ಯುದ್ಧಕ್ಕೆ ಸಿದ್ಧ: ಪಾಕ್ ಸ್ವಾತಂತ್ರ್ಯದಿನದಂದು ಭಾರತಕ್ಕೆ ಇಮ್ರಾನ್ ಖಾನ್ ಬೆದರಿಕೆ!
ಇಸ್ಲಾಮಾಬಾದ್, ಆಗಸ್ಟ್ 14: ಪಾಕಿಸ್ತಾನದ ಸ್ವಾತಂತ್ರ್ಯದಿನ(ಆ.14)ದ ನಿಮಿತ್ತ ತಮ್ಮ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಇಮ್ರಾನ್ ಖಾನ್, ಮಾತಿನುದ್ದಕ್ಕೂ ಭಾರತ ಮತ್ತು ಕಾಶ್ಮಿರವನ್ನೇ ಜಪಿಸಿದರು. "ತಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ" ಎಂದೂ ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಪ್ರಧಾನಿಯ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಅದರದೇ ಆದ ಮಹತ್ವವಿದೆ. ಆದರೆ ದೇಶದ ಆಂತರಿಕ ವಿಷಯಗಳ ಬಗ್ಗೆ ಸೊಲ್ಲೂ ಎತ್ತದ ಇಮ್ರಾನ್ ಖಾನ್ ಕೇವಲ ಭಾರತ ಮತ್ತು ಕಾಶ್ಮೀರದ ಬಗ್ಗೆಯೇ ಮಾತನಾಡಿ ಮಾತು ಮುಗಿಸಿದರು.
"ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ ಕಾಶ್ಮೀರದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ, ನೀವು ಈ ನಿರ್ಧಾರ ತೆಗೆದುಕೊಂಡಿದ್ದರಿಂದ ಕಾಶ್ಮೀರಿಗಳೇನು ಹಿಂಸೆ, ಯುದ್ಧದಿಂದ ಹಿಂದೆ ಸರಿಯುವುದಿಲ್ಲ. ಅವರನ್ನು ನಿಯಂತ್ರಿಸಲು ನಿಮಗೆ ಸಾಧ್ಯವಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಯುದ್ಧಕ್ಕೆ ಸಿದ್ಧ
"ಈಗಾಗಲೇ ನಾವು ಭಾರತದ ನಡೆಯ ವಿರುದ್ಧ ಅಂತಾರಾಷ್ಟ್ರೀಯ ವೇದಿಕೆಯ ಗಮನ ಸೆಳೆಯಲು ಪ್ರಯತ್ನಿಸಿದ್ದೇವೆ. ಜಮ್ಮು ಮತ್ತ ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೂ ಪಾಕಿಸ್ತಾನ ಸುಮ್ಮನಿರುವುದಿಲ್ಲ. ನಮ್ಮ ಸೇನೆ ಸಿದ್ಧವಾಗಿದೆ. ಭಾರತ ಕಾಶ್ಮೀರದಲ್ಲಿ ಏನೇ ಮಾಡಿದರೂ ನಮ್ಮ ಸೇನೆ ತನ್ನ ಕಾರ್ಯಾಚರಣೆ ಆರಂಭಿಸಬೇಕಾಗುತ್ತದೆ. ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೋ, ಹಾಗೆ ನೀಡಬೇಕಾಗುತ್ತದೆ" -ಇಮ್ರಾನ್ ಖಾನ್

ಆರೆಸ್ಸೆಸ್ ಮೇಲೆ ಆರೋಪದ ಸುರಿಮಳೆ
"ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ದುಷ್ಟ ಸಿದ್ಧಾಂತದಿಂದ ಬಂದ ನರೇಂದ್ರ ಮೋದಿ ಅವರ ನಿಜವಾದ ಮುಖವನ್ನು ನಾನು ಬಿಚ್ಚಿಟ್ಟಿದ್ದೇನೆ. ಆರೆಸ್ಸೆಸ್ ಎಂದಿಗೂ ಮುಸ್ಲಿಂ ಸಮುದಾಯವನ್ನು ಒಪ್ಪಿಲ್ಲ. ಅದು 600 ವರ್ಷಗಳ ಕಾಲ ಭಾರತವನ್ನು ಆಳಿದ ಮುಸ್ಲಿಂ ಸಮುದಾಯವನ್ನು ಧಿಕ್ಕರಿಸುತ್ತದೆ. ಕೇವಲ ಮುಸ್ಲಿಮರಷ್ಟೇ ಅಲ್ಲದೆ, ಭಾರತದಲ್ಲಿರುವ ಕ್ರೈಸ್ತರು, ಇನ್ನುಳಿದ ಅಲ್ಪಸಂಖ್ಯಾತರು ಹಿಂದುಗಳಿಗೆ ಸಮನಾಗಿ ನಿಲ್ಲಬಾರದು ಎನ್ನುತ್ತದೆ. ಈ ಬಗ್ಗೆ ಜಿನ್ಹಾ ಭಾರತದಲ್ಲಿರುವ ಮುಸ್ಲಿಮರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು"- ಇಮ್ರಾನ್ ಖಾನ್

ಕಾಶ್ಮೀರದ ರಾಯಭಾರಿ!
"ನಾನು ಕಾಶ್ಮೀರದ ಜನರ ರಾಯಭಾರಿ ಇದ್ದಂತೆ. ಬಿಜೆಪಿ ಅತಿ ದೊಡ್ಡ ತಪ್ಪು ಮಾಡಿದೆ, ಮೋದಿ ಮಹಾ ಪ್ರಮಾದ ಮಾಡಿದ್ದಾರೆ. ಒಂದು ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರೊಳಿಸಿರುವ ಕರ್ಫ್ಯೂವನ್ನು ಹಿಂತೆಗೆದುಕೊಳ್ಳಲಿ. ಆಗ ಗೊತ್ತಾಗುತ್ತದೆ. ಕಾಶ್ಮೀರದ ಜನರು ಬೀದಿಗೆ ಬಂದು ಹೋರಾಡುತ್ತಾರೆ. ಕಾಶ್ಮೀರ ವಿಷಯವನ್ನು ಮೋದಿ ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಮ್ಮ ಪರಮಾಧಿಕಾರ ಅರಿವಿಗೆ ಬರಬೇಕು. ಅದು ಅರಿವಿಗೆ ಬರುವಂತೆ ನಾನು ಕಾಶ್ಮೀರದ ರಾಯಭಾರಿಯಾಗಿ ಅವರಿಗೆ ಅರ್ಥಮಾಡಿಸುತ್ತೇನೆ"- ಇಮ್ರಾನ್ ಖಾನ್

ಭಯ ಹುಟ್ತಿಸಿರುವ ಬಿಜೆಪಿ!
"ಬಿಜೆಪಿ ಕಾಶ್ಮೀರಿಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಆ ಪಕ್ಷದ ನಾಯಕರು ನೀಡುವ ಹೇಳಿಕೆಗಳೇ ನಿದರ್ಶನ. ಭಾರತದ ಸುಪ್ರೀಂ ಕೋರ್ಟ್, ಮಾಧ್ಯಮ ಎಲ್ಲವೂ ಬಿಜೆಪಿ ಮತ್ತು ಆರೆಸ್ಸೆಸ್ ಗೆ ಹೆದರಿ ಕೆಲಸ ಮಾಡುತ್ತಿವೆ"- ಇಮ್ರಾನ್ ಖಾನ್

ನಾನು ಶಾಂತಿ ಬಯಸಿದ್ದೆ!
ನಾನು ಶಾಂತಿ ಬಯಸಿದ್ದೆ. ಆದ್ದರಿಂದಲೇನಾನು ಹಲವು ಭಾರಿ ಭಾರತದೊಮದಿಗೆ ಮಾತುಕತೆಗೆ ಸಿದ್ಧನಿದ್ದೆ. ಎಲ್ಲವನ್ನೂ ಶಾಂತಿಯುತವಾಗಿ, ಮಾತುಕತೆಯಿಂದ ಸರಿಪಡಿಸಿಕೊಳ್ಳೋಣ ಎಂದು ಕೇಳಿದೆ. ಆದರೆ ಭಾರತವೇ ಅದಕ್ಕೆ ಸಿದ್ಧವಿರಲಿಲ್ಲ. ಆದರೆ ಎಲ್ಲವೂ ಶಾಂತಿಯುತವಾಗಿ ಆಗುವುದು ಬಿಜೆಪಿಗೇ ಇಷ್ಟವಿರಲಿಲ್ಲ"-ಇಮ್ರಾನ್ ಖಾನ್












Click it and Unblock the Notifications