ಪಾಕಿಸ್ತಾನದಲ್ಲಿ ಹಿಂಸೆ, ಜಾಗತಿಕ ಮುಖಭಂಗ! ದುರ್ಬುದ್ಧಿ ತಿರುಗುಬಾಣವಾಯ್ತಾ?
ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆ ಮಾತು ಪಾಕಿಸ್ತಾನಕ್ಕೆ ಅಕ್ಷರಶಃ ಅಪ್ಲೈ ಆಗುತ್ತಿದೆ. ಇಷ್ಟುದಿನ ತನ್ನ ಮಡಿಲಲ್ಲೇ ಇಟ್ಟುಕೊಂಡು ಸಾಕಿದ್ದ ಮೂಲಭೂತ ವಾದಿಗಳು ಪಾಕಿಸ್ತಾನ ಸರ್ಕಾರಕ್ಕೆ ತಿರುಬಾಣವಾಗಿದ್ದಾರೆ. ಕಂಡ ಕಂಡಲ್ಲಿ ಬೆಂಕಿ ಇಡುತ್ತಿದ್ದಾರೆ, ಪೊಲೀಸರು ಹಾಗೂ ಸೈನಿಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಉಗ್ರರ ಸ್ವರ್ಗ ಪಾಕ್ ಮಾನವರ ಪಾಲಿಗೆ ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ.
ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಅದೊಂದು ವ್ಯಂಗ್ಯಚಿತ್ರ. ಅಂದ ಹಾಗೆ ಪ್ರವಾದಿ ಮೊಹಮ್ಮದರ ವ್ಯಂಗ್ಯ ಚಿತ್ರವನ್ನ ಪ್ರದರ್ಶನ ಮಾಡಿದ್ದ ಫ್ರೆಂಚ್ ವ್ಯಂಗ್ಯಚಿತ್ರಕಾರನ ವಿರುದ್ಧ ಪಾಕ್ನಲ್ಲಿ ಹೋರಾಟ ಭುಗಿಲೆದ್ದಿತ್ತು. ಆದ್ರೆ ಪ್ರತಿಭಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮುಸ್ಲಿಂ ನಾಯಕನನ್ನ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಳಿಕ ಹೋರಾಟ ತೀವ್ರ ಸ್ವರೂಪ ಪಡೆದಿದೆ.
ಲಕ್ಷಾಂತರ ಪಾಕ್ ಪ್ರಜೆಗಳು ಬೀದಿಗಿಳಿದು ಪಾಕ್ ಪೊಲೀಸರು ಹಾಗೂ ಫ್ರೆಂಚರ ವಿರುದ್ಧ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇಮ್ರಾನ್ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಹಿಂಸೆ ನಿಯಂತ್ರಿಸಲು ಆಗುತ್ತಿಲ್ಲ. ಹೀಗಾಗಿ ಮೂಲಭೂತ ವಾದಿ ಸಂಘಟನೆ 'ತೆಹ್ರಿಕ್ ಇ ಲಬಾಯಿಕ್'ನ ಬ್ಯಾನ್ ಮಾಡಿದೆ ಇಮ್ರಾನ್ ಖಾನ್ ಸರ್ಕಾರ.

'ಪಾಕ್ನಿಂದ ಮೊದಲು ಎಸ್ಕೇಪ್ ಆಗಿ'
ಪಾಕಿಸ್ತಾನದಲ್ಲಿ ಫ್ರೆಂಚರ ವಿರುದ್ಧ ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಅಲರ್ಟ್ ಆಗಿರುವ ಫ್ರಾನ್ಸ್ ಸರ್ಕಾರ ತನ್ನ ಪ್ರಜೆಗಳಿಗೆ ತಕ್ಷಣ ಪಾಕಿಸ್ತಾನದಿಂದ ಹೊರಟು ಬರಲು ಸೂಚಿಸಿದೆ. ಈಗಾಗಲೇ ಇಸ್ಲಾಂ ದೇಶಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿತ್ತು ಫ್ರಾನ್ಸ್. ಈ ಹೊತ್ತಲ್ಲೇ ಫ್ರೆಂಚರ ವಿರುದ್ಧ ಪಾಕ್ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಇದು ಪಾಕ್ ಮತ್ತು ಫ್ರಾನ್ಸ್ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಆದರೆ ಪಾಕ್ ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದೆ.

ಭಾರತದ ಯಾತ್ರಿಕರಿಗೂ ಸಂಕಷ್ಟ
ಪಾಕ್ನಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಹಿಂದೆ ಮೂಲಭೂತ ವಾದಿ ಸಂಘಟನೆ 'ತೆಹ್ರಿಕ್ ಇ ಲಬಾಯಿಕ್' ಕೈವಾಡ ಇದೆ ಎಂಬ ಆರೋಪವಿದೆ. ಇದೇ ಸಂಘಟನೆ ಸದಸ್ಯರು ಓರ್ವ ಪಾಕ್ ಪೊಲೀಸ್ ಅಧಿಕಾರಿಯನ್ನೂ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ ಯಾತ್ರೆಗೆಂದು ತೆರಳಿದ್ದ ಭಾರತದ ಸಿಖ್ ಯಾತ್ರಿಕರು ಗಲಭೆ ನಡುವೆ ಸಿಲುಕಿ ಪರದಾಡುತ್ತಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಹಿಡಿತಕ್ಕೆ ಸಿಗುವ ಲಕ್ಷಗಳು ಕಾಣುತ್ತಿಲ್ಲ. ಹೀಗಾಗಿ ಪಾಕ್ ಸೈನಿಕರು ಹಾಗೂ ಪಾಕಿಸ್ತಾನ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಶತಪ್ರಯತ್ನ ಮುಂದುವರಿಸಿದ್ದಾರೆ.

ಪಾಕ್ ಪ್ರಜೆಗಳ ಪರದಾಟ
ಪಾಕಿಸ್ತಾನದಲ್ಲಿ ಪರಿಸ್ಥಿತಿ ಮೊದಲೇ ಹದಗೆಟ್ಟು ಹೋಗಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರವಂತೂ ಅಲ್ಲಿ ಜನರು ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟಕರವಾಗಿದೆ. ಪಾಕಿಸ್ತಾನಿ ನಾಯಕರು ಮಾಡಿಕೊಂಡಿರುವ ತಪ್ಪಿಗೆ ಅಲ್ಲಿನ ಪ್ರಜೆಗಳು ನಿತ್ಯ ನರಕ ಕಾಣುತ್ತಿದ್ದಾರೆ. ಒಂದು ಕಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಗ್ರರ ಉಪಟಳ ಹಾಗೂ ಸರ್ಕಾರದ ಕೆಲಸದಲ್ಲಿ ಅಡ್ಡ ಬರುತ್ತಿರುವ 'ಐಎಸ್ಐ' ಏಜೆಂಟರುಗಳಿಂದ ಇಡೀ ಪಾಕ್ ದಿವಾಳಿಯಾಗಿದೆ. ಕೋಟಿ ಕೋಟಿ ಜನರು ತುತ್ತು ಅನ್ನಕ್ಕೂ ನರಳಾಡುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲೇ ಹಿಂಸಾಚಾರ ಭುಗಿಲೆದ್ದಿರುವುದು ಆತಂಕ ಹೆಚ್ಚಿಸಿದೆ.












Click it and Unblock the Notifications