ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು, ಮತ್ತೊಮ್ಮೆ ಭಾರತ ಸೇನೆ ಹೊರಗೆ ಕಳುಹಿಸುವ ಮಾತನಾಡಿದ್ದಾರೆ. ಈ ಮಧ್ಯೆ ಭಾರತವೂ ಮಾಲ್ಡೀವ್ಸ್ ವಿಚಾರದಲ್ಲಿ ಚದುರಂಗದಾಟ ಶುರು ಮಾಡಿದೆ!
ಮಾಲ್ಡೀವ್ಸ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಆದ್ರೆ ಆರ್ಥಿಕವಾಗಿ ಇದನ್ನ ನೋಡುವುದಾದರೆ ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡ ಈ ದೇಶ ಇಡಿ ಜಗತ್ತಿಗೆ ಅಗತ್ಯ. ಇಲ್ಲಿ ಭಾರತ ತನ್ನ ಸಂಬಂಧ ವೃದ್ಧಿಸಿಕೊಂಡು ಬಂದಿತ್ತು. ಆದ್ರೆ ಇದೀಗ ಚೀನಾ ಪರ ಒಲವು ಇರುವ ಮುಯಿಝು ಆಯ್ಕೆ ಎಲ್ಲಾ ಬುಡಮೇಲು ಮಾಡಿದೆ. ಮಾಲ್ಡೀವ್ಸ್ ನೆಲದಿಂದ ಭಾರತೀಯ ಸೇನಾ ಪಡೆಗಳನ್ನ ವಾಪಸ್ ಕಳುಹಿಸುವ ಸಂಕಲ್ಪ ಮಾಡಿರುವ ಹೊಸ ಅಧ್ಯಕ್ಷ ಮುಯಿಝು. ನಿನ್ನೆ ಮಾಲ್ಡೀವ್ಸ್ 8ನೇ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಸಮಯದಲ್ಲೂ ಇದನ್ನೇ ಮಾತನಾಡಿದ್ದು ಸಂಚಲನ ಸೃಷ್ಟಿಸಿತ್ತು. ಆದರೆ ಈಗ ಭಾರತ ಬೇರೆಯದ್ದೇ ಹೆಜ್ಜೆ ಇಟ್ಟಿದೆ.

ಚೀನಾಗೆ ಬಿಸಿ ಮುಟ್ಟಿಸುತ್ತಾ ಭಾರತ?
ಅಂದಹಾಗೆ ಮೊದಲೇ ಹೇಳಿದಂತೆ ಅಧ್ಯಕ್ಷ ಮೊಹಮ್ಮದ್ ಮುಯಿಝು ಚೀನಾ ಪರ ಒಲವು ಇರುವ ರಾಜಕಾರಣಿ. ಮಾಲ್ಡೀವ್ಸ್ ರಾಜಕೀಯ ಭಾರತ & ಚೀನಾ ನಡುವೆ ಸುತ್ತುತ್ತೆ. ಇಲ್ಲಿ ಭಾರತ & ಚೀನಾ ತಮ್ಮ ಹಿಡಿತಕ್ಕೆ ಸದಾ ಪ್ರಯತ್ನಿಸುತ್ತವೆ. ಈ ತಿಕ್ಕಾಟದಲ್ಲಿ ಕಳೆದ ಬಾರಿ ಭಾರತಕ್ಕೆ ದಿಗ್ವಿಜಯ ಸಿಕ್ಕಿತ್ತು. ಆದ್ರೆ ಈಗ ಚೀನಾ ಮೇಲುಗೈ ಸಾಧಿಸಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆ ಭಾರತ 'ಚದುರಂಗದಾಟ' ಶುರು ಮಾಡಿದ್ದು, 'ಚೆಕ್ ಮೇಟ್' ಹೇಳಿದೆ.
ಭಾರತದ ಸೇನೆ ಮಾಲ್ಡೀವ್ಸ್ನಲ್ಲೇ ಉಳಿಯುತ್ತಾ?
ಹೌದು, ಈಗಿನ ಮಾಹಿತಿ ಪ್ರಕಾರ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಜೊತೆ ಮಹತ್ವದ ಮಾತುಕತೆ ಶುರುವಾಗಿದೆ. ಈ ಮೂಲಕ ಮಾಲ್ಡೀವ್ಸ್ ದೇಶದಲ್ಲಿ ಭಾರತೀಯ ಸೇನೆಯನ್ನು ಉಳಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಭಾರತ ನಡೆಸುತ್ತಿದೆ ಎಂಬ ಮಾತು ಓಡಾಡುತ್ತಿದೆ. ಹೇಗೆಂದ್ರೆ ಚೀನಾ ಈಗ ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಕ್ಕು ಸಾಧಿಸುವ ಸಮಯದಲ್ಲೇ, ಭಾರತ ಕೂಡ ಹಿಂದೂ ಮಹಾಸಾಗರದ ಮೇಲೆ ಹಕ್ಕು ಸಾಧಿಸುತ್ತಿದೆ.
ಚೀನಾ ಪರ ಇದ್ದರೂ ಭಾರತಕ್ಕೆ ಬೆಂಬಲ?
ಆದ್ರೆ ಭಾರತಕ್ಕೆ ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಿಗಲು ಮಾಲ್ಡೀವ್ಸ್ ಆಯಕಟ್ಟಿನ ಜಾಗವಾಗಿದೆ. ಈ ಕಾರಣಕ್ಕೆ ಮಾಲ್ಡೀವ್ಸ್ನ ರಾಜಧಾನಿ ಮಾಲೆಯಲ್ಲಿ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಮತ್ತೆ ಕೇಂದ್ರ ಸಚಿವ ಕಿರಣ್ ರಿಜಿಜು ಮಹತ್ವದ ಚರ್ಚೆ ಆರಂಭಿಸಿದ್ದಾರೆ. ಈ ಮಾತುಕತೆ ಫಲ ನೀಡುವ ನಿರಿಕ್ಷೆ ಕೂಡ ದಟ್ಟವಾಗಿದೆ ಎನ್ನಲಾಗಿದೆ. ಹೀಗೆ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಝು ಚೀನಾ ಪರವಾಗಿ ಇದ್ದರೂ ಭಾರತ ಇಲ್ಲಿ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ.

ಹಿಂದೆಯೂ ಫೈಟಿಂಗ್ ಇತ್ತು!
ಮಾಲ್ಡೀವ್ಸ್ ವಿಚಾರದಲ್ಲಿ ಭಾರತ & ಚೀನಾ ಪೈಪೋಟಿ ಹೊಸತೇನಲ್ಲ, ಆದ್ರೂ ಈ ಚುನಾವಣೆ ಭಾರತಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಹಿಂದಿನ ಸರ್ಕಾರ ಭಾರತದ ಪರವಾಗಿಯೆ ಇತ್ತು. ಹೀಗಾಗಿ ಭಾರತ ಕೂಡ ಮಾಲ್ಡೀವ್ಸ್ ಜೊತೆ ಉತ್ತಮ ಒಡನಾಟವನ್ನ ಹೊಂದುವ ಜೊತೆ ರಕ್ಷಣಾ ಒಪ್ಪಂದಗಳನ್ನ ಕೂಡ ವಿಸ್ತರಣೆ ಮಾಡಿತ್ತು. ಆದರೆ ಈಗ, ಬೇರೆಯದ್ದೇ ರಾಜಕೀಯ ಮೇಲಾಟ ಶುರುವಾಗಿದೆ. 5.21 ಲಕ್ಷ ಜನಸಂಖ್ಯೆ ಹೊಂದಿರುವ ಮಾಲ್ಡೀವ್ಸ್ಗೆ ಭಾರತ ಪ್ರಮುಖ ಶಸ್ತ್ರಾಸ್ತ್ರ ರಫ್ತು ಮಾಡುವ ದೇಶವಾಗಿತ್ತು. ಇದೇ ಕಾರಣಕ್ಕೆ ಇಬ್ಬರ ಸಂಬಂಧ ಸುಧಾರಣೆಗೆ ಭಾರತವು ಪ್ರಯತ್ನ ಆರಂಭಿಸಿದೆ.
ವಿಶಾಲ ಕಡಲ ಪ್ರದೇಶದಲ್ಲಿ ಗಸ್ತು ನಡೆಸಲು ಮಾಲ್ಡೀವ್ಸ್ಗೆ ಉಡುಗೊರೆ ರೂಪದಲ್ಲಿ ಭಾರತವು 4 ಬೇಹುಗಾರಿಕಾ ವಿಮಾನ ನೀಡಿತ್ತು. ಇವುಗಳನ್ನು ನಿರ್ವಹಿಸಲು ಭದ್ರತಾ ಸಿಬ್ಬಂದಿಯ ಸಣ್ಣ ಘಟಕ ನಿಯೋಜಿಸಿದೆ. ಆದರೆ ಈ ವಿಚಾರ ಮುಂದಿಟ್ಟುಕೊಂಡು ಮುಯಿಝು & ಬೆಂಬಲಿಗರು 'ಇಂಡಿಯಾ-ಔಟ್' ಅಭಿಯಾನ ನಡೆಸಿದ್ದರು. ಇದೀಗ ಅಧಿಕಾರಕ್ಕೆ ಬಂದ ನಂತರ ಅದನ್ನ ನೆರವೇರಿಸೋಕೆ ಮುಂದಾಗಿದ್ದಾರೆ, ಆದರೆ ಭಾರತ ಬೇರೆಯದ್ದೇ ರಣತಂತ್ರ ಹೂಡಿರುವಂತೆ ಕಾಣುತ್ತಿದೆ.












Click it and Unblock the Notifications