ನಿರ್ಜೀವ ಕಂದನಿಗೆ ಲಾಲಿ ಹಾಡುತ್ತಿರುವ ರೊಹಿಂಗ್ಯಾ ತಾಯಿ ಈಕೆ!
ಜೀವವಿಲ್ಲದ ಕಂದನ ದೇಹವನ್ನು ಎದೆಗಪ್ಪಿಕೊಂಡು ಲಾಲಿ ಹಾಡುತ್ತಿರುವ ಮುಗ್ಧ ಅಮ್ಮನ ಚಿತ್ರ ಒಮ್ಮೆ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ. ಆದರೆ ಇಂಥ ಚಿತ್ರಗಳು ರೊಹಿಂಗ್ಯಾ ಮುಸಲ್ಮಾನರ ಪಾಲಿಗೆ ಪ್ರತಿದಿನದ ದುಸ್ವಪ್ನಗಳು ಎಂದರೆ ನಂಬಲೇಬೇಕು!
ಮಯನ್ಮಾರಿನಿಂದ ರೊಹಿಂಗ್ಯಾ ಮಸ್ಲಿಮರ ಕುಟುಂಬವನ್ನು ಬಾಂಗ್ಲಾದೇಶಕ್ಕೆ ಸಾಗಿಸುತ್ತಿದ್ದ ದೋಣಿಯೊಂದು ಮುಳುಗಿದ ಪರಿಣಾಮ ಒಂದು ತಿಂಗಳ ಮಗು ಅಸುನೀಗಿದೆ. ಅಬ್ದುಲ್ ಮಸೂದ್ ಎಂಬ ಈ ಒಂದು ತಿಂಗಳ ಶಿಶು- ಸರ್ಕಾರ, ರಾಜಕೀಯ, ಅಮಾನವೀಯತೆಗಳೆಲ್ಲದರ ನಡುವಲ್ಲಿ ಬಲಿಪಶುವಾಗಿ ತನ್ನ ಬದುಕಿನ ಪಯಣ ಮುಗಿಸಿದ್ದಾನೆ! ಇನ್ನೇನಿದ್ದರೂ ಅಲ್ಲಿ, ಆತನ ತಾಯಿಯ ಕಣ್ಣೀರು, ರೊಹಿಂಗ್ಯಾ ಮುಸ್ಲಿಮರ ಕೊನೆಯಿಲ್ಲದ ಸಂಕಟವಷ್ಟೇ!

ಲಕ್ಷಾಂತರ ರೊಹಿಂಗ್ಯಾ ಮುಸ್ಲಿಮರ ದುಸ್ಥಿತಿಯ ಪ್ರತಿನಿಧಿಯಾದ ಈ ತಾಯಿ ತುಟಿಕಚ್ಚಿಹಿಡಿದ ಅಳು ಮಯನ್ಮಾರ್ ಸರ್ಕಾರಕ್ಕೆ ಕಾಣುವುದು ಯಾವಾಗಲೋ! ಮಯನ್ಮಾರ್ ಸರ್ಕಾರ ಅಲ್ಲಿನ ಪೌರತ್ವವನ್ನೂ, ಸರ್ಕಾರದ ಸೌಲಭ್ಯಗಳನ್ನು ರೊಹಿಂಗ್ಯಾ ಮುಸ್ಲಿಮರಿಗೆ ನೀಡಲು ಒಪ್ಪುತ್ತಿಲ್ಲ. ಇಲ್ಲಿನ ಬಹುಸಂಖ್ಯಾತ ಬೌದ್ಧರ ಪ್ರಕಾರ, "ರೊಹಿಂಗ್ಯಾ ಮುಸ್ಲಿಮರು ಮಯನ್ಮಾರ್ ನವರಲ್ಲ. ಆದ್ದರಿಂದ ಅವರಿಗೆ ತಮ್ಮ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡುವುದಕ್ಕೆ ಸಾಧ್ಯವಿಲ್ಲ." ಈ ಕಾರಣದಿಂದಲೇ ಸ್ವಂತದ್ದೆಂಬ ತುಂಡು ಜಾಗವೂ ಇಲ್ಲದೆ ಅಲೆಮಾರಿಗಳಾಗಿಯೇ ಬದುಕು ಮುಗಿಸಬೇಕಾದ ಪಾಡು ರೊಹಿಂಗ್ಯಾ ಮುಸ್ಲಿಮರದು.
ರೊಹಿಂಗ್ಯಾ ಮುಸ್ಲಿಮರ ಮೇಲೆ ಮಯನ್ಮಾರ್ ಸೇನೆಯಿಂದ ನಿರಂತರವಾಗಿ ಹಿಂಸೆ, ಅತ್ಯಾಚಾರ ನಡೆಯುತ್ತಲೇ ಇದೆ ಎಂಬುದು ಮಾನವ ಹಕ್ಕು ಪ್ರತಿಪಾದಕರ ದೂರು. ಈ ವರ್ಷದ ಆಗಸ್ಟ್ 15 ರಿಂದೀಚೆಗೆ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದತ್ತ ನಿರಾಶ್ರಿತರಾಗಿ ಬರುತ್ತಿದ್ದಾರೆ. ಇವರ ದಯನೀಯ ಪರಿಸ್ಥಿತಿಯನ್ನು ನೆನೆದು, ಭಾರತ ಸೇರಿದಂತೆ ಉಳಿದ ದೇಶಗಳು ಮಾನವೀಯತೆಯಿಂದ ಅವರಿಗೆ ಆಶ್ರಯ ನೀಡುವುದಕ್ಕೂ ಕಷ್ಟ. ಏಕೆಂದರೆ ಅವರಿಂದ ದೇಶದ ಭದ್ರತೆಗೆ ಅಪಾಯವಿರುವುದನ್ನು ಅಲ್ಲಗಳೆಯುವಂತಿಲ್ಲ.
ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ತಮ್ಮದೇ ನೆಲದ ರೊಹಿಂಗ್ಯಾ ಮುಸ್ಲಿಮರ ಬಗೆಗೇಕೆ ಇಂಥ ಕಠಿಣ ನಿಲುವು ತಾಳಿದ್ದಾರೆ ಎಂಬ ಪ್ರಶ್ನೆಯೂ ಎಲ್ಲೆಡೆಯಿಂದ ಕೇಳಬರುತ್ತಿದೆ. ಮಯನ್ಮಾರ್ ಸರ್ಕಾರಕ್ಕೆ ಹೆದರಿ ಕದ್ದು-ಮುಚ್ಚಿ ಬೇರೆ ಬೇರೆ ದೇಶಕ್ಕೆ ವಲಸೆ ಹೋಗುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗೆ ಮುಸ್ಲಿಂ ದೇಶಗಳೂ ಆಶ್ರಯ ನೀಡುವುದಕ್ಕೆ ಹಿಂದುಮುಂದು ನೋಡುತ್ತಿರುವುದು ಮತ್ತೊಂದು ಅಚ್ಚರಿಯ ಸಂಗತಿ.












Click it and Unblock the Notifications