ಜೈಲಲ್ಲಿದ್ದಾಗಲೇ ಉಗ್ರ ಲಕ್ವಿ ತಂದೆಯಾಗಿದ್ದು ಹೇಗೆ?
ಇಸ್ಲಾಮಾಬಾದ್, ಡಿ. 19: ಪಾಕಿಸ್ತಾನ ದೇಶವು ಭಾರತ ಸೇರಿದಂತೆ ಜಗತ್ತಿನ ಕಣ್ಣಿಗೆ ಹೇಗೆ ಮಣ್ಣೆರಚಿ ಭಯೋತ್ಪಾದಕರನ್ನು ಸಲಹುತ್ತಿದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇದೆ.
ಭಾರತದವನ್ನು ತಲ್ಲಣಗೊಳಿಸಿದ ಮುಂಬಯಿಯ ಹೋಟೆಲ್ ತಾಜ್ ಹಾಗೂ ಓಬೆರಾಯ್ ಮೇಲೆ ನಡೆದ 26/11 ರ ದಾಳಿಯ ಪ್ರಮುಖ ರೂವಾರಿ ಲಷ್ಕರ್ ಇ ತೋಯಿಬಾ ಮುಖಂಡ ಝಾಕಿ ಉರ್ ರೆಹಮಾನ್ ಲಖ್ವಿ ಜೈಲಿನಲ್ಲಿದ್ದುಕೊಂಡೇ ಮಗುವೊಂದರ ತಂದೆಯಾಗಿದ್ದಾನೆ ಎಂದರೆ ನಂಬುತ್ತೀರಾ? [ಭಾರತದಲ್ಲಿ ರಕ್ತದ ಹೊಳೆ ಹರಿಸುತ್ತೇನೆ ಎಂದಿದ್ದ ಉಗ್ರನಿಗೆ ಜಾಮೀನು]
ಮುಂಬಯಿಯಲ್ಲಿ ನಡೆದ 26/11 ರ ದಾಳಿಗೆ ಸಂಬಂಧಿಸಿದಂತೆ ಲಖ್ವಿ 2009ರಂದು ಬಂಧನಕ್ಕೊಳಗಾಗಿದ್ದ. ಆಗ ಆತನಿಗಿನ್ನೂ ಮಗು ಜನಿಸಿರಲಿಲ್ಲ. ಆದರೆ, 2010ರಲ್ಲಿ ಇನ್ನೂ ಜೈಲಿನಲ್ಲಿದ್ದಾಗಲೇ ತಾನು ತಂದೆಯಾಗಿದ್ದೇನೆಂಬ ಸುದ್ದಿಯನ್ನು ಇತರರೊಂದಿಗೆ ಸಂತಸದಿಂದ ಹಂಚಿಕೊಂಡಿದ್ದ..!
ಪಾಕಿಸ್ತಾನದ ಜಾಣ ಮೌನ : ಇದು ಹೇಗೆ ಸಾಧ್ಯ ಎಂದು ಭಾರತ ಕೇಳಿದ್ದ ಪ್ರಶ್ನೆಗೆ ಪಾಕಿಸ್ತಾನ ಉತ್ತರವನ್ನೇ ನೀಡಿರಲಿಲ್ಲ. ಇಂದಿನವರೆಗೂ ಜಾಣಮೌನಕ್ಕೆ ಮೊರೆ ಹೋಗಿದೆ. ಆದರೆ ಈಗ ಅತ್ಯಂತ ಚಿಕ್ಕ ಕಾರಣಕ್ಕಾಗಿ ಲಖ್ವಿಗೆ ಜಾಮೀನು ನೀಡಲಾಗಿದೆ. [ಮುಗ್ಧ ಮಕ್ಕಳನ್ನು ಹತ್ಯೆಗೈದ ರಕ್ಕಸರು ಇವರೇ]
ಭಾರತ ಮುಂಬಯಿ ದಾಳಿಯ ಪ್ರಮುಖ ಸೂತ್ರಧಾರರಲ್ಲಿ ಓರ್ವ ಎನ್ನಲಾದ ಅಬು ಜುಂದಾಲ್ನನ್ನು ಬಂಧಿಸಿದಾಗ ಅನೇಕ ವಿಷಯಗಳು ಬಯಲಾದವು. ಅಜ್ಮಲ್ ಕಸಬ್ ಕೇವಲ ಉಗ್ರನಾಗಿದ್ದ. ಆತನಿಗೆ ಉಗ್ರರ ಜಾಲದ ಕುರಿತು ಏನೂ ತಿಳಿದಿರಲಿಲ್ಲ. ಆದರೆ, ಅಬು ಜುಂದಾಲ್ ಹಲವು ವಿಷಯಗಳನ್ನು ಬಾಯಿ ಬಿಟ್ಟಿದ್ದಾನೆ.
ಲಖ್ವಿ ಜೈಲಿನಲ್ಲಿದ್ದರೂ ಆತನನ್ನು ತಾನು ಭೇಟಿ ಮಾಡಿದ್ದಾಗಿ ಅಬು ಜುಂದಾಲ್ ಎನ್ಐಎ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ. "2010ರಲ್ಲಿ ಲಖ್ವಿ ಇನ್ನೂ ಪಾಕಿಸ್ತಾನದ ಅಡಿಯಾಲಾ ಜೈಲ್ನಲ್ಲಿದ್ದ. ಆಗ ಆತ ನನಗೆ ಫೋನಾಯಿಸಿದ್ದ ಮತ್ತು ತಾನು ತಂದೆಯಾಗಿರುವುದಾಗಿ ಸಂತೋಷದಿಂದ ಹೇಳಿಕೊಂಡಿದ್ದ. ನನ್ನ ಚಿಕ್ಕ ಪತ್ನಿಗೆ ಜೈಲಿನೊಳಗೆ ಬರಲು ಹಾಗೂ ನನ್ನ ವೈವಾಹಿಕ ಹಕ್ಕು ಚಲಾಯಿಸಲು ಜೈಲಧಿಕಾರಿಗಳು ಅವಕಾಶ ಕೊಟ್ಟಿದ್ದರು ಎಂದಿದ್ದ" ಎಂದು ಅಬು ಜುಂದಾಲ್ ಹೇಳಿದ್ದ. [ಶಮಿವಿಟ್ ನೆಸ್ ಸಂಪರ್ಕದಲ್ಲಿದ್ದ ಎಲ್ಲರ ವಿಚಾರಣೆ]
ಲಖ್ವಿ ನಿಜವಾಗಿಯೂ ಜೈಲಿನಲ್ಲಿದ್ದನೇ? : ಆದರೆ, ನಂತರ ಭಾರತದ ಗುಪ್ತಚರ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಕಂಡುಬಂದಿದ್ದೆಂದರೆ ಲಖ್ವಿ ಜೈಲಿನಲ್ಲಿರಲೇ ಇಲ್ಲ ಎಂಬುದು. ಆತನನ್ನು ಸ್ವತಂತ್ರವಾಗಿ ಸುತ್ತಾಡಲು ಬಿಡಲಾಗಿತ್ತು. ಓರ್ವ ಉಗ್ರನಿಗೆ ನೀಡಬಾರದ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗಿತ್ತು.
ಮುಂಬಯಿ ಮೇಲೆ ನಡೆದ ದಾಳಿಯಲ್ಲಿ ಲಖ್ವಿ ಕೈವಾಡವಿದೆ ಎಂದು ಅಮೆರಿಕ ಕೂಡ ಹೇಳಿತ್ತು. ಭಾರತವೂ ಸಾಕಷ್ಟು ಸಾಕ್ಷ್ಯ ಒದಗಿಸಿತ್ತು. ಆದರೆ, ಪಾಕಿಸ್ತಾನ ಲಖ್ವಿಯನ್ನು ಜೈಲಿನಲ್ಲಿಟ್ಟಿದ್ದು ಕೇವಲ ಆತನ ಮೇಲೆ ನಡೆಯಬಹುದಾದ ದಾಳಿಯಿಂದ ರಕ್ಷಣೆ ಕೊಡಲು ಮಾತ್ರ ಎಂಬುದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.