ಇಸ್ರೇಲ್ ವಿರುದ್ಧ ಯುದ್ಧಕ್ಕೆ ಎಂಟ್ರಿ ಕೊಡುತ್ತಾ ‘ಹಿಜ್ಬುಲ್ಲಾ’?
ಹಮಾಸ್ ಉಗ್ರರು & ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧ, ಈಗ ರಕ್ತದ ನದಿಯನ್ನೇ ಹರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ವಿರುದ್ಧ ಒಂದೊಂದೇ ರಾಷ್ಟ್ರಗಳು ತಿರುಗಿ ಬಿದ್ದು, ಅಟ್ಯಾಕ್ ಮಾಡುತ್ತಿವೆ. ಅದರಲ್ಲೂ 'ಹಿಜ್ಬುಲ್ಲಾ' ಸಂಘಟನೆಯ ಮುಖಂಡನ ಮಾತುಗಳು ಈಗ ಇಸ್ರೇಲ್ ಸೇನೆಯನ್ನ ಮತ್ತಷ್ಟು ಬಡಿದೆಬ್ಬಿಸಿದೆ.
ಆಗಿದ್ದೇನು ಅಂದ್ರೆ, ಹಮಾಸ್ ಉಗ್ರರ ಪರವಾಗಿ ನಿಂತಿರುವ ಲೆಬನಾನ್ ರಾಷ್ಟ್ರದ ಹಿಜ್ಜುಲ್ಲಾ ಬಂಡುಕೋರರ ನಾಯಕ ಈಗ ಸ್ಫೋಟಕ ಹೇಳಿಕೆ ನೀಡಿದ್ದು ಇಸ್ರೇಲ್ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಅಷ್ಟಕ್ಕೂ ಇಸ್ರೇಲ್ ಮತ್ತೆ ಹಮಾಸ್ ಮಧ್ಯೆ ಯುದ್ಧ ಶುರುವಾದ ನಂತರ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಹಸನ್ ಕಾಣಿಸಿಕೊಂಡಿದ್ದಾನೆ. ಹಿಜ್ಜುಲ್ಲಾ ಬಂಡುಕೋರರ ನಾಯಕ ಹಸನ್ ನಸ್ರಲ್ಲಾ ಬಹಿರಂಗವಾಗಿ ಬೆಂಬಲಿಗ ಪಡೆಯನ್ನ ಉದ್ದೇಶಿಸಿ ಮಾತನಾಡುತ್ತ ಇಸ್ರೇಲ್ ವಿರುದ್ಧ ಕೆಂಡ ಕಾರಿದ್ದಾನೆ. ಅಲ್ಲದೆ, ಈ ಸಮಯದಲ್ಲಿ ನಾವು ಸಾಯಲು ಸಿದ್ಧ ಎಂಬ ಸಂದೇಶವನ್ನು ಇಸ್ರೇಲ್ಗೆ ಕೊಟ್ಟಿದ್ದಾನೆ ಹಸನ್ ನಸ್ರಲ್ಲಾ.

ಭಾಷಣ ಕೇಳಲು ಜನಸಾಗರ!
ಹಿಜ್ಜುಲ್ಲಾ ಬಂಡುಕೋರರ ನಾಯಕ ಹಸನ್ ನಸ್ರಲ್ಲಾ ಭಾಷಣ ಕೇಳಲು ಜನಸಾಗರ ನೆರೆದು ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಹಸನ್ ನಸ್ರಲ್ಲಾ ಲೆಬನಾನ್ ಪ್ರದೇಶದಲ್ಲಿ ಈ ರೀತಿಯಾಗಿ ತಮ್ಮ ಬೆಂಬಲಿಗರ ಜೊತೆಗೆ ಬೃಹತ್ & ಬಹಿರಂಗ ಸಭೆ ನಡೆಸಿ ಮಾತನಾಡಿದ್ದಾನೆ. ಆದರೆ ಈ ವಿಡಿಯೋ ಈಗ ಯುದ್ಧದ ಜ್ವಾಲೆಗೆ ಪೆಟ್ರೋಲ್ ಸುರಿದಿದೆ. ಯಾವ ಸಮಯದಲ್ಲಿ ಈ ಹಿಜ್ಜುಲ್ಲಾ ಬಂಡುಕೋರರ ಸಂಘಟನೆ ಇಸ್ರೇಲ್ ವಿರುದ್ಧ ಹಾಗೂ ಹಮಾಸ್ ಪರ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಡುತ್ತೋ ಗೊತ್ತಿಲ್ಲ ಎಂಬಂತಾಗಿದೆ.
ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ!
ಇಡೀ ಜಗತ್ತು ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಯುದ್ಧ ತಣ್ಣಗೆ ಮಾಡೋಕೆ ಯತ್ನಿಸುತ್ತಿದೆ. ಆದ್ರೆ ಹಿಜ್ಜುಲ್ಲಾ ಬಂಡುಕೋರರ ನಾಯಕ ಹಸನ್ ನಸ್ರಲ್ಲಾ ಮಾತ್ರ ಯುದ್ಧ ಮತ್ತಷ್ಟು ತೀವ್ರಗೊಳಿಸುವ ಮಾತನಾಡಿದ್ದಾನೆ. ತನ್ನ ಸಹಸ್ರಾರು ಬೆಂಬಲಿಗರ ಎದುರಲ್ಲೇ ಈ ಘೋಷಣೆ ಮೊಳಗಿಸಿರುವ ಹಸನ್ ನಸ್ರಲ್ಲಾ, ನಾವು ಎಂತಹ ಸಮಯಕ್ಕೂ ಸಿದ್ಧವಾಗಿ ನಿಂತಿದ್ದೇವೆ. ನಮ್ಮ ಜೀವ ಕೊಡಲು ಕೂಡ ನಾವು ಸಿದ್ಧ ಎಂದಿದ್ದಾನೆ. ಹೀಗೆ ಇಸ್ರೇಲ್ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾನೆ ಹಿಜ್ಜುಲ್ಲಾ ಬಂಡುಕೋರರ ನಾಯಕ ಹಸನ್ ನಸ್ರಲ್ಲಾ.
ಪ್ರತಿಕ್ರಿಯೆ ಕೊಡುತ್ತಾ ಇಸ್ರೇಲ್?
ಹಸನ್ ನಸ್ರಲ್ಲಾ ತನ್ನ ವಿರುದ್ಧ ನೀಡಿರುವ ಹೇಳಿಕೆಗೆ ಇಸ್ರೇಲ್ ಉತ್ತರ ನೀಡಿಲ್ಲ. ಆದ್ರೆ ಈ ರೀತಿ ಇಸ್ರೇಲ್ ಸೈಲೆಂಟ್ ಆಗಿ ಇರುವುದನ್ನ ನೋಡಿದ್ರೆ ಗುಟ್ಟಾಗಿ ಹಿಜ್ಬುಲ್ಲಾ ಮೇಲೆ ದಾಳಿ ನಡೆಸಲು ತಂತ್ರ ರೂಪಿಸಿದಂತೆ ಕಾಣುತ್ತಿದೆ. ಮತ್ತೊಂದು ಕಡೆ ಈಗಿನ ಪರಿಸ್ಥಿತಿ ನೋಡಿದರೆ ಇಸ್ರೇಲ್, ಹಮಾಸ್ ಉಗ್ರರ ಜೊತೆ ಹಿಜ್ಬುಲ್ಲಾ ಸಂಘಟನೆಯನ್ನೂ ಎದುರು ಹಾಕಿಕೊಂಡು ನಿಲ್ಲುವ ಸಾಧ್ಯತೆ ತುಂಬಾ ಕಡಿಮೆ. ಇದೇ ಕಾರಣಕ್ಕೆ ಹಿಜ್ಬುಲ್ಲಾ ಸಂಘಟನೆ ನೇರವಾಗಿಯೇ ಯುದ್ಧದ ಅಖಾಡಕ್ಕೆ ಬರುವ ತನಕ ಇಸ್ರೇಲ್ ಕಾದು ನೋಡುವ ಸಾಧ್ಯತೆ ದಟ್ಟವಾಗಿದೆ.

ಅನ್ನ, ನೀರಿಗೂ ತೀವ್ರ ಪರದಾಟ
ಇದಿಷ್ಟೂ ಯುದ್ಧದ ರಾಜಕೀಯ ಮುಖವಾಗಿದ್ದರೆ, ಗಾಜಾಪಟ್ಟಿ ಮೇಲಿನ ದಾಳಿಯ ಬಗ್ಗೆ ಮಾನವೀಯ ಮುಖವೇ ಬೇರೆ ಇದೆ. ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವೆ ಇದೀಗ ನಡೆಯುತ್ತಿರುವ ಯುದ್ಧ ತೀವ್ರವಾಗುತ್ತಿರುವ ಕಾರಣ, ಗಾಜಾಪಟ್ಟಿ ಪೀಸ್ ಪೀಸ್ ಆಗುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಜನರಿಗೆ ಅನ್ನ, ಆಹಾರ ಸಿಗುತ್ತಿಲ್ಲ.
ಹೀಗೆ ಪರಿಸ್ಥಿತಿ ವ್ಯತಿರಿಕ್ತವಾಗಿರುವ ವೇಳೆ, ಇಸ್ರೇಲ್ ನಡೆ ಬಗ್ಗೆ ಗಾಜಾಪಟ್ಟಿಯಲ್ಲಿ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಆಹಾರ ಹಾಗೂ ಔಷಧ ಸಾಮಗ್ರಿ ಹೊತ್ತ 260ಕ್ಕೂ ಹೆಚ್ಚು ಲಾರಿಗಳು, ಗಾಜಾಪಟ್ಟಿಯ ಪ್ರವೇಶಿಸಲು ಇಸ್ರೇಲ್ ಅನುಮತಿ ನೀಡಿದೆ. ಆದರೆ ಕೇವಲ ಇಷ್ಟು ಸಾಮಾಗ್ರಿ ಅಲ್ಲಿನ ಜನರಿಗೆ ಸಾಲುವುದಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆರೋಪಕ್ಕೆ ಇಸ್ರೇಲ್ ಮಾತ್ರ ಕೇರ್ ಮಾಡುತ್ತಿಲ್ಲ. ಹೀಗಾಗಿ ತಿಕ್ಕಾಟವು ಮತ್ತಷ್ಟು ಹೆಚ್ಚಾಗಿ, 3ನೇ ಮಹಾಯುದ್ಧ ನಡೆಯುವ ಸಾಧ್ಯತೆಗೆ ಬಲ ನೀಡುತ್ತಿದೆ.












Click it and Unblock the Notifications