ಸಕ್ರಿಯ ರಾಜಕಾರಣಕ್ಕೆ ಮರಳಿದ ಮಾಜಿ ಮಿಲಿಟರಿ ಸರ್ವಾಧಿಕಾರಿ ಮುಷರಫ್
ಇಸ್ಲಾಮಾಬಾದ್, ಅಕ್ಟೋಬರ್ 8: "ಪಾಕಿಸ್ತಾನದ ರಕ್ತದಲ್ಲಿ ಕಾಶ್ಮೀರ ಇದೆ" ಎಂದು ಸೋಮವಾರ ಹೇಳುವ ಮೂಲಕ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಸಕ್ರಿಯ ರಾಜಕಾರಣಕ್ಕೆ ತಾವು ಹಿಂತಿರುಗಿರುವುದನ್ನು ಖಾತ್ರಿ ಪಡಿಸಿದ್ದಾರೆ. ಜನರಲ್ (ನಿವೃತ್ತ) ಮುಷರಫ್ ಸದ್ಯಕ್ಕೆ ದುಬೈನಲ್ಲಿ ಇದ್ದಾರೆ.
ಕಾರ್ಗಿಲ್ ಬಿಕ್ಕಟ್ಟು ವಿಚಾರವನ್ನು ಪ್ರಸ್ತಾಪಿಸಿರುವ ಮುಷರಫ್, ಪಾಕಿಸ್ತಾನದ ಕಡೆಯಿಂದ ಶಾಂತಿ ಸ್ಥಾಪನೆಗಾಗಿ ಪದೇ ಪದೇ ಪ್ರಯತ್ನಿಸುತ್ತಿದ್ದರೂ ಭಾರತವು ಆತಂಕ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎಪಿಎಂ ಎಲ್) ಎಂಬ ರಾಜಕೀಯ ಪಕ್ಷದ ಸ್ಥಾಪಕರೂ ಆಗಿರುವ ಎಪ್ಪತ್ತಾರು ವರ್ಷದ ಮುಷರಫ್, ಪಕ್ಷ ಸ್ಥಾಪನೆ ದಿನಾಚರಣೆ ಪ್ರಯುಕ್ತ ದುಬೈನಿಂದ ಫೋನ್ ನಲ್ಲಿ ಇಸ್ಲಾಮಾಬಾದ್ ನಲ್ಲಿ ಇರುವ ಬೆಂಬಲಿಗರ ಜತೆ ಭಾನುವಾರ ಮಾತನಾಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಕಳೆದ ವರ್ಷ ರಾಜಕೀಯ ಚಟುವಟಿಕೆಗಳಿಂದ ಮುಷರಫ್ ದೂರ ಉಳಿದಿದ್ದರು.

ಯಾವುದೇ ವಿಚಾರ ಆದರೂ ಸರಿ, ನಾವು ಕಾಶ್ಮೀರಿಗಳ ಜತೆ ನಿಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ. ಶಾಂತಿ ಸ್ಥಾಪನೆ ವಿಚಾರದಲ್ಲಿ ಪಾಕಿಸ್ತಾನದ ಆಶಯವನ್ನು ದೌರ್ಬಲ್ಯ ಎಂದುಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಗ್ಯ್ ಸುಧಾರಣೆ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಮರಳಲು ಮುಷರಫ್ ಆಲೋಚನೆ ಮಾಡಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
1999ರಿಂದ 2008ರ ತನಕ ಪಾಕಿಸ್ತಾನದಲ್ಲಿ ಮುಷರಫ್ ಆಳ್ವಿಕೆ ನಡೆಸಿದ್ದರು. ಪಾಕಿಸ್ತಾನದ ಮಾಜಿ ಪ್ರಧಾನಿ ಬೆನ್ ಜಿರ್ ಭುಟ್ಟೋ ಹಾಗೂ ಮೌಲ್ವಿ ಹತ್ಯೆ ಪ್ರಕರಣವು ಮುಷರಫ್ ಮೇಲಿದೆ.












Click it and Unblock the Notifications